ರೈಸ್ ಪಾಲಿಟಿಕ್ಸ್: ಎಲ್ರಿಗೂ 3 ರೂ ಗೆ ಅಕ್ಕಿ ನೀಡಿ
ಬೆಂಗಳೂರು, ಮೇ 15: BPL ಬಡ ಕುಟುಂಬಗಳಿಗೆ ತಲಾ 1 ರೂಪಾಯಿಯಂತೆ ತಿಂಗಳಿಗೆ 30 ಕೆಜೆ ಅಕ್ಕಿಯನ್ನು ಜೂನ್ ತಿಂಗಳಿಂದಲೇ ಜಾರಿಗೆ ತರುವುದಾಗಿ ನವೋತ್ಸಾಹಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಸರಿಯಷ್ಟೇ. ಆದರೆ ಇತರೆ ವರ್ಗಗಳ ಜನರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಎಲ್ಲ ಕುಟುಂಬಗಳಿಗೆ ತಲಾ 3 ರೂ ದರದಲ್ಲಿ ಅಕ್ಕಿ ಮತ್ತು 2 ರೂಪಾಯಿ ದರದಲ್ಲಿ ಗೋಧಿ ಸಹಿತ ಒಟ್ಟು 35 ಕೆಜಿ ಆಹಾರ ಧಾನ್ಯದ ಖಾತರಿಗೆ ಒತ್ತಾಯ ಕೇಳಿಬಂದಿದೆ. ಈ ಸಂಬಂಧ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಜನ ಹೋರಾಟ ರೂಪಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಮರ್ಜಿತ್ ಕೌರ್ ಅವರು ತಿಳಿಸಿದ್ದಾರೆ.

ಜತೆಗೆ, ಅಗತ್ಯ ವಸ್ತುಗಳ ಶೇಖರಣೆ ಹಾಗೂ ಸಟ್ಟಾ ವ್ಯಾಪಾರ ನಿಷೇಧ ಸೇರಿದಂತೆ ನಾನಾ ಬೇಡಿಕೆಗಳನ್ನು ಒತ್ತಾಯಿಸಿ ಸಿಪಿಐ ದೇಶಾದ್ಯಂತ ಹೋರಾಟ ನಡೆಸಲಿದೆ ಎಂದೂ ಕೌರ್ ಪ್ರಕಟಿಸಿದ್ದಾರೆ. ಸದ್ಯದಲ್ಲೇ ರಾಷ್ಟ್ರವ್ಯಾಪಿ ಆಂದೋಲನ ನಡೆಸಿ, ಬಳಿಕ ಸೆಪ್ಟಂಬರ್ ತಿಂಗಳಲ್ಲಿ ಸತ್ಯಾಗ್ರಹವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಕೌರ್ ತಿಳಿಸಿದ್ದಾರೆ.
ಭೂ ರಹಿತರಿಗೆ ಭೂಮಿ, ವಸತಿ ಇಲ್ಲದವರಿಗೆ ವಸತಿ, ಕೃಷಿ ಕಾರ್ಮಿಕರಿಗೆ, ರೈತರಿಗೆ, ಕುಶಲ ಕರ್ಮಿಗಳಿಗೆ ಮತ್ತು ಇತರ ದುಡಿಯುವ ವರ್ಗದ ಎಲ್ಲರಿಗೂ ನಿವೃತ್ತಿ ವೇತನ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲಿಂಗ ತಾರತಮ್ಯಕ್ಕೆ ತಡೆ, ಕಾರ್ಮಿಕ ಕಾನೂನುಗಳ ಉಲ್ಲಂಘನೆಯನ್ನು ನಿಯಂತ್ರಿಸಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿ, ಭ್ರಷ್ಟಾಚಾರ ನಿಯಂತ್ರಣ ಮುಂತಾದ ಬೇಡಿಕೆಗಳನ್ನೂ ಸಿಪಿಐ ಮಂಡಿಸಿದೆ.












Click it and Unblock the Notifications