ಎಂಎಲ್ಎಗೆ ಬೆದರಿಕೆ : ವಿದ್ಯಾರ್ಥಿ ಬಂಧನ
ಗುಜರಾತ್ ನ ಬಾಪುನಗರದ ಬಿಜೆಪಿ ಶಾಸಕ ಜಗರೂಪ್ ಸಿನ್ಹಾ ರಜಪೂತ್ ಅವರಿಗೆ ಬಂಧಿತ ಇಂಜಿನಿಯರಿಂಗ್ ವಿದ್ಯಾರ್ಥಿ ಮಹೇಶ್ ಅಂಬಾರೆ ಕರೆ ಮಾಡಿ, 10 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಸಂಬಂಧ ಶಾಸಕ ಸಿನ್ಹಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಕುರಿತು ತನಿಖೆ ನಡೆಸಿದ, ಪೊಲೀಸರು ಬ್ಯಾಂಕ್ ಖಾತೆಯ ವಿವರ ಪಡೆದು, ಆರೋಪಿಯನ್ನು ಭಾನುವಾರ ರಾತ್ರಿ, ಗುರ್ಗಾಂವ್ ನಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬ್ಯಾಂಕ್ ಖಾತೆ ಕೊಟ್ಟು ಕೆಟ್ಟ : ವಿದ್ಯಾರ್ಥಿ ಮಹೇಶ್ 15 ದಿನಗಳಲ್ಲಿ ಪದೇ ಪದೇ ಶಾಸಕ ಸಿನ್ಹಾ ಅವರಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಹಣವನ್ನು ಬ್ಯಾಂಕ್ ಖಾತೆಗೆ ಹಾಕುವಂತೆ ಖಾತೆಯ ಸಂಖ್ಯೆ ನೀಡಿದ್ದಾನೆ.
ಬ್ಯಾಂಕ್ ಖಾತೆಯ ಪರಿಶೀಲನೆ ನಡೆಸಿದ ಪೊಲೀಸರು, ಇದು ಬೆಂಗಳೂರಿನ ಖಾಸಗಿ ಬ್ಯಾಂಕ್ ನ ಖಾತೆಯಾಗಿದೆ ಎಂದು ಪತ್ತೆ ಹಚ್ಚಿದರು. ನಂತರ ಖಾತೆದಾರನ ವಿವರ ಪಡೆದು. ಕರ್ನಾಟಕ ಪೊಲೀಸರ ಸಹಾಯದಿಂದ ಮಹೇಶ್ ನನ್ನು ಗುರ್ಗಾಂವ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು, ಆದ್ದರಿಂದ ಶಾಸಕ ಸಿನ್ಹಾ ಅವರ ವಿರುದ್ಧದ ಪ್ರಕರಣ ಹಿಂಪಡೆದಿದ್ದಾರೆ. ಪೊಲೀಸರು ಕೇವಲ ಎಚ್ಚರಿಕೆ ನೀಡಿ ಮಹೇಶ್ ರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬೇರೆ ರಾಜ್ಯಗಳ ಶಾಸಕರಿಗೂ ಈತ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಳ್ಳಾರಿಯ ಖಾಸಗಿ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಮಹೇಶ್ ನೀಡಿದ್ದಾನೆ. ಬಳ್ಳಾರಿ ಪೊಲೀಸರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಬೆದರಿಕೆ ಪ್ರಕರಣದ ಹಿಂದೆ ಯಾರು ಅಡಗಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.