ಗ್ರಾಮೀಣ ಅಕ್ರಮ ಸಕ್ರಮ ವಿಧೇಯಕ ವಾಪಸ್

ಹಿಂದಿನ ಬಿಜೆಪಿ ಸರ್ಕಾರ ವಿಧಾನಮಂಡಲದ ಉಭಯ ಸದನಗಳಲ್ಲಿಯೂ ಈ ವಿಧೇಯಕವನ್ನು ಅಂಗೀಕರಿಸಿ ರಾಜ್ಯಪಾಲರ ಅಂತಿಮ ಒಪ್ಪಿಗೆಗಾಗಿ ಕಳುಹಿಸಿಕೊಟ್ಟಿತ್ತು. ಇದನ್ನು ರಾಜ್ಯಪಾಲರು ಹಿಂತಿರುಗಿಸಿದ್ದು, ಮರು ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.
ಕರ್ನಾಟಕ ಭೂಕಂದಾಯ (2 ತಿದ್ದುಪಡಿ) ವಿಧೇಯಕ 2012ರಲ್ಲಿ 1998ಕ್ಕೂ ಮುಂಚೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿಗಳನ್ನು ಸಕ್ರಮ ಮಾಡುವ ಬಗ್ಗೆ ಪ್ರಸ್ತಾಪವಿದೆ. ಈ ಬಗ್ಗೆ ಮರುಶೀಲನೆ ಮಾಡಲು ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ಹೇಳಿದ್ದಾರೆ.
ಗೊಂದಲವೇಕೆ : ಹಿಂದೆ 1998ರಲ್ಲಿ ಒಂದು ಅವಧಿಯ ಯೋಜನೆಯಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆಗಳನ್ನು ಸಕ್ರಮಗೊಳಿಸಲು ತೀರ್ಮಾನ ತೆಗೆದುಕೊಂಡು, ಅದನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೂ ಮತ್ತೊಮ್ಮೆ ವಿಧೇಯಕಕ್ಕೆ ತಿದ್ದುಪಡಿ ಏಕೆ ಎಂದು ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ.
ಕಾನೂನು ಬಾಹಿರ : ಸರ್ಕಾರಿ ಭೂಮಿ ಒತ್ತುವರಿ ಕುರಿತು ವರದಿ ನೀಡಲು ರಚಿಸಲಾಗಿದ್ದ, ವಿ.ಬಾಲಸುಬ್ರಮಣಿಯನ್ ನೇತೃತ್ವದ ಕಾರ್ಯಪಡೆ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಕರ್ನಾಟಕ ಭೂ ಕಂದಾಯ ವಿಧೇಯಕ 2012ರ ಪ್ರಕಾರ ಒತ್ತುವರಿಯ್ನು ಸಕ್ರಮಗೊಳಿಸುವುದು ಕಾನೂನು ಬಾಹಿರವಾಗುತ್ತದೆ ಎಂದು ರಾಜ್ಯಪಾಲರು ವಿವರಣೆ ನೀಡಿದ್ದಾರೆ.
ಉಲ್ಲೇಖ : ಜನರ ಹಿತದೃಷ್ಟಿಯಿಂದ ಭೂಕಬಳಿಕೆ ಮಾಡುವವರನ್ನು ಪ್ರೋತ್ಸಾಹಿಸುವುದು ಮತ್ತು ಅದನ್ನು ಸಕ್ರಮಗೊಳಿಸುವುದು ಉತ್ತಮವಲ್ಲ. ಸುಪ್ರೀಂಕೋರ್ಟ್ 2011ರಲ್ಲಿ ಆದೇಶ ನೀಡಿ, ರಾಜಕೀಯ ಕಾರಣಗಳಿಗಾಗಿ ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಬಾರದು ಎಂದು ಹೇಳಿದೆ.
ಆದ್ದರಿಂದ ವಿಧೇಯಕ ಮರು ಪರಿಶೀಲಿಸಿ ಸಲ್ಲಿಸಿ ಎಂದು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಧೇಯಕದಲ್ಲಿ ಕೆಲವು ಬದಲಾವಣೆ ಮಾಡಿ, ಪುನಃ ಮಂಡಿಸಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications