ಸಿದ್ದು ಪದ ಗ್ರಹಣ ಫಂಕ್ಷನ್ನಿಗೆ ವಿಪಕ್ಷವೇ ಚಕ್ಕರ್
ಬೆಂಗಳೂರು,ಮೇ 13: ಕರ್ನಾಟಕದಲ್ಲಿ ಸುಮಾರು 9 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ತನ್ನ ರಾಜ್ಯಭಾರ ಆರಂಭಿಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರದ ಜನ ಸಾಗರದ ನಡುವೆ ಸಿದ್ದರಾಮಯ್ಯ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಅದರೆ, ಸಿದ್ದು ಸಿಎಂ ಸಂಭ್ರಮಾಚರಣೆಯಲ್ಲಿ ವಿರೋಧ ಪಕ್ಷದವ ಗೈರು ಹಾಜರಿ ಜೊತೆಗೆ ಕೆಲ ಪ್ರಮುಖ ಕಾಂಗ್ರೆಸ್ ನಾಯಕರೇ ನಾಪತ್ತೆಯಾಗಿದ್ದರು.
ವಿರೋಧ ಪಕ್ಷವಾಗಿರುವ ಜೆಡಿಎಸ್, ಬಿಜೆಪಿ ನಾಯಕರ ಅನುಪಸ್ಥಿತಿ ಜೊತೆಗೆ ಕಾಂಗ್ರೆಸ್ಸಿನ ಪ್ರಮುಖ ನಾಯಕರ ಗಣ್ಯ ಹಾಜರಿಯಲ್ಲಿ ಸಿದ್ದರಾಮಯ್ಯ ಸೋಮವಾರ(ಮೇ.13) 28ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನಾಪತ್ತೆಯಾದ ನಾಯಕರು ಎಲ್ಲಿ ಎಂದು ಹುಡುಕುತ್ತಾ ಹೋದಂತೆ ಕೆಲವರು ಪರಮೇಶ್ವರ್ ಅವರ ಕಚೇರಿ ಬಳಿ ಮತ್ತೆ ಕೆಲವರು ದೆಹಲಿ ವಿಮಾನ ಟಿಕೆಟ್ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು.

ಇಂದೇ ಸಂಜೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ದೆಹಲಿಗೆ ತೆರಳಿ ಸಚಿವ ಸಂಪುಟದ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಯಿತ್ತು. ಆದರೆ, ನಾಳೆ ಅಥವಾ ನಾಡಿದ್ದು ದೆಹಲಿಗೆ ತೆರಳುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾಗಾಗಿ ಅಷ್ಟರಲ್ಲಿ ಎಷ್ಟು ಸಾಧ್ಯವೋ ಅಷ್ಟು ಲಾಬಿ ನಡೆಸಿ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳಲು ಶಾಸಕರು ಹರಸಾಹಸ ಪಡುತ್ತಿದ್ದಾರೆ ಎಂಬ ಸುದ್ದಿ ಇದೆ.
ಜೆಡಿಎಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭದಿಂದ ದೂರ ಉಳಿದಿದ್ದರು. ಅಲ್ಲದೆ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಬಂದಿರಲಿಲ್ಲ.
ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಕೂಡ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಧರಂ ಸಿಂಗ್ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ಮಾಫಿ ಮಾಡಬಹುದು ಆದರೆ ಇತರೆ ನಾಯಕರು ಈಗಲೇ ಸಿದ್ದು ವಿರುದ್ಧ ನಿಂತಿರುವುದು ಯಾಕೋ ಸರಿ ಕಾಣುತಿಲ್ಲ.
ಉಳಿದಂತೆ ಚುನಾವಣೆಗೆ ಮುನ್ನ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಹುದ್ದೆ ದೊರೆಯದ ಅಸಮಾಧಾನದ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಏಕತೆ ಪ್ರದರ್ಶಿಸಿದರು. ನೆರೆ ರಾಜ್ಯಗಳ ಪೈಕಿ ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹಾಜರಿದ್ದು, ನೂತನ ಸಿಎಂಗೆ ಶುಭ ಕೋರಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವೇದಿಕೆಗೆ ಆಗಮಿಸುತ್ತಿದ್ದಂತೆ ಪ್ರೇಕ್ಷಕರು ಜಯ ಘೋಷ ಮೊಳಗಿಸಿದರು.ಸಿದ್ದು ಹಾಗೂ ಕೃಷ್ಣ ಹಸ್ತಲಾಘವ ಮಾಡಿ ಖುಷಿಯಾಗಿ ವೇದಿಕೆಯಲ್ಲಿ ಕಂಡು ಬಂದರು.
ಕಾಂಗ್ರೆಸ್ ನಾಯಕರಾದ ಎಂ.ವಿ.ರಾಜಶೇಖರನ್, ಎಸ್.ಆರ್.ಪಾಟೀಲ್, ಮೋಟಮ್ಮ, ಅಂಬರೀಶ್, ಸಿ.ಎಂ.ಇಬ್ರಾಹಿಂ, ಶಾಸಕರಾದ ಟಿ.ಬಿ.ಜಯಚಂದ್ರ, ಎಚ್.ಕೆ.ಪಾಟೀಲ್, ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ಶ್ರೀಕಂಠಪ್ಪ, ಸುರೇಶ್ ಬಾಬು ಸೇರಿದಂತೆ ಮತ್ತಿತರರು ಹಾಜರಿದ್ದರು. ಸಂಸದ ಡಿ.ಬಿ.ಚಂದ್ರೇಗೌಡ, ಎಚ್.ವಿಶ್ವನಾಥ್, ಧೃವನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಸಾಹಿತಿಗಳಾದ ಹಂಪನಾಗರಾಜಯ್ಯ, ಕಮಲಹಂಪನಾ, ಲೀಲಾದೇವಿ ಆರ್.ಪ್ರಸಾದ್, ಪ್ರೊ.ಕಾಳೇಗೌಡ ನಾಗವಾರ, ಚಂಪ, ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಸಿಎಂ ಕುಟುಂಬ ಹಾಜರಿ: ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಸಿದ್ದರಾಮಯ್ಯನವರ ಕುಟುಂಬ ಹಾಗೂ ಬಂಧುವರ್ಗ ಸಾಕ್ಷಿಯಾಯಿತು. ಪತ್ನಿ ಪಾರ್ವತಿ, ಪುತ್ರರಾದ ರಾಖೇಶ್, ಡಾ.ಯತೀಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು.ಪದಗ್ರಹಣ ಸಮಾರಂಭದ ವೇದಿಕೆ ಸಮೀಪವೇ ಕುಟುಂಬ ವರ್ಗದವರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.












Click it and Unblock the Notifications