ಗೋಹತ್ಯೆ ನಿಷೇಧ ವಾಪಸಿಗೆ ಸಿಟಿ ರವಿ ತೀವ್ರ ವಿರೋಧ
ಬೆಂಗಳೂರು, ಮೇ 14: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಗೋಹತ್ಯೆಗೆ ಅನುವು ಮಾಡಿಕೊಡುವಂತೆ ಗೋಹತ್ಯೆ ನಿಷೇಧ ಕಾಯಿದೆ ತಿದ್ದುಪಡಿಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಪ್ರಕಟಿಸುತ್ತಿದ್ದಂತೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ.
ಲೋಕಸಭಾ ಚುನಾವಣೆಯ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಗೋಹತ್ಯೆಯಂತಹ ದುಸ್ಸಾಹಸಕ್ಕೆ ಕೈಹಾಕುತ್ತಿದೆ. ಇದು ಸರ್ವತಾ ಸಾಧುವಲ್ಲ ಎಂದು ಗೋ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಜಿ ಸಚಿವರಾದ ಸಿಟಿ ರವಿ, ಬಿಜೆ ಪುಟ್ಟಸ್ವಾಮಿ ಮತ್ತು ಜೀವರಾಜ ಅವರು ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಅವರು ಗೋಹತ್ಯೆ ನಿಷೇಧ ಕಾಯಿದೆ (ತಿದ್ದುಪಡಿ)ಯನ್ನು ವಾಪಸ್ ತೆಗೆದುಕೊಳ್ಳುವ ವಿಚಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
'ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು' ಎಂಬುದು ಮಹಾತ್ಮಗಾಂಧಿ ಅವರ ಸ್ಪಷ್ಟ ನಿಲುವಾಗಿತ್ತು. ಈಗ ಅದಕ್ಕೆ ವಿರುದ್ಧವಾಗಿ ಗೋಹತ್ಯೆಗೆ ಅವಕಾಶ ಕಲ್ಪಿಸಿದರೆ ಅದು ಗಾಂಧೀಜಿ ಅವರ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ರವಿ ಸುದ್ದಿಗಾರರಿಗೆ ಇದೇ ವೇಳೆ ತಿಳಿಸಿದರು.
ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಿಂದಾಗಿ ಈ ವಿವಾದಿತ ಗೂಡಿಗೆ ಕೈಹಾಕಿದೆ. ಆದರೆ ಗೋಹತ್ಯೆ ನಿಷೇಧ ವಿಷಯದಲ್ಲಿ ಸಿದ್ದು ಅವರ ಮನವೊಲಿಸುವುದಾಗಿಯೂ ಅವರು ತಿಳಿಸಿದರು.
ಏನಿದು ಗೂಹತ್ಯೆ ನಿಷೇಧ ರಾಜಕೀಯ: 'ಗೋಹತ್ಯೆ ನಿಷೇಧ ಕಾಯಿದೆ ಸಂಬಂಧ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ 1964 ಕಾಯಿದೆಯಂತೆ ಮುಂದುವರಿಸುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
1964ರ ಗೋಹತ್ಯೆ ನಿಷೇಧ ಕಾಯಿದೆಯಲ್ಲಿ ರೋಗಗ್ರಸ್ತ, ನಿರುಪಯೋಗಿ, ಬಿಡಾಢಿ ಗೋವುಗಳನ್ನು ಮಾತ್ರವೇ ಹತ್ಯೆ ಮಾಡುವುದಕ್ಕೆ ಅನುಮತಿ ನೀಡಲಾಗಿತ್ತು. ಸುಸ್ಥಿತಿಯಲ್ಲಿರುವ ಗೋವುಗಳನ್ನು ಸಾಯಿಸಬಾರದು ಎಂದೂ ಕಾಯಿದೆಯಲ್ಲಿ ಹೇಳಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರ ಎಲ್ಲ ರೀತಿಯ ಗೋ ವಧೆಯನ್ನು ನಿಷೇಧಿಸಿತ್ತು. ಅದನ್ನು ವಾಪಸ್ ಪಡೆಯುವುದಾಗಿ ಸಿದ್ದು ಈಗ ಘೋಷಿಸಿರುವುದು ವಿವಾದವೆಬ್ಬಿಸಿದೆ.












Click it and Unblock the Notifications