ಬಳ್ಳಾರಿ ಅಗ್ನಿ ದುರಂತ, ಹತ್ತು ಕೋಟಿಗೂ ಅಧಿಕ ನಷ್ಟ
ಬಳ್ಳಾರಿ, ಜೂ. 4 : ಮೆಣಸಿನಕಾಯಿ ಮತ್ತು ದವಸಧಾನ್ಯ ಸಂಗ್ರಹಿಸಿದ್ದ ಕೋಲ್ಡ್ ಸ್ಟೋರೇಜ್ ಬಳ್ಳಾರಿಯಲ್ಲಿ ಅಗ್ನಿಗೆ ಆಹುತಿಯಾಗಿ ಎರಡು ದಿನಗಳು ಕಳೆದಿವೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕಟ್ಟಡ ಒಂದು ಭಾಗ ಕುಸಿದು ಬಿದ್ದಿದ್ದರೂ, ಇನ್ನೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಅಗ್ನಿ ಆಕಸ್ಮಿಕದಿಂದಾಗಿ ಸುಮಾರು 10 ಕೋಟಿ ರೂ.ಗಳಿಗೆ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಭಾನುವಾರ ಜೂನ್ 2 ರ ಬೆಳಗ್ಗೆ 7 ಗಂಟೆ ಸುಮಾರಿಗೆ ಬಳ್ಳಾರಿ ಹೊರವಲಯದ ಶ್ರೀ ಸಾಯಿ ಬಾಲಾಜಿ ಕೋಲ್ಟ್ ಇಂಡಸ್ಟ್ರೀಸ್ ಗೆ ಬೆಂಕಿ ಬಿದ್ದಿತ್ತು. ಕಟ್ಟಡದಲ್ಲಿ ಮೆಣಸಿನಕಾಯಿ ಸೇರಿದಂತೆ ವಿವಿಧ ದವಸ ಧಾನ್ಯಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಮೆಣಸಿನಕಾಯಿಯ ದಟ್ಟ ಹೊಗೆಯಿಂದಾಗಿ ಕಾರ್ಯಚರಣೆ ನಡೆಸುವುದು ವಿಳಂಬವಾಯಿತು.
ಸೋಮವಾರ ಬೆಂಕಿಯ ಕೆನ್ನಾಲಿಗೆಗೆ ಕಟ್ಟಡದ ಒಂದು ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಸ್ಕೈ ಲಿಫ್ಟ್ ಗಳ ಸಹಾಯದಿಂದ ಸೋಮವಾರವೂ ಬೆಂಕಿ ನಂದಿಸುವ ಕಾರ್ಯಚರಣೆಯನ್ನು ನಾಲ್ಕು ಅಗ್ನಿ ಶಾಮಕದಳಗಳು ಮುಂದುವರೆಸಿದ್ದವು.
ಮಂಗಳವಾರ ಸಂಜೆಯವರೆಗೂ ಬೆಂಕಿ ನಂದಿಸುವ ಕಾರ್ಯಚರಣೆ ಮುಂದುವರೆದಿದ್ದು, ಕಟ್ಟಡದ ಕುಸಿದು ಬಿದ್ದಿರುವುದರಿಂದ ರಕ್ಷಣಾ ಪಡೆಗಳು ಒಳಗೆ ಧಾವಿಸಲು ಕಷ್ಟವಾಗುತ್ತಿದೆ. ಇನ್ನೊಂದು ಕಡೆಯಿಂದ ಬೆಂಕಿಗಾಹುತಿಯಾಗದೆ ಉಳಿದ ಧಾನ್ಯಗಳನ್ನು ರಕ್ಷಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಚಿತ್ರಗಳಲ್ಲಿ ಬಳ್ಳಾರಿ ಅಗ್ನಿ ಆಕಸ್ಮಿಕ ಕಂಡಿದ್ದು ಹೀಗೆ...

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
50ಕ್ಕೂ ಹೆಚ್ಚು ಹಳ್ಳಿಗಳ 200ಕ್ಕೂ ಅಧಿಕ ರೈತರು ಕೋಲ್ಡ್ ಸ್ಟೋರೇಜ್ ನಲ್ಲಿ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿದ್ದರು. ಐದು ಅಂತಸ್ತಿನ ಈ ಕಟ್ಟಡ ಬೆಂಕಿಗೆ ಆಹುತಿಯಾಗಿ, ರೈತರಲ್ಲಿ ಆತಂಕ ಮೂಡಿಸಿದೆ. ಬೆಳೆದ ಬೆಲೆ ಮಾರುವ ಮೊದಲೇ ಅಗ್ನಿದೇವನ ಅವಕೃಪೆಗೆ ಪಾತ್ರವಾಗಿದೆ.

ಯಾವ ಬೆಳೆಗಳನ್ನು ಸಂಗ್ರಹಿಸಲಾಗಿತ್ತು
ತಿಂಗಳ ಬಾಡಿಗೆ ಆಧಾರದ ಮೇಲೆ ರೈತರು ತಾವು ಬೆಳದ ಆಹಾರ ಪದಾರ್ಥಗಳನ್ನು ಇಲ್ಲಿ ಸಂಗ್ರಹಿಸಿದ್ದರು. ಕಟ್ಟಡದಲ್ಲಿ ಮೆಣಸು, ಕಡಲೆಕಾಯಿ, ತೊಗರಿ, ಮೆಕ್ಕೆಜೋಳ, ಹುಣಸೆಹಣ್ಣು, ಕೆಂಪುಜೋಳ ಮುಂತಾದ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಕಟ್ಟಡದಲ್ಲಿದ್ದ ಬಹುತೇಕ ಬೆಳೆಗಳು ಸುಟ್ಟು ಕರಕಲಾಗಿವೆ.

10 ಕೋಟಿಗೂ ಅಧಿಕ ಹಾನಿ
ಕಟ್ಟದ ನಿರ್ಮಾಣ ಸೇರಿದಂತೆ ಕೋಲ್ಡ್ ಸ್ಟೋರೇಜ್ ನಲ್ಲಿ ಇದ್ದ ಬೆಳಗಳ ಲೆಕ್ಕಹಾಕಿದರೆ, ಸುಮಾರು 10 ಕೋಟಿಗೂ ಅಧಿಕ ಮೌಲ್ಯದ ಹಾನಿ ಉಂಟಾಗಿದೆ ಎಂದು ಆಂದಾಜಿಸಲಾಗಿದೆ. ಕಟ್ಟಡದ ಬೆಂಕಿ ನಂದಿಸಲು 250 ಟ್ಯಾಂಕ್ ಗಳಿಗೂ ಹೆಚ್ಚಿನ ನೀರು ಬಳಸಲಾಗಿದೆ.

ವಿಮೆ ಮಾಡಿಸಲಾಗಿದೆ
ಕಾನೂನಿನ ಪ್ರಕಾರ ಸ್ಟೋರೇಜ್ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ, ಎಪಿಎಂಸಿ ಮತ್ತು ಕೈಗಾರಿಕಾ ಇಲಾಖೆಗಳ ಅನುಮತಿ ಪಡೆಯಬೇಕು ಇವುಗಳನ್ನು ಪಡೆಯಲಾಗಿತ್ತು. ಆದರೆ, ಅಗ್ನಿ ಶಾಮಕ ದಳಕ್ಕೆ ಇಂತಹ ಕಟ್ಟಡ ಕಟ್ಟುವ ಮೊದಲು ಮಾಹಿತಿ ನೀಡರಲಿಲ್ಲ. ಕಟ್ಟಡದಲ್ಲಿದ್ದ ಪ್ರತಿ ಚೀಲಕ್ಕೂ ವಿಮೆ ಮಾಡಿಸಲಾಗಿತ್ತು.

ಆಂಧ್ರದವರು ಇದ್ದರು
ಕಟ್ಟಡದಲ್ಲಿ ಕೇವಲ ಬಳ್ಳಾರಿಯ ರೈತರು ಆಹಾರ ಪದಾರ್ಥಗಳನ್ನು ಸಂಗ್ರಹಿಸಿರಲಿಲ್ಲ. ನೆರೆಯ ಆಂಧ್ರ ಪ್ರದೇಶದ ರೈತರು ಮತ್ತು ರೈತರಿಂದ ಆಹಾರ ಪದಾರ್ಥ ಖರೀದಿಸಿದ ಮಧ್ಯಮರ್ತಿಗಳು ಇಲ್ಲಿ, ತಮ್ಮ ಚೀಲಗಳನ್ನು ಸಂಗ್ರಹಿಸಿದ್ದರು.

ಭರದಿಂದ ನೆಡೆಯುತ್ತಿದೆ ರಕ್ಷಣಾ ಕಾರ್ಯ
ಮಂಗಳವಾರವೂ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಅಗ್ನಿ ಶಾಮಕದಳದ ಅಧಿಕಾರಿಗಳು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಆದರೆ, ಬಹುತೇಕ ಆಹಾರ ಪದಾರ್ಥಗಳು ಬೆಂಕಿಗೆ ಆಹುತಿಯಾಗಿದೆ.











Click it and Unblock the Notifications