ಹುಬ್ಬಳ್ಳಿಯಲ್ಲಿ ವೈದ್ಯರಿಗೆ ಶಾಸಕರಿಂದ ಕಪಾಳಮೋಕ್ಷ

ಮೇಘಾ ಎಂಬ ಬಾಲಕಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರಿಂದ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬಾಲಕಿ ಅಸುನೀಗಿದಳು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಕೂಡ ಆರೋಪಿಸಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ತಮ್ಮ ಬೆಂಬಲಿಗರೊಂದಿಗೆ ನುಗ್ಗಿದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ವಾಕ್ ಪ್ರಹಾರ ಮಾಡಿದರಲ್ಲದೆ, ಹೊಟ್ಟೆಗೆ ಎರಡು ಮೂರು ಬಾರಿ ಬಾರಿಸಿ, ಕಪಾಳಮೋಕ್ಷ ಮಾಡಿದರು. ಸಹ ವೈದ್ಯರು ಮಧ್ಯ ಪ್ರವೇಶಿಸಲು ಯತ್ನಿಸಿದರೂ ಹಲ್ಲೆ ತಡೆಯುವುದು ಸಾಧ್ಯವಾಗಲಿಲ್ಲ.
ಈ ಸಂದರ್ಭದಲ್ಲಿ ಹಲ್ಲೆ ಮಾಡುತ್ತಿದ್ದ ದೃಶ್ಯವಾವಳಿಯನ್ನು ಚಿತ್ರೀಕರಿಸಬಾರದೆಂದು ಖಾಸಗಿ ಟಿವಿ ಚಾನಲ್ ಛಾಯಾಗ್ರಾಹಕನಿಗೆ ವಿನಯ್ ಕುಲಕರ್ಣಿ ಬೆಂಬಲಿಗ ಮನವಿ ಮಾಡುತ್ತಿದ್ದುದು ಕಂಡುಬಂದಿದೆ. ಈ ಸಂಬಂಧ ಹಲ್ಲೆಗೊಳಗಾಗಿರುವ ವೈದ್ಯರು ವಿನಯ್ ಕುಲಕರ್ಣಿ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಬಾಲಕಿ ಸತ್ತಿದ್ದು ಎಂದು ಆರೋಪಿಸಿರುವ ಬಾಲಕಿಯ ಪಾಲಕರು ವೈದ್ಯರ ವಿರುದ್ಧ ಕೂಡ ದೂರು ಸಲ್ಲಿಸಿದ್ದಾರೆ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕಿ ವೈದ್ಯರು ನೀಡಿರುವ ಚುಚ್ಚುಮದ್ದಿನಿಂದ ಸತ್ತಿದ್ದೋ ಅಥವಾ ಸಹಜವಾಗಿ ಸತ್ತಿದ್ದೋ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಿದೆ.












Click it and Unblock the Notifications