ಸೋಲು ಮರೆತು ಪಕ್ಷ ಕಟ್ಟೋಣ : ಯಡಿಯೂರಪ್ಪ

ಗುರುವಾರ ಬೆಂಗಳೂರಿನಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನಾ ಸಮಾರಂಭ ಮತ್ತು ಜಿಲ್ಲಾಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಗೊಂದಲವಿದ್ದರೂ ಕೆಜೆಪಿ 6 ಸ್ಥಾನಗಳಲ್ಲಿ ಗೆದ್ದಿದೆ. 35 ಕ್ಷೇತ್ರಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಎಂದರು.
ಚುನಾವಣೆಯಲ್ಲಿ ಶೇ. 10ರಷ್ಟು ಮತಗಳನ್ನು ಕೆಜೆಪಿ ಪಡೆದಿದೆ. ಸಾಕಷ್ಟು ಇತಿಹಾಸ ಹೊಂದಿರುವ ಬಿಜೆಪಿ, ಜೆಡಿಎಸ್ ಕೇವಲ ಶೇ. 20ರಷ್ಟು ಮತ ಪಡೆದಿವೆ. ಅಲ್ಪ ಅವಧಿಯಲ್ಲೇ ಕೆಜೆಪಿ ಉತ್ತಮ ಸಾಧನೆ ಮಾಡಿದೆ. ಕಾಲಾವಕಾಶದ ಕೊರತೆಯಿಂದ ನಮಗೆ ಸೋಲಾಗಿದೆ ಎಂದು ಯಡಿಯೂರಪ್ಪ ವಿಶ್ಲೇಷಿಸಿದರು.
ಕೇವಲ ಇಬ್ಬರು ಶಾಸಕರು ಮಾತ್ರ ಇದ್ದ ಪಕ್ಷವನ್ನು (ಬಿಜೆಪಿ) ಅಧಿಕಾರಕ್ಕೆ ತರುವಂತೆ ಪಕ್ಷ ಸಂಘಟನೆ ಮಾಡಿದ್ದೇನೆ. ಜನರು ನಮ್ಮ ಜೊತೆ ಇದ್ದಾರೆ, ಮುಂದಿನ ದಿನಗಳಲ್ಲಿ ಕೆಜೆಪಿಯನ್ನು ಪ್ರಬಲ ಸಂಘಟನೆಯಾಗಿ ರೂಪಿಸಿ ಅಧಿಕಾರಕ್ಕೆ ಬರುವತ್ತ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಅವರು ಕರೆ ನೀಡಿದರು.
ಇಂದಿನಿಂದಲೇ ಪಕ್ಷ ಸಂಘಟನೆ ಮಾಡಿಕೊಂಡು ಮುಂಬರುವ ಲೋಕಸಭೆ ಚುನಾವಣೆಯತ್ತ ಗಮನ ಹರಿಸೋಣ. ಬೇರೆಯವರನ್ನು ಟೀಕಿಸದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮನಸ್ಸು ಗೆಲ್ಲೋಣ. ಮುಂದಿನ ಬಾರಿ ಖಂಡಿತ ಗೆಲುವು ದೊರಕುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗೆದ್ದಿಲ್ಲ : ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶ್ರಮಪಟ್ಟು ಅಧಿಕಾರ ಪಡೆದಿಲ್ಲ. ಕಾಂಗ್ರೆಸ್ ನಂಬಿ ಜನರು ಮತನೀಡುವುದು ಇಲ್ಲ. ಬಿಜೆಪಿ, ಕೆಜೆಪಿ ಮತ್ತು ಜೆಡಿಎಸ್ ನ ಮತಗಳ ವಿಭಜನೆಯಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ವಿಶ್ಲೇಷಿಸಿದರು.
ಬಿಜೆಪಿ ಆತ್ಮ ಬಿಎಸ್ವೈ : ಪಕ್ಷದ ಉಪಾಧ್ಯಕ್ಷ ಎಂ. ಶ್ರೀನಿವಾಸ್ ಮಾತನಾಡಿ, ಬಿಜೆಪಿ ಶೋಚನೀಯ ಪರಿಸ್ಥಿತಿಗೆ ತಲುಪಿದೆ. ಯಡಿಯೂರಪ್ಪ ಬಿಜೆಪಿಯ ಆತ್ಮವಾಗಿದ್ದರು. ಆತ್ಮವಂಚನೆ ಮಾಡಿದ ಪಕ್ಷಕ್ಕೆ ಜನರು ತಕ್ಕಪಾಠ ಕಲಿಸಿದ್ದಾರೆ. ಯಡಿಯೂರಪ್ಪ ಹೊರತಾಗಿ ಬಿಜೆಪಿ ಅಧಿಕಾರ ಪಡೆಯುವುದು ಕನಸಿನ ಮಾತು ಎಂದು ಹೇಳಿದರು.
ಒಕ್ಕೊರಲ ನಿರ್ಣಯ : ರಾಜ್ಯ ಮತ್ತು ಜನರ ಹಿತದೃಷ್ಟಿಯಿಂದ ಪಕ್ಷದ ಪರವಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ನೀಡುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಮಾಜಿ ಸಚಿವ ಸಿ.ಎಂ. ಉದಾಸಿ, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯಕುಮಾರ್, ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ, ಬಿ.ಆರ್. ಪಾಟೀಲ್, ವಿಶ್ವನಾಥ್ ಪಾಟೀಲ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.(ಫಲಿತಾಂಶ: ಜಿಲ್ಲಾವಾರು ಗೆದ್ದವರು, ಸೋತವರ ವಿವರ)












Click it and Unblock the Notifications