ಬಿಜೆಪಿ ಬಿಕ್ಕಟ್ಟು ಶಮನ : ಅಡ್ವಾಣಿ ರಾಜೀನಾಮೆ ವಾಪಸ್

ಮಂಗಳವಾರ ಬೆಳಗ್ಗೆ, ಪಕ್ಷದ ಹಿರಿಯ ನಾಯಕ ಮತ್ತು ಅಡ್ವಾಣಿ ಅವರ ಆಪ್ತರಾಗಿರುವ ಜಸ್ವಂತ್ ಸಿಂಗ್, ಅಡ್ವಾಣಿ ಅವರನ್ನು ಭೇಟಿಯಾಗಿ ಅವರ ಮನವೊಲಿಕೆಗೆ ಪ್ರಯತ್ನಿಸಿದರು. ಆರ್ಎಸ್ಎಸ್ ಮತ್ತು ಬಿಜೆಪಿಯ ಹಲವು ಮುಖಂಡರು ಅಡ್ವಾಣಿ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.
ಎಲ್ಲಾ ನಾಯಕರು ಮಾಡಿದ ಸಂಧಾನ ಯಶಸ್ವಿಯಾಗಿದ್ದು, ಅಡ್ವಾಣಿ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಪಕ್ಷದ ಪ್ರಮುಖ ನಿರ್ಧಾರಗಳನ್ನು ಅಡ್ವಾಣಿ ಅವರ ಒಪ್ಪಿಗೆ ಪಡೆದು ತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ನಾಯಕರು ನಿರ್ಣಯ ಕೈಗೊಂಡಿದ್ದರು.
ಮಂಗಳವಾರ ಸಂಜೆ ಅಡ್ವಾಣಿ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಅಡ್ವಾಣಿ ಅವರು ಪಕ್ಷದ ಹುದ್ದೆಗಳಿಗೆ ನೀಡಿರುವ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧರಾಗಿ, ಅಡ್ವಾಣಿ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದು ಹೇಳಿದರು.
ಪಕ್ಷದ ಎಲ್ಲಾ ನಾಯಕರು ಅಡ್ವಾಣಿ ಅವರ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಂಡಿದ್ದೆವು. ಪಕ್ಷದ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಅಡ್ವಾಣಿ ಹೇಳಿದ್ದಾರೆ. ಆದ್ದರಿಂದ ರಾಜೀನಾಮೆಯನ್ನು ಹಿಂಪಡೆದಿದ್ದಾರೆ ಅವರು ವಿವರ ನೀಡಿದರು.
ಅಡ್ವಾಣಿಯೇ ಮಾರ್ಗದರ್ಶಕ : ಪ್ರಧಾನಿ ಅಭ್ಯರ್ಥಿ ಸೇರಿದಂತೆ ಪಕ್ಷದ ಪ್ರಮುಖ ನಿರ್ಧಾರಗಳನ್ನು ಅಡ್ವಾಣಿ ಅವರ ಮಾರ್ಗದರ್ಶನದಲ್ಲೇ ತೆಗೆದುಕೊಳ್ಳುತ್ತೇವೆ. ಮುಂದಿನ ಚುನಾವಣೆಗೂ ಅಡ್ವಾಣಿ ಅವರು ನಮಗೆ ಮಾರ್ಗದರ್ಶಕರಾಗಿರುತ್ತಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದರು. [ರಾಜೀನಾಮೆ ವಾಪಸಾತಿಗೆ 10 ಕಾರಣಗಳು]












Click it and Unblock the Notifications