ನಿಗೂಢವಾಗಿದೆ 20 ಕೆಜಿ ಸ್ಫೋಟಕದ ಮಾಹಿತಿ

ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಶಂಕಿತ ಉಗ್ರ ಅಹ್ಮದ್ ಬುಹಾರಿ, ನಾವು ಸ್ಪೋಟಕ್ಕಾಗಿ 25 ಕೆ.ಜಿ.ಸ್ಫೋಟಕಗಳನ್ನು ಖರೀದಿಸಿದ್ದೆವು. ಆದರೆ, 5 ಕೆ.ಜಿ.ಯನ್ನು ಮಾತ್ರ ಮಲ್ಲೇಶ್ವರಂನಲ್ಲಿ ಬಳಸಿದ್ದೆವು ಎಂದು ಮಾಹಿತಿ ನೀಡಿದ್ದಾನೆ.
ಇದರಿಂದ ಚುರುಕುಗೊಂಡಿರುವ ಪೊಲೀಸರು ಉಳಿದ 20 ಕೆ.ಜಿ. ಸ್ಫೋಟಕ ಎಲ್ಲಿದೆ ಎಂದು ಹುಡುಕಾಡಲು ಪ್ರಾರಂಭಿಸಿದ್ದಾರೆ. ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರನ್ನು ಬಂಧಿಸಿರುವುದರಿಂದ, ಉಳಿದವರು ಸೇಡು ತೀರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಮಿಳುನಾಡು ಗುಪ್ತಚರ ಇಲಾಖೆ ಕರ್ನಾಟಕಕ್ಕೆ ಈಗಾಗಲೇ ಸಂದೇಶ ರವಾನಿಸಿದೆ.
ಮಲ್ಲೇಶ್ವರಂ ಸ್ಫೋಟಕ್ಕೆ ಬಳಸಿ ಉಳಿದ 20 ಕೆ.ಜಿ.ವಸ್ತುಗಳನ್ನು ಬಳಸಿ ಉಗ್ರರು ಮತ್ತೊಮ್ಮೆ ದಾಳಿ ನಡೆಸಬಹುದು ಎಂದು ಪೊಲೀಸರಿಗೆ ತಮಿಳುನಾಡು ಸ್ಪಷ್ಟ ಸಂದೇಶ ರವಾನಿಸಿದೆ. ಇದರಿಂದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಸ್ಪೋಟಕದ ಬಗ್ಗೆ ಮಾಹಿತಿ ಸಂಗ್ರಹಿಸಿಲು ಬುಹಾರಿ ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿಗಳ ಖಜಾನೆ ಬುಹಾರಿ : ಸದ್ಯ ಪೊಲೀಸರು ವಶದಲ್ಲಿರುವ ಬಂಧಿತ ಶಂಕಿತ ಉಗ್ರ ಬುಹಾರಿ ಅನೇಕ ಆತಂಕಕಾರಿ ಮಾಹಿತಿಗಳನ್ನು ವಿಚಾರಣೆ ವೇಳೆ ಹೇಳಿದ್ದಾನೆ. ಉಗ್ರರು ಪೊಲೀಸರನ್ನು ಮೊದಲ ಟಾರ್ಗೆಟ್ ಆಗಿ ಮಾಡಿಕೊಂಡಿದ್ದು, ಅವರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದೇವು ಎಂದು ಹೇಳಿದ್ದಾನೆ.
ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳೊಬ್ಬರ ಪ್ರಕಾರ, ಬಂಧಿತ ಉಗ್ರರು ಮಲ್ಲೇಶ್ವರಂ ಸ್ಫೋಟವನ್ನು ಪೊಲೀಸರನ್ನು ಗುರಿಯಾಗಿಸಿಕೊಂಡು ನಡೆಸಲು ಉದ್ದೇಶಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಾರ್ಗೆಟ್ ಮಿಸ್ ಆಯಿತು. (ಮಲ್ಲೇಶ್ವರಂ ಸ್ಫೋಟ)
ಅಲ್ಲದೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಉಗ್ರಗಾಮಿ ಚಟುವಟಿಕೆ ಸಕ್ರಿಯವಾಗಿವೆ. ನೆರೆಯ ರಾಜ್ಯಗಳ ಜೊತೆ ಸೇರಿಯೇ ಪ್ರತಿಯೊಂದು ದಾಳಿ ನಡೆಸುತ್ತೇವೆ ಎಂದು ಶಂಕಿತ ಭಯೋತ್ಪಾದಕರು ಒಪ್ಪಿಕೊಂಡಿದ್ದಾರೆ.
ಪ್ರತಿ ರಾಜ್ಯದ ಸಂಘಟನೆಗಳು ತಿಂಗಳಿಗೊಮ್ಮೆ ಸಭೆ ಸೇರಿ ವಿವಿಧ ರಾಜ್ಯಗಳ ಕಾರ್ಯತಂತ್ರಗಳ ಕುರಿತು ಮಾಹಿತಿ ಪಡೆಯುತ್ತೇವೆ. ದಾಳಿಯ ಸಂಚು ರೂಪಿಸಲು ಸಹಾಯ ಮಾಡುತ್ತೇವೆ. ದಾಳಿಯ ವೇಳೆಯೂ ಸಹಾಯ ಮಾಡುತ್ತೇವೆ ಎಂದು ಬುಹಾರಿ ಹೇಳಿದ್ದಾನೆ.
ಉಗ್ರರ ಹೊಸ ತಂತ್ರದಂತೆ ತಮಿಳುನಾಡಿನ ಭಯೋತ್ಪಾದಕರು ಕರ್ನಾಟಕ ಅಥವ ಆಂಧ್ರ ಪ್ರದೇಶದಲ್ಲಿ ದಾಳಿ ನಡೆಸುತ್ತಾರೆ. ಅವರ ತವರು ರಾಜ್ಯದಲ್ಲಿ ದಾಳಿ ನಡೆಸುವುದಿಲ್ಲ. ಆದ್ದರಿಂದ ಕರ್ನಾಟಕದ ದಾಳಿಯ ಹೊಣೆಯನ್ನು ನಾವು ನಡೆಸಿದೆವು ಎಂದು ಹೇಳಿದ್ದಾನೆ.
ಕರ್ನಾಟಕದಲ್ಲಿ ಬಿಜೆಪಿ ಕಚೇರಿ ಟಾರ್ಗೆಟ್ ಮಾಡಿದಂತೆ ತಮಿಳುನಾಡಿನ ಬಿಜೆಪಿ ಕಚೇರಿಯೂ ಹಿಟ್ ಲೀಸ್ಟ್ ನಲ್ಲಿತ್ತು. ಆದರೆ, ಕರ್ನಾಕಟದಲ್ಲಿ ಚುನಾವಣೆ ನಡೆಯುತ್ತಿದ್ದರಿಂದ ಕೇವಲ ಈ ರಾಜ್ಯದಲ್ಲಿ ಮಾತ್ರ ದಾಳಿ ನಡೆಸಲಾಯಿತು ಎಂದು ಬಂಧಿತರು ಹೇಳಿದ್ದಾರೆ.












Click it and Unblock the Notifications