ತುಮಕೂರು : ಚಿರತೆ ಹಿಡಿದು ನಿಟ್ಟುಸಿರು ಬಿಟ್ಟ ಅಧಿಕಾರಿಗಳು

ಮಂಗಳವಾರ ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬನ್ನೇರುಘಟ್ಟ ವನ್ಯಜೀವಿಧಾಮದ ಅಧಿಕಾರಿಗಳು ಅರವಳಿಕೆ ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಚಿರತೆ ಆರೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಏನು : ಸೋಮವಾರ ತಡರಾತ್ರಿ ಕುಣಿಗಲ್ ತಾಲೂಕಿನ ನಗರಹಳ್ಳಿಯ ಭಾಸ್ಕರಾಚಾರ್ಯ ಅವರ ಮನೆಯ ಕೊಟ್ಟಿಗೆಗೆ ಚಿರತೆ ನುಗ್ಗಿತ್ತು. ಒಂದು ಕುರಿ ಮತ್ತು ನಾಯಿಯನ್ನು ಕಚ್ಚಿಗಾಯಗೊಳಿಸಿತು. ಕೊಟ್ಟಿಗೆಯಲ್ಲಿನ ಸದ್ದು ಕೇಳಿ ಎಚ್ಚರವಾದ ಮನೆಯವರು, ಕೊಟ್ಟಿಗೆ ಬಾಗಿಲನ್ನು ಮುಚ್ಚಿದರು.
ಇದರಿಂದ ಕಂಗಾಲಾದ ಚಿರತೆ ಮನೆಯೊಳಗೆ ಸೇರಿಕೊಂಡಿತು. ಮನೆಗೆ ಬೀಗ ಹಾಕಿ, ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದರು. ಮನೆಯ ಎಲ್ಲಾ ಬಾಗಿಲು ಮುಚ್ಚಿದ್ದರಿಂದ ಚಿರತೆ ಮನೆಯಿಂದ ಹೊರಬಾರಲಾರದೇ ರಾತ್ರಿಯಿಡಿ ಮನೆಯಲ್ಲಿಯೇ ಸುತ್ತಾಡುತ್ತಿತ್ತು.
ಮನೆಯವರು ರಾತ್ರಿ ಪೂರ್ತಿ ನಿದ್ದೆಬಿಟ್ಟು ಚಿರತೆಗಾಗಿ ಕಾವಲು ಕಾದರು. ಬೆಳಗ್ಗೆ ಧಾವಿಸಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯಲು ನಡೆಸಿದ ಪ್ರಯತ್ನಗಳು ವಿಫಲವಾದವು. ಸುಮಾರು 7 ವರ್ಷದ ಚಿರತೆ ಅರಣ್ಯಾಧಿಕಾರಿಗಳ ಕೈಗೆ ಸಿಗಲಿಲ್ಲ.
ಅಂತಿಮವಾಗಿ ಬನ್ನೇರುಘಟ್ಟ ವನ್ಯಜೀವಿಧಾಮದ ಅಧಿಕಾರಿಗಳ ಸಹಾಯ ಕೋರಿದರು. ಅರವಳಿಕೆ ಮತ್ತು ಬೋನಿನೊಂದಿಗೆ ಆಗಮಿಸಿದ ಅಧಿಕಾರಿಗಳು, ಅರವಳಿಕೆ ಮದ್ದು ನೀಡಿ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದರು. ಬನ್ನೇರುಘಟ್ಟಕ್ಕೆ ಚಿರತೆಯನ್ನು ತೆಗೆದುಕೊಂಡು ಹೋಗಲಾಯಿತು.
ಸುಮಾರು ಆರು ಗಂಟೆಗಳ ಕಾರ್ಯಾಚರಣೆ ನಂತರ ಚಿರತೆಯನ್ನು ಸೆರೆಹಿಡಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು. ಅರಣ್ಯಾಧಿಕಾರಿಗಳ ಆಪರೇಷನ್ ಚೀತಾ ಯಶಸ್ವಿಯಾಗಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications