ನಾಲ್ಕು ಕಡೆ ಕೈಚಳಕ ತೋರಿದ ನಕಲಿ ಪೊಲೀಸರು

ಗುರುವಾರ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಮಲ್ಲೇಶ್ವರಂ, ಮಾಗಡಿ ರಸ್ತೆ ಮತ್ತು ವೈಯಾಲಿಕಾವಲ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಚಿನ್ನಾಭರಣ ದೋಚಿದ್ದಾರೆ. ನಗರದ ಅಸಲಿ ಪೊಲೀಸರಿಗೆ ಇವರನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ.
ನಕಲಿ ಪೊಲೀಸರ ಟಾರ್ಗೆಟ್ ವಯೋವೃದ್ಧರು. ನಗರದದಲ್ಲಿ ಗುರುವಾರ ನಾಲ್ಕು ಪ್ರಕರಣಗಳಲ್ಲೂ ವೃದ್ಧರಿಗೆ ಟೋಪಿ ಹಾಕಿರುವ ನಕಲಿ ಪೊಲೀಸರು ಅವರನ್ನು ದೋಚಿದ್ದಾರೆ. ನಾಲ್ಕು ಪ್ರಕರಣಗಳಲ್ಲಿ ಸಾಮ್ಯತೆ ಇದ್ದು, ಒಂದೇ ಗುಂಪು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ 1.20 : ವೈಯಾಲಿಕಾವಲ್ 9ನೇ ಮುಖ್ಯರಸ್ತೆಯಲ್ಲಿ ಮನೆಯಿಂದ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ನಂಬಿಸಿ ಅವರಿಂದ 70 ಗ್ರಾಂ ಚಿನ್ನಾಭರಣ ಅಪಹರಿಸಲಾಗಿದೆ. ಸರ ಕಳೆದುಕೊಂಡಿರುವ ಇಂದುಮತಿ(52) ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಧ್ಯಾಹ್ನ 1.40 : ವೈಯಾಲಿಕಾವಲ್ 11ನೇ ರಸ್ತೆಯಲ್ಲಿ ತರಕಾರಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಲಕ್ಷ್ಮೀನಾಥ್ (60) ಎಂಬ ವೃದ್ಧನನ್ನು ತಡೆದ ನಕಲಿ ಪೊಲೀಸರು, 30 ಗ್ರಾಂ ಸರ ಮತ್ತು 10 ಗ್ರಾಂ ಉಂಗುರ ದೋಚಿ ಪರಾರಿಯಾಗಿದ್ದಾರೆ.
ಮಧ್ಯಾಹ್ನ 2 ಗಂಟೆ : ಮಲ್ಲೇಶ್ವರಂ 15 ನೇ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಮಹಿಳೆಯಿಂದ ಹೇಮಾವತಿ (59) ಅವರಿಂದ 110 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯಾಹ್ನ 3 ಗಂಟೆ : ಡಾ.ರಾಜ್ ಕುಮಾರ್ ರಸ್ತೆಯ ಶಕುಂತಲಾ(60) ಎಂಬ ಮಹಿಳೆಯನ್ನು ದೋಚಿದ ನಕಲಿ ಪೊಲೀಸರು 150 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.
ಕಳ್ಳರ ಕರಾಮತ್ತು : ನಾಲ್ಕು ಮಂದಿಯ ತಂಡ ಪೊಲೀಸ್ ಅಧಿಕಾರಿಗಳೆಂದು ಜನರ ವಿಶ್ವಾಸ ಗಿಟ್ಟಿಸುತ್ತಾರೆ. ಈ ಬಡಾವಣೆಯಲ್ಲಿ ಕಳ್ಳರ ಕಾಟವಿದೆ. ಆಭರಣ ಬ್ಯಾಗ್ ಗೆ ಹಾಕಿಕೊಳ್ಳಿ ಎಂದು ಬಿಚ್ಚಿಸಿ ಬ್ಯಾಗ್ ಗೆ ಹಾಕಲು ನೆರವಾಗುವ ನೆಪದಲ್ಲಿ ದೋಚಿ ಪರಾರಿಯಾಗುತ್ತಾರೆ.
ನಕಲಿ ಪೊಲೀಸರು ಹಾವಳಿ ತಪ್ಪಿಸಲು ಅಸಲಿ ಪೊಲೀಸರು ಸಜ್ಜಾಗಿದ್ದಾರೆ. ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದಾರೆ. ವೃದ್ಧರು ಒಂಟಿಯಾಗಿ ಸಂಚರಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications