ಬೆಳಗಾವಿ : ಅಂಗನವಾಡಿ ಕಾರ್ಯಕರ್ತೆ ಭೀಕರ ಕೊಲೆ

ನಿಂಗಾಪುರ ಗ್ರಾಮದ ಬಾವಿವೊಂದರಲ್ಲಿ ಗಿರಿಜಾ(22) ಅವರ ಶವ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಗ್ರಾಮಸ್ಥರು ಇಂದು ಬೆಳಗ್ಗೆ ಬಾವಿಯ ಬಳಿ ಹೋದಾಗ ಗಿರಿಜಾ ಅವರ ಮೃತ ದೇಹ ಕಂಡು ಬಂದಿದೆ. ಸೋಮವಾರ ತಡರಾತ್ರಿ, ಅಥವ ಮಂಗಳವಾರ ಬೆಳಗ್ಗೆ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.
ಗಿರಿಜಾ ಅವರ ಮೃತದೇಹ ನೋಡಿದ ಗ್ರಾಮಸ್ಥರು ಕಿತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಮೃತದೇಹ ಹೊರತಗೆದ ಪೊಲೀಸರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ನಂತರ ದೇಹವನ್ನು ಬಾವಿಗೆ ಎಸೆದಿರುವುದು ತಿಳಿದು ಬಂದಿದೆ.
ನಿಂಗಾಪುರದ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಕಿತ್ತೂರು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗಿರಿಜಾ ಅವರನ್ನು ಇಟಗಿ ಗ್ರಾಮದ ಶಿವಾನಂದ ಕಟ್ಟೀಮನಿ ಎಂಬುವವರೊಂದಿಗೆ ವಿವಾಹವಾಗಿತ್ತು. ಆದರೆ, ನಿಂಗಾಪುರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಕೆಲಸ ದೊರಕಿದ್ದರಿಂದ ನಾಲ್ಕು ವರ್ಷಗಳಿಂದ ಗ್ರಾಮದಲ್ಲೇ ವಾಸವಾಗಿದ್ದರು.
ಪ್ರತಿ ಮಂಗಳವಾರ ಗಿರಿಜಾ ಊರಿನಿಂದ ಅರ್ಧ ಕಿ.ಮೀ.ದೂರವಿರುವ ದೇವಾಲಯಕ್ಕೆ ಹೋಗಿ ಬರುತ್ತಿದ್ದರು. ಈ ಮಂಗಳವಾರವೂ ಅವರು ದೇವಾಲಯಕ್ಕೆ ತೆರಳಿದಾಗ ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಆಕೆಯನ್ನು ಹತ್ತಿರದ ಬಾವಿಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.












Click it and Unblock the Notifications