ಉಗ್ರ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದ ಬೆಂ ಪೊಲೀಸರು
ಬೆಂಗಳೂರು,ಮೇ 7: ಬೆಂಗಳೂರು ರೈಲ್ವೆ ನಿಲ್ದಾಣ ಸೇರಿದಂತೆ ಅನೇಕ ಆಯಕಟ್ಟಿನ ಸ್ಥಳಗಳ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತ ಮಾಹಿತಿಯ ಬೆನ್ನಿಗೆ ಬೆಂಗಳೂರು ಪೊಲೀಸರು ತಮ್ಮ ಉಗ್ರ ಪಟ್ಟನ್ನು ಮತ್ತಷ್ಟು ಬಿಗಿಯಾಗಿಸಿದ್ದಾರೆ.
ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಈಗಾಗಲೇ ಶಂಕಿತ ಉಗ್ರರನ್ನು ಬೆಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ಭೇದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ, ಕೆಲ ಕಡೆಗಳಿಂದ ಕಾನೂನು ತೊಡರುಗಾಲು ಎದುರಾಗಿದ್ದರೂ ಎದೆಗುಂದದೆ ಆಟೋರಾಜನ ಸಾಕ್ಷ್ಯದೊಂದಿಗೆ ಪೊಲೀಸರು ಬಂಧಿತ ಉಗ್ರರ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಇದೇ ವೇಳೆ, ಏಪ್ರಿಲ್ 17ರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ Al-Ummah ಸಂಘಟನೆಯ ಮತ್ತಷ್ಟು ಉಗ್ರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಐದು ಉಗ್ರರ ಪೈಕಿ ಒಬ್ಬ ಭಾನುವಾರ ರಾತ್ರಿ ಕೊಯಮತ್ತೂರಿನಲ್ಲಿ ಸಿಕ್ಕಿಬಿದ್ದಿದ್ದರೆ, ಉಳಿದ ನಾಲ್ವರು ಜೈಲಿನಲ್ಲಿದ್ದುಕೊಂಡೇ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದ ನಾಲ್ವರು ಆರೋಪಿಗಳನ್ನು 'ಕೈದಿಗಳ ವರ್ಗಾವಣೆಯ ವಾರೆಂಟ್' (ಪ್ರಿಸನರ್ ಆನ್ ಟ್ರಾನ್ಸಿಟ್) ಅಡಿ ಬಂಧಿಸಲಾಗಿದೆ. ಕೊಯಮತ್ತೂರಿನಲ್ಲಿ ಬಂಧಿಸಿದ ಆರೋಪಿ ಸೇರಿದಂತೆ ಐವರನ್ನೂ ನಗರದಕ್ಕೆ ಕರೆತರಲಾಗಿದೆ.
ಸುಲೆಮಾನ್ ಅಲಿಯಾಸ್ ಮಾನ್ ಬೈ ಎಂಬಾತ ಕೊಯಮತ್ತೂರಿನಲ್ಲಿ ಸೆರೆಸಿಕ್ಕ ಆರೋಪಿ. ರೆಹಮತುಲ್ಲಾ, ಅಸ್ಗರ್ ಅಲಿ, ವಲೈಯಲ್ ಹಕೀಂ ಹಾಗೂ ಟೆಂಕಾಸಿ ಸುಲೇಮಾನ್ ಜೈಲಿನಲ್ಲಿದ್ದುಕೊಂಡು ಸ್ಫೋಟಕ್ಕೆ ಕುಮ್ಮಕ್ಕು ನೀಡಿದವರು.
ಬಂಧಿತರನ್ನು 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಆರ್. ಹುಲಗಿ ಅವರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ 9ಕ್ಕೇರಿದೆ.