ಯುಪಿ : ಪ್ರತಿಮೆ ನಿರ್ಮಾಣದ ‘ಮಾಯ’ ಜಾಲ

ಸೋಮವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಲೋಕಾಯುಕ್ತ ವರದಿ ಸಲ್ಲಿಕೆಯಾಗಿದ್ದು, ಅದರ ಅನ್ವಯ ಲಖನೌ ಹಾಗೂ ನೋಯ್ಡಾದಲ್ಲಿ ದಲಿತ ನಾಯಕರ 14 ಸ್ಮಾರಕಗಳನ್ನು ನಿರ್ಮಿಸಲು 5,919 ಕೋಟಿ ಖರ್ಚು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಪ್ರತಿಮೆ ಹಗರಣದ ಕುರಿತಂತೆ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಸಹವರ್ತಿ ನಸಿಮುದ್ದೀನ್ ಸಿದ್ದಿಕಿ ಸೇರಿದಂತೆ 199 ಮಂದಿಯನ್ನು ಆರೋಪಿಗಳು ಎಂದು ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಪ್ರತಿಮೆ ಹಗರಣದ ಉತ್ತರ ಪ್ರದೇಶದಲ್ಲಿ ಭಾರೀ ಸದ್ದು ಮಾಡಿದ್ದು, ಪ್ರತಿಮೆ ನಿರ್ಮಾಣದಲ್ಲಿ 1,400 ಕೋಟಿ ಅವ್ಯವಹಾರ ನಡೆದಿದೆ ಎಂಬುದು ಭಾರೀ ವಿವಾದ ಎಬ್ಬಿಸಿದೆ.
ಆರೋಪಿಗಳ ಪಟ್ಟಿಯಲ್ಲಿ ಮಾಜಿ ಸಚಿವ ಬಾಬು ಸಿಂಗ್ ಖುಷ್ವಾಹಾ ಅವರ ಹೆಸರು ಇದ್ದು, ಉಳಿದಂತೆ 54 ಎಂಜಿನಿಯರ್ ಗಳು, 37 ಅಕೌಂಟೆಂಟ್ಸ್ ಹಾಗೂ 60 ನಿರ್ಮಾಣ ಕಂಪನಿಗಳ ಒಡೆಯರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.
ವರದಿ ಪ್ರಕಾರ ಸಿದ್ದಿಕಿ ಹಾಗೂ ಖುಷ್ವಾಹಾ ಹಗರಣದ ಹಿಂದಿನ ಪ್ರಮುಖ ವ್ಯಕ್ತಿಗಳಾಗಿದ್ದು, ಹಣ ನುಂಗುವ ವಿಷಯದಲ್ಲಿ ಇವರಿಬ್ಬರ ನಡುವೆ ಕಿತ್ತಾಟವೂ ನಡೆದಿತ್ತು ಎಂದು ತಿಳಿದುಬಂದಿದೆ. ಅಂದಿನ ಮಾಯಾ ಸಂಪುಟದಲ್ಲಿ ಸಿದ್ದಿಕಿ ಲೋಕೋಪಯೋಗಿ ಸಚಿವರಾಗಿದ್ದರೆ, ಖುಷ್ವಾಹಾ ಗಣಿ ಇಲಾಖೆ ಸಚಿವರಾಗಿ ನಿರ್ವಹಿಸುತ್ತಿದ್ದರು.
ಮಾಯಾ ಖುಲಾಸೆ : ಹಗರಣಕ್ಕೆ ಸಂಬಂಧಿಸಿದಂತೆ ಮಾಯಾವತಿ ಅವರಿಗೆ ಕ್ಲೀನ್ಚಿಟ್ ನೀಡಿರುವುದು ಆಶ್ಚರ್ಯ ಉಂಟುಮಾಡಿದೆ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬಹುದು ಅಥವಾ ರಾಜ್ಯ ಸರಕಾರವೇ ವಿಶೇಷ ಪಡೆ ರಚಿಸಿ ಅದರ ಉಸ್ತುವಾರಿಗೆ ವಹಿಸಬಹುದು ಎಂದು ಲೋಕಾಯುಕ್ತರು ಶಿಫಾರಸು ಮಾಡಿದ್ದಾರೆ.












Click it and Unblock the Notifications