ಶ್ರೀನಿವಾಸನ್ ಕುಟುಂಬಕ್ಕೆ ಎರಗಿದ ಫಿಕ್ಸಿಂಗ್ ಭೂತ
ಬೆಂಗಳೂರು, ಮೇ.24: ಚೆನ್ನೈ ಸೂಪರ್ ಕಿಂಗ್ಸ್ ನ ಸಿಇಒ ಗುರುನಾಥ್ ಮೇಯಪ್ಪನ್ ಅವರ ಹೆಸರು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಕೇಳಿ ಬಂದಿದ್ದು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಮನೆಯಲ್ಲಿ ದೊಡ್ಡ ಗದ್ದಲವನ್ನು ಎಬ್ಬಿಸಿದೆ. ಅಳಿಯ ಗುರುನಾಥ್ ಪರ ಮಾವ ಶ್ರೀನಿವಾಸನ್ ನಿಂತಿದ್ದರೆ, ಶ್ರೀನಿವಾಸನ್ ಅವರ ಪುತ್ರ ಅಶ್ವಿನ್ ಅವರು ಗುರುನಾಥ್ ವಿರುದ್ಧ ಕಿಡಿಕಾರಿದ್ದಾರೆ. ಭಾವನ ವಿರುದ್ಧ ಅಶ್ವಿನ್ ಮಾಡಿರುವ ಆರೋಪಗಳನ್ನು ಡಿಎನ್ ಎ ಪತ್ರಿಕೆ ಸಮಗ್ರವಾಗಿ ಪ್ರಕಟಿಸಿದೆ.
ಇದರಿಂದಾಗಿ ಶ್ರೀನಿವಾಸನ್ ಅವರ ಮನೆಯಲ್ಲಿ ಟೆಸ್ಟ್ ಪಂದ್ಯದ ರೀತಿಯಲ್ಲಿ ನಡೆಯುತ್ತಿದ್ದ ಕುಟುಂಬ ಕಲಹ ಈಗ ಟಿ20 ಮೋಡ್ ಗೆ ಹೊರಳಿದೆ. ಗುರುನಾಥ್ ಗೂ ಅಶ್ವಿನ್ ಗೂ ಮೊದಲಿನಿಂದಲೂ ಎಣ್ಣೆ ಸಿಗೇಕಾಯಿ ಎಂಬುದು ಚೆನ್ನೈ ಮೂಲದವರಿಗೆ ಗೊತ್ತೇ ಇರುತ್ತದೆ.
ಗುರುನಾಥ್ ಬೆಟ್ಟಿಂಗ್ ನಲ್ಲಿ ತೊಡಗಿದ್ದಾನೆ ಎಂದರೆ ಯಾರು ನಂಬುವುದಿಲ್ಲ. ಕಾರಣ ಗುರುನಾಥ್ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಲ್ಲದೆ, ದೊಡ್ಡ ಉದ್ಯಮ ನಡೆಸುತ್ತಿರುವವರು, ಲಕ್ಷ ಲಕ್ಷ ದುಡ್ಡಿನ ಆಸೆಗಾಗಿ ಬೆಟ್ಟಿಂಗ್ ಜಾಲಕ್ಕೆ ಏಕೆ ಇಳಿಯುತ್ತಾರೆ. ಗುರು ಹೆಸರನ್ನು ಬೇರೆಯವರು ಬಳಸಿಕೊಳ್ಳುತ್ತಿದ್ದಾರೆ ಎಂದು ಗುರು ಪರ ಅನೇಕ ಮಂದಿ ವಾಗಿಸುತ್ತಿದ್ದಾರೆ.

ಆದರೆ, ಅಶ್ವಿನ್ ಹೇಳುವುದೇ ಬೇರೆ, ಗುರುನಾಥ್ ಮೇಯಪ್ಪನ್ ಗೆ ಬೆಟ್ಟಿಂಗ್ ದಂಧೆ ಹೊಸದೇನಲ್ಲ. ಹಲವಾರು ಬುಕ್ಕಿಗಳ ಜೊತೆ ಗುರು ನಿರಂತರ ಸಂಪರ್ಕದಲ್ಲಿದ್ದಾನೆ. ದುಬೈ, ಮುಂಬೈ, ಚೆನ್ನೈ ಬುಕ್ಕಿಗಳಿಗೆ ಕರೆ ಮಾಡಿದ್ದಾನೆ. ಬೆಟ್ಟಿಂಗ್ ಗುರು ಪಾಲಿಗೆ ಸಣ್ಣ ಖಯಾಲಿ ಅಷ್ಟೇ. ಆದರೆ, ಗುರು ಹೆಸರಿನಲ್ಲಿ ದೊಡ್ಡದಾಗಿ ದಂಧೆ ಬೆಳೆದಿದೆ ಎಂದು ಅಶ್ವಿನ್ ಬಾಂಬ್ ಸಿಡಿಸಿದ್ದಾರೆ.
ಗುರು ಕಂಡ್ರೆ ಏಕೆ ಅಶ್ವಿನ್ ಗೆ ಸಿಟ್ಟು: ನನ್ನ ಸೋದರಿ ರೂಪಾಳನ್ನು ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೆ ಕೊಟ್ಟು ಮದುವೆ ಮಾಡಬೇಕೆಂಬುದು ನಮ್ಮ ಕುಟುಂಬದ ಆಸೆಯಾಗಿತ್ತು. ಆದರೆ, ರೂಪಾಗೆ ಗುರುನಾಥ್ ಮೇಲೆ ಪ್ರೀತಿ ಬೆಳೆದಿತ್ತು. ಚೆಟ್ಟಿಯಾರ್ ಜಾತಿಗೆ ಸೇರಿದ ಗುರುನಾಥ್ ಜೊತೆ ಬ್ರಾಹ್ಮಣ ಜಾತಿಗೆ ಸೇರಿದ ಶ್ರೀನಿವಾಸನ್ ಮನೆ ಮಗಳು ಕೊಟ್ಟು ಮದುವೆ ಮಾಡುವುದಕ್ಕೆ ಕುಟುಂಬದವರು, ಆಪ್ತರು ಇಷ್ಟಪಟ್ಟಿರಲಿಲ್ಲ.
ಮದುವೆಯಾದ ನಂತರ ಗುರುನಾಥ್ ಮೇಯಪ್ಪನ್ ಅಪ್ಪ(ಶ್ರೀನಿವಾಸನ್)ನ ವ್ಯವಹಾರದಲ್ಲಿ ಕೈ ಹಾಕಿದ. ನಾನು ಹಿಂದೊಮ್ಮೆ ಮಾದಕ ವ್ಯಸನಿಯಾಗಿದ್ದೆ ನಿಜ. ಈಗ ಸಂಪೂರ್ಣ ಗುಣಮುಖನಾಗಿದ್ದೇನೆ. ಆದರೆ, ಇದೇ ನೆಪವೊಡ್ಡಿ ಗುರುನಾಥ್ ನಮ್ಮ ವ್ಯವಹಾರ ಎಲ್ಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಬಿಟ್ಟಿದ್ದಾನೆ ಎಂದು ಅಶ್ವಿನ್ ಆರೋಪಿಸಿದ್ದಾರೆ.
ನ್ಯೂಯಾರ್ಕಿನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಫೈನಾನ್ಸ್ ಎಂಬಿಎ ಪದವಿ ಪಡೆದಿರುವ 44 ವರ್ಷದ ಅಶ್ವಿನ್ ತನ್ನ ತಂದೆ ಶ್ರೀನಿವಾಸನ್ ವಿರುದ್ಧವೂ ಕಿಡಿಕಾರುತ್ತಾರೆ. ದುಬೈನಲ್ಲಿ ಅಕ್ರಮ ವ್ಯವಹಾರಗಳನ್ನ ಹೊಂದಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. ಕಳೆದ 13 ವರ್ಷಗಳಿಂದ ಅವೀ ಮುಖರ್ಜಿ ಎಂಬ ವ್ಯಕ್ತಿಯೊಂದಿಗೆ ಅಶ್ವಿನ್ ಸಲಿಂಗಕಾಮ ಸಂಬಂಧ ಹೊಂದಿದ್ದಾನೆ ಇದು ಶ್ರೀನಿವಾಸನ್ ಗೆ ನುಂಗಲಾರದ ತುತ್ತಾಗಿದೆ.
ಅಪ್ಪ ಬೆಳೆಸಿರುವ ಸಿಮೆಂಟ್ಸ್ ಉದ್ಯಮವನ್ನು ನೋಡಿಕೊಳ್ಳುತ್ತಿರುವ ಅಶ್ವಿನ್ ಅವರು ಕಳೆದ ವರ್ಷ ಮುಂಬೈನ ಕೆಫೆವೊಂದರಲ್ಲಿ ಸಿಬ್ಬಂದಿಯೊಡನೆ ಜಗಳವಾಡಿ ಬಿಡಿಸಲು ಬಂದ ಪೇದೆಗೆ ಗೂಸ ಕೊಟ್ಟು ಒಂದು ರಾತ್ರಿ ಜೈಲಿನಲ್ಲಿ ಕಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications