ನನ್ನ ಸಾವು ದೇವೇಗೌಡರ ಕೈಯಲ್ಲಿ ಇಲ್ಲ!

ಬೆಂಗಳೂರಿನಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಮಹೋತ್ಸವ' ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ್ ಖೇಣಿ, ತಾವು ಮಾಡುವ ಒಳ್ಳೆಯ ಕೆಲಸಕ್ಕೆ ದೇವೇಗೌಡ ಕುಟುಂಬ ಬೆದರಿಕೆ ಮತ್ತು ಅಡ್ಡಗಾಲು ಹಾಕುತ್ತಿತ್ತು. ಅದನ್ನು ಲೆಕ್ಕಿಸದೆ ನೈಸ್ ಸಂಸ್ಥೆ ಕಟ್ಟಿದ್ದೇನೆ ಎಂದರು.
ನನಗೆ ಸದಾ ಗೌಡರ ಕುಟುಂಬ ಬೆದರಿಕೆ ಹಾಕುತ್ತದೆ. ನನ್ನ ಸಾವು ದೇವೇಗೌಡ ಕೈಯಲ್ಲಿಲ್ಲ, ಬದಲಾಗಿ ದೇವರ ಕೈಯಲಿದೆ. ನೈಸ್ ರಸ್ತೆ ನಿರ್ಮಿಸಿ ಜನರಿಗೆ ಉಪಯೋಗ ಮಾಡಿಕೊಟ್ಟಿದ್ದೇನೆ ಎಂದು ಖೇಣಿ ಹೇಳಿದರು.
ರೈತರ ಹೆಸರಿನಲ್ಲಿ ದೇವೇಗೌಡರ ಕುಟುಂಬ ಭೂಮಿ ಕಬಳಿಸುತ್ತಿದೆ. ತಾವು ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ಸದಾ ಗೌಡರ ಕುಟುಂಬ ಅಡ್ಡಗಾಲು ಹಾಕುತ್ತಿದೆ. ಜನಪರ ಮತ್ತು ಅಭಿವೃದ್ಧಿ ಕೆಲಸಗಳನ್ನು ಗೌಡರು ವಿರೋಧಿಸುತ್ತಾರೆ ಎಂದು ಖೇಣಿ ಆರೋಪಿಸಿದರು.
ಅವರು ಸಂಚರಿಸುತ್ತಾರೆ : ತಮ್ಮ ವಿರುದ್ಧ ಕಿಡಿ ಕಾರುವ ದೇವೇಗೌಡ ಮತ್ತು ಅವರ ಕುಟುಂಬ ಸದಸ್ಯರು ತಾವು ನಿರ್ಮಿಸಿದ ನೈಸ್ ರಸ್ತೆಯನ್ನೇ ಬಳಸುತ್ತಾರೆ. ದೇವೇಗೌಡರ ಮೊಮ್ಮಗ ನಿಖೀಲ್ ಗೌಡ ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಕಾರ್ ನಲ್ಲಿ ನೈಸ್ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂದು ಖೇಣಿ ವ್ಯಂಗ್ಯವಾಡಿದರು.
ಬೆದರಿಕೆಗೆ ಬಗ್ಗಲ್ಲ : ಒಳ್ಳೆಯ ಕೆಲಸ ಮಾಡುವವರ ಮೇಲೆ ದೇವರ ಕೃಪೆ ಇದೆ. ಆದ್ದರಿಂದ ಯಾವುದೇ ಬೆದರಿಕೆಗೂ ಬಗ್ಗದೆ, ನಿರ್ಭೀತಿಯಿಂದ ಕೆಲಸ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿಗಾಗಿ ಮತ್ತಷ್ಟು ಜನಪರ ಕಾರ್ಯ ಮಾಡುತ್ತೇನೆ ಎಂದು ಖೇಣಿ ಭರವಸೆ ನೀಡಿದರು. (ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಖೇಣಿ)
ಬೀದರ್ ಮಾದರಿ ಆಗಲಿದೆ : ಎರಡು ವರ್ಷಗಳಲ್ಲಿ ತಮ್ಮ ಬೀದರ್ ದಕ್ಷಿಣ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಪರಿವರ್ತಿಸುತ್ತೇನೆ ಎಂದು ಖೇಣಿ ಹೇಳಿದರು. ಕಳೆದ 50 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ.
ಬೀದರ್ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ತಮ್ಮ ಗುರಿ. ಅದಕ್ಕಾಗಿ ಎರಡು ವರ್ಷ ಸಾಕು. ಎರಡು ವರ್ಷದಲ್ಲಿ ಕ್ಷೇತ್ರ ಅಭಿವೃದ್ಧಿ ಮಾಡಲು ವಿಫಲವಾದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಖೇಣಿ ಘೋಷಿಸಿದರು.












Click it and Unblock the Notifications