ಪ್ರತಿಪಕ್ಷ ಸ್ಥಾನ ಜೆಡಿಎಸ್ ಮಡಿಲಿಗೆ?

ಮತಗಳಿಕೆ ಆಧಾರವ ಮೇಲೆ ಪ್ರತಿಪಕ್ಷ ಸ್ಥಾನ ನಿರ್ಧರಿಸಿದರೆ ಜೆಡಿಎಸ್ ಪ್ರತಿಪಕ್ಷ ಸ್ಥಾನ ಅಲಂಕರಿಸಲಿದೆ. ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದು ತೀವ್ರ ಮುಖಭಂಗ ಅನುಭವಿಸಲಿದೆ. ಸರ್ಕಾರ ರಚನೆಯಾಗಿ ಮೊದಲ ಕಲಾಪ ನಡೆಯುವಾಗ ಸ್ಪೀಕರ್ ಪ್ರತಿಪಕ್ಷವನ್ನು ಆಯ್ಕೆ ಮಾಡಬೇಕಾಗುತ್ತದೆ.
ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 40 ಶಾಸಕರು ಜಯಗಳಿಸಿದ್ದು ಒಟ್ಟು 25,23,283 ಮತಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಬಿಜೆಪಿಯಿಂದಲೂ 40 ಶಾಸಕರು ಆಯ್ಕೆಯಾಗಿದ್ದು ಒಟ್ಟು 23,89,513 ಮತಗಳನ್ನು ಮಾತ್ರ ಪಡೆದಿದ್ದಾರೆ. ಪಡೆದ ಮತಗಳ ಆಧಾರದ ಮೇಲೆ ಜೆಡಿಎಸ್ ಪ್ರತಿಪಕ್ಷವಾಗಲಿದೆ.
ಎರಡು ಪಕ್ಷಗಳು ಸಮಬಲ ಸಾಧಿಸಿದ ಸಂದರ್ಭದಲ್ಲಿ ವಿಧಾನಮಂಡಲ ನಿಯಮದ ಪ್ರಕಾರ, ಗೆದ್ದ ಶಾಸಕರ ಒಟ್ಟು ಮತ ಗಳಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದರ ಪ್ರಕಾರ ಜೆಡಿಎಸ್ ಬಿಜೆಪಿಗಿಂತ 1,33,770 ಹೆಚ್ಚು ಮತ ಪಡೆದಿದ್ದು, ಪ್ರತಿಪಕ್ಷ ಸ್ಥಾನ ಅದರ ಪಾಲಾಗುವುದು ಖಾತ್ರಿಯಾಗಿದೆ.
ಮತಗಳಿಕೆಯ ಪ್ರಮಾಣದಲ್ಲಿ ಜೆಡಿಎಸ್ ಗೆಲುವು ಸಾಧಿಸಿ ಪ್ರತಿಪಕ್ಷ ಸ್ಥಾನ ಅಲಂಕರಿಸಿದರೆ ಬಿಜೆಪಿ ನಾಯಕರಿಗೆ ನಿರಾಸೆ ಉಂಟಾಗುವುದು ಖಚಿತ. ಅಧಿಕಾರ ದೊರೆಯಲಿಲ್ಲ ಪ್ರತಿ ಪಕ್ಷ ಸ್ಥಾನವನ್ನು ಪಡೆಯಬಹುದು ಎಂಬ ನಾಯಕರ ಲೆಕ್ಕಾಚಾರ ತೆಲೆಕೆಳಗಾಗಲಿದೆ.
ಸ್ಪೀಕರ್ ಹೆಗಲಿಗೆ : 14ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಸ್ಪೀಕರ್ ಆಯ್ಕೆ ನಡೆಯಲಿದೆ. ಇದರ ಬಳಿಕ ಪ್ರತಿಪಕ್ಷ ಮಾನ್ಯತೆ ಯಾರಿಗೆ ನೀಡಬೇಕು ಎಂದು ಸ್ಪೀಕರ್ ನಿರ್ಧರಿಸಲಿದ್ದಾರೆ. ಲಾಟರಿ ಮೂಲಕ ಆಯ್ಕೆ ಮಾಡುವುದಕ್ಕಿಂತ ಶೇಕಡಾವಾರು ಮತ ಗಳಿಕೆ ಲೆಕ್ಕವೇ ಸರಿಯಾದ ಕ್ರಮ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.
ಬಿಜೆಪಿ ಕಣ್ಣು ಪಿರಿಯಾಪಟ್ಟಣ ಮೇಲೆ : ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಬಿಜೆಪಿ ಅಭ್ಯರ್ಥಿ ಸಣ್ಣಮೊಗೆ ಗೌಡ ಅವರು ಮರಣ ಹೊಂದಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿದೆ. ಅನುಕಂಪದ ಆಧಾರದ ಮೇಲೆ ಪಿರಿಯಾಪಟ್ಟಣ ಬಿಜೆಪಿ ವಶವಾಗಲಿದೆ ಎಂಬುದು ಪಕ್ಷದ ನಾಯಕರ ಅಭಿಪ್ರಾಯ.
ಪಿರಿಯಾಪಟ್ಟಣದಲ್ಲಿ ಬಿಜೆಪಿ ಜಯಗಳಿಸಿದರೆ ಒಂದು ಸ್ಥಾನ ಹೆಚ್ಚಾಗುತ್ತದೆ. ಆಗ ಜೆಡಿಎಸ್ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಪ್ರತಿಪಕ್ಷ ಸ್ಥಾನ ಅಲಂಕರಿಸಬಹುದು ಎಂಬ ಲೆಕ್ಕಾಚಾರಗಳು ಇವೆ. ಆದರೆ, ಕಾಂಗ್ರೆಸ್ ಸರ್ಕಾರ ರಚಿಸುವುದರಿಂದ ಪಿರಿಯಾಪಟ್ಟಣವೂ ಕೈವಶವಾಗಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.












Click it and Unblock the Notifications