ಪಣಜಿಯಲ್ಲಿ ಕೇಸರಿ ಕಲಹ : ಸಭೆ ಗೊಂದಲದ ಗೂಡು!
ಪಣಜಿ, ಜೂ. 8 : ರಾಷ್ಟ್ರೀಯ ಬಿಜೆಪಿಯಲ್ಲಿ ನಾಯಕರ ನಡುವೆ ಭಿನ್ನಮತವಿದೆ ಎನ್ನುವುದು ಮತ್ತೊಮ್ಮೆ ಬಹಿರಂಗಗೊಂಡಿದೆ. ಪಣಜಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ, ಬಿಜೆಪಿ ನರೇಂದ್ರ ಮೋದಿ ಪರ ಮತ್ತು ವಿರೋಧಿ ಬಣಗಳಾಗಿ ಹೋಳಾಗಿದೆ ಎಂದು ಸ್ಪಷ್ಟವಾಗಿ ಸಾರಿದೆ.
ಕಾರ್ಯಕಾರಣಿ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಅವರಿಗೆ ಲೋಕಸಭೆ ಚುನಾವಣೆಯ ಪ್ರಚಾರ ಸಮಿತಿಯ ಸಾರಥ್ಯ ವಹಿಸುವುದಕ್ಕೆ ಅಡ್ವಾಣಿ ವಿರೋಧ ವ್ಯಕ್ತಪಡಿಸಿದ್ದರು. ಎರಡು ದಿನಗಳ ಕಾರ್ಯಕಾರಣಿಗೆ ಗೈರು ಹಾಜರಾಗುವ ಮೂಲಕ ಅವರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಭೆಯ ಕೊನೆಯದಿನವಾದ ಭಾನುವಾರವೂ ಅಡ್ವಾಣಿ ಆಗಮಿಸುವುದಿಲ್ಲ ಎಂದು ಈಗಾಗಲೇ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಡ್ವಾಣಿ ಕಾರ್ಯಕಾರಣಿ ಸಭೆಗೆ ಗೈರು ಹಾಜರಾಗಿದ್ದಾರೆ. ಅಡ್ವಾಣಿ ಅನುಪಸ್ಥಿತಿಯಲ್ಲಿ ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಭಾನುವಾರ ತಿಳಿಯಲಿದೆ.
ಎರಡು ಬಣವಾದ ಬಿಜೆಪಿ : ನರೇಂದ್ರ ಮೋದಿ ಪರವಾದ ಒಂದು ಬಣ ಬಿಜೆಪಿಯಲ್ಲಿದ್ದರೆ, ಮತ್ತೊಂದು ಬಣ ಅವರನ್ನು ವಿರೋಧಿಸುತ್ತಿದೆ. ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಸರಿಯಾದ ಸ್ಥಾನಮಾನ ನೀಡದೆ, ನರೇಂದ್ರ ಮೋದಿಯವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬುದು ಮೋದಿ ವಿರೋಧಿ ಗುಂಪಿನ ವಾದ.

ಸುಷ್ಮಾ ಸ್ವರಾಜ್, ಉಮಾಭಾರತಿ, ವರುಣ್ ಗಾಂಧಿ ಮುಂತಾದ ನಾಯಕರು ಅಡ್ವಾಣಿ ಅವರ ಪರವಾಗಿದ್ದಾರೆ. ಎರಡು ಬಣಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವುದು, ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬಹುದೊಡ್ಡ ಸವಾಲಾಗಿದೆ.
ಬಣದ ಬೇಡಿಕೆಗಳು : ಲೋಕಸಭೆ ಚುನಾವಣೆಗೆ ಸಮಯಾಕಾಶವಿದೆ. ಆದ್ದರಿಂದ, ತರಾತುರಿಯಲ್ಲಿ ಮೋದಿಯವರನ್ನು ಚುನಾವಣಾ ಸಮಿತಿಯ ಸಾರಥಿಯನ್ನಾಗಿ ನೇಮಿಸುವುದು ಬೇಡ ಎಂದು ಮೋದಿ ವಿರೋಧಿ ಬಣ ಬೇಡಿಕೆ ಮುಂದಿಟ್ಟಿದೆ.
ಆದ್ದರಿಂದಲೇ ಕಾರ್ಯಕಾರಣಿ ಸಭೆಯಲ್ಲಿ ಮೋದಿಗೆ ಪಟ್ಟಕಟ್ಟುವ ನಿರ್ಧಾರ ತಗೆದುಕೊಳ್ಳಬಾರದು ಎಂದು ಮೋದಿ ವಿರೋಧಿ ಬಣ ಒತ್ತಡ ಹೇರುತ್ತಿದೆ. ಮೋದಿಗೆ ಪ್ರಚಾರ ಸಮಿತಿಯ ಸಂಚಾಲಕ ಹುದ್ದೆ ನೀಡಿದರೆ ಸಾಕು ಎಂದು ಬಣ ಅಭಿಪ್ರಾಯಪಟ್ಟಿದೆ.
ಪಣಜಿಯಲ್ಲಿ ಮೋದಿ ಮೋಡಿ : ಗುಜರಾತ್, ದೆಹಲಿಯಲ್ಲಿ ಮೋದಿ ಮಾಡಿದ್ದ ನರೇಂದ್ರ ಮೋದಿ ಪಣಜಿಯಲ್ಲೂ ತಮ್ಮ ಜಾದೂ ಮುಂದುವರೆಸಿದ್ದಾರೆ. ಮೋದಿ ಪರವಾದ ನಾಯಕರು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಅವರಿಗೆ ನೀಡಬೇಕು, ಜೊತೆಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು.
ಅಂತಿಮ ನಿರ್ಣಯ ಯಾವಾಗ : ಭಾನುವಾರ ರಾಷ್ಟ್ರೀಯ ಕಾರ್ಯಕಾರಣಿ ಅಂತಿಮಗೊಳ್ಳಲಿದ್ದು, ಮೋದಿಯವರಿಗೆ ಯಾವ ಜವಾಬ್ದಾರಿ ನೀಡಲಾಗುತ್ತದೆ ಎಂದು ತಿಳಿಯಲಿದೆ. ಆದರೆ, ಅಡ್ವಾಣಿ ಅವರ ಅನುಪಸ್ಥಿತಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಭಾನುವಾರ ಸ್ಪಷ್ಟ ಚಿತ್ರಣ : ರಾಷ್ಟ್ರೀಯ ಕಾರ್ಯಕಾರಣಿಯ ಕೊನೆಯ ದಿನವಾದ ಭಾನುವಾರ ಪಕ್ಷದ ನಿಲುವುಗಳ ಕುರಿತು ಸ್ಪಷ್ಟ ತೀರ್ಮಾನಗಳು ಹೊರಬೀಳಲಿವೆ. ಮೋದಿಗೆ ಯಾವ ಸ್ಥಾನಮಾನ, ಪಕ್ಷದ ಭವಿಷ್ಯದ ಯೋಜನೆಗಳೇನು ಎಂಬುದು ಭಾನುವಾರ ಸಂಜೆ ತಿಳಿಯುವ ಸಾಧ್ಯತೆ ಇದೆ.












Click it and Unblock the Notifications