ಪ್ರೀತ್ಸೆ ಪ್ರೀತ್ಸೆ ಅಂತಾ ತಾರಾ ಪ್ರಾಣ ತಿಂದ

ಇಲ್ಲಿನ ವಿಶ್ವನಾಥನಗರದಲ್ಲಿ ಪ್ರಥಮ ಪಿಯು ವಿದ್ಯಾರ್ಥಿನಿ ತಾರಾಶ್ರೀ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. 17 ವರ್ಷದ ತಾರಾಗೆ ಸಕತ್ ಕಾಟ ಕೊಡುತ್ತಿದ್ದ ರಾಕೇಶ್ ಎಂಬ ಯುವಕ, ಆಕೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.
ನಮ್ಮ ಮಗಳು ಅಮಾಯಕಳು ಸಾರ್, ಯಾವತ್ತೂ ಪ್ರೀತಿ ಪ್ರೇಮ ಎಂಬ ಬಲೆಗೆ ಸಿಲುಕಿರಲಿಲ್ಲ. ರಾಕೇಶ್ ಎಂಬ ಹುಡುಗ ಕಾಲೇಜಿನಲ್ಲಿ ಹಿಂದೆ ಮುಂದೆ ಸುತ್ತುತ್ತಾನೆ ಎಂದು ಆಗಾಗ ಮನೆಗೆ ಬಂದು ಅತ್ತು ಕರೆದು ಗೋಳಾಡುತ್ತಿದ್ದಳು.
ಈ ಬಗ್ಗೆ ಕಾಲೇಜಿನಲ್ಲಿ ಒಮ್ಮೆ ದೂರು ನೀಡಿದ್ದೆವು. ಕೆಲ ಕಾಲ ಅವನ ಕಾಟ ತಪ್ಪಿತ್ತು. ಆದರೆ, ಅವನ ಕಾಟ ಮತ್ತೆ ಮುಂದುವರೆಯಿತು. ನಮ್ಮ ಮಗಳ ಸಾವಿಗೆ ಅವನೇ ಕಾರಣ ಎಂದು ತಾರಾಶ್ರೀ ಪೋಷಕರಾದ ವೇದಮೂರ್ತಿ ಹಾಗೂ ಕಾಂತಾಮಣಿ ಅವರು ಗೋಳು ತೋಡಿಕೊಂಡಿದ್ದಾರೆ.
ಪೆನ್ ಶೆನ್ ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ತಾರಾಶ್ರೀ ಓದುತ್ತಿದ್ದ ವಾಣಿ ವಿಲಾಸ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲೂ ದುಃಖ ಮಡುಗಟ್ಟಿದೆ. ತಾರಾಶ್ರೀ ಗೆಳತಿಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಗೆಳತಿಯರ ಪ್ರಕಾರ ರಾಕೇಶ, ತಾರಾಳನ್ನು ಎಸ್ಎಸ್ಎಲ್ಸಿಯಲ್ಲಿದ್ದಾಗಲೇ ಪ್ರೀತಿಸುತ್ತಿದ್ದ. ತಾರಾಶ್ರೀ ಕಾಲೇಜು ಸೇರಿದರೆ, ರಾಕೇಶ ಎಸ್ಎಸ್ ಎಲ್ಸಿ ಫೇಲಾಗಿದ್ದ.
ಗೆಳತಿಯರ ಪ್ರಕಾರ ರಾಕೇಶ, ತಾರಾಳನ್ನು ಎಸ್ಎಸ್ಎಲ್ಸಿಯಲ್ಲಿದ್ದಾಗಲೇ ಪ್ರೀತಿಸುತ್ತಿದ್ದ. ತಾರಾಶ್ರೀ ಕಾಲೇಜು ಸೇರಿದರೆ, ರಾಕೇಶ ಎಸ್ಎಸ್ ಎಲ್ಸಿ ಫೇಲಾಗಿದ್ದ. ರಾಕೇಶ್ ಹಾಗೂ ತಾರಾಳಿಗೆ ಒಳ್ಳೆ ಗೆಳತನವಿತ್ತು. ಆದರೆ, ರಾಕೇಶನನ್ನು ತಾರಾ ಪ್ರೀತಿಸುತ್ತಿರಲಿಲ್ಲ.
ಎಸ್ಎಸ್ ಎಲ್ಸಿಯಲ್ಲಿ ಪಾಸಾಗಲಿ ಎಂಬ ಉದ್ದೇಶದಿಂದ ತಿಳಿ ಮಾತು ಹೇಳಿದ್ದ ತಾರಾ, ರಾಕೇಶನನ್ನು ದೂರವಿರಿಸಿದ್ದಳು. ಆದರೆ, ತಾರಾ ನೆರಳಿನಂತೆ ಹಿಂಬಾಲಿಸುವುದನ್ನು ರಾಕೇಶ ಬಿಡಲಿಲ್ಲ. ಒಮ್ಮೆ ಪೆನ್ ಶನ್ ಮೊಹಲ್ಲಾ ಪೊಲೀಸರ ಕೈಗೆ ಸಿಕ್ಕಿಬಿದ್ದ ರಾಕೇಶನಿಗೆ ಬುದ್ಧಿವಾದ ಹೇಳಿ ಕಳಿಸಲಾಗಿತ್ತು.
ಆದರೆ, ಮತ್ತೆ ತನ್ನ ಚಾಳಿ ಮುಂದುವರೆಸಿದ ರಾಕೇಶ, ತಾರಾಗೆ ಕರೆ ಮಾಡಿ ಅಲ್ಲಿಗೆ ಬಾ ಇಲ್ಲಿಗೆ ಬಾ ನೀನು ಬರದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಾಡಿದ್ದಾನೆ. ಇದರಿಂದ ನೊಂದ ತಾರಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಕೇಶನ ಬಲವಂತದ ಲವ್ ನಿಂದಾಗಿ ತಮ್ಮ ಮಗಳು ಸಾವನ್ನಪ್ಪಿದ್ದಾಳೆ, ಮುಂದೆ ಯಾವ ಹೆಣ್ಣು ಮಕ್ಕಳಿಗೆ ಹೀಗಾಗಬಾರದು, ಅವನಿಗೆ ತಕ್ಕ ಶಾಸ್ತಿಯಾಗಬೇಕು ಎಂದು ತಾರಾ ತಂದೆ ವೇದಮೂರ್ತಿ ಆಗ್ರಹಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications