ಜುಲೈನಲ್ಲಿ ಓಡಲಿದೆ ಪೀಣ್ಯ ಮೆಟ್ರೋ ರೈಲು

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಶೈಲಂ, ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಹಳಿಗಳ ಮೇಲೆ ರೈಲು ಸಂಚಾರ ನಡೆಸಿದಾಗ ಉಂಟಾಗುವ ಕಂಪನ ಪ್ರಮಾಣವನ್ನು ದಾಖಲು ಮಾಡಬೇಕಾಗಿದೆ. ಜುಲೈ 15ರ ನಂತರ ಈ ಕಾರ್ಯ ಪ್ರಾರಂಭವಾಗಲಿದೆ ಎಂದರು.
ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಂಡ ನಂತರ, ಜುಲೈ ಅಂತ್ಯದ ವೇಳೆಗೆ ಮೆಟ್ರೋ ಸಂಚಾರ ಆರಂಭಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಜೂನ್ ಮೊದಲ ವಾರದಲ್ಲಿ ಪೀಣ್ಯದಿಂದ ಸಂಪಿಗೆ ರಸ್ತೆಯ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ ಎಂದು ಮೊದಲು ಮೆಟ್ರೋ ನಿಗಮ ತಿಳಿಸಿತ್ತು.
ವಿಧಾನಸಭೆ ಜಂಟಿ ಸದಸ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಹನ್ಸ್ರಾಜ್ ಭಾರದ್ವಾಜ್, ಪೀಣ್ಯ ಹಾಗೂ ಸಂಪಿಗೆ ರಸ್ತೆ ನಡುವಿನ ಸಂಚಾರವು, 2012ರ ಡಿಸೆಂಬರ್ ನಲ್ಲಿ ಆರಂಭಗೊಳ್ಳಲಿದೆ ಎಂದು ಘೋಷಿಸಿದ್ದರು. ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಂಚಾರ ವಿಳಂಬವಾಗುತ್ತಲೇ ಸಾಗಿತ್ತು.
ನಂತರ ದಿನಗಳಲ್ಲಿ ಮೆಟ್ರೊ ನಿಗಮವು ಉದ್ಘಾಟನಾ ದಿನಾಂಕವನ್ನು ಜೂನ್ ಅಂತ್ಯಕ್ಕೆ ಮುಂದೂಡಿತ್ತು. ಇದೀಗ ನಿಗಮ ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ಉತ್ತರ ಭಾಗದ ಮೆಟ್ರೊ ಮಾರ್ಗದ ಪರೀಕ್ಷಾರ್ಥ ಸಂಚಾರವೇ 2013ರ ಜುಲೈಗೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸುರಂಗ ಮಾರ್ಗ 2014ಕ್ಕೆ ಪೂರ್ಣ : ಮೂರು ತಿಂಗಳ ಹಿಂದೆ ಕೆ.ಆರ್.ರಸ್ತೆಯಿಂದ ಸುರಂಗ ಮಾರ್ಗ ಕೊರೆಯಲು ಆರಂಭಿಸಿದ್ದ 'ಕೃಷ್ಣಾ' ಹೆಸರಿನ ಟನಲ್ ಬೋರಿಂಗ್ ಮಶೀನ್ ಸೋಮವಾರ ವಾಣಿ ವಿಲಾಸ ಆಸ್ಪತ್ರೆ ಮುಂಭಾಗದ ಗುರಿ ತಲುಪಿದೆ.
ಮುಂದೆ ಚಿಕ್ಕಪೇಟೆ ಕಡೆ ಮತ್ತೆ ಕಾಮಗಾರಿಯನ್ನು ಆರಂಭಿಸಲಿದ್ದೇವೆ. ಇನ್ನೊಂದು ಹತ್ತು ದಿನಗಳ ಒಳಗೆ ಮತ್ತೊಂದು ಟನಲ್ ಬೋರಿಂಗ್ ಮಶೀನ್ ಕೂಡ ಕಾರ್ಯಾರಂಭ ಮಾಡಲಿದೆ. ಸ್ಥಳದ ಅಭಾವವಿರುವ ಕಾರಣ ಯಂತ್ರವನ್ನು ಹಾಗೆಯೇ ಸುರಂಗ ಮಾರ್ಗದಲ್ಲಿ ಮುಂದುವರಿಸಲಿದ್ದೇವೆ ಎಂದರು.
ಜಕ್ಕರಾಯನ ಕೆರೆ ಕಡೆಯಿಂದ ಮೆಜೆಸ್ಟಿಕ್ ಕಡೆ ಸುರಂಗ ಮಾರ್ಗದ ಕಾಮಗಾರಿ ಕೆಲವು ದಿನಗಳಲ್ಲಿ ಆರಂಭವಾಗಲಿದೆ. ಒಟ್ಟಾರೆ ಮೆಟ್ರೊ ಸುರಂಗ ಮಾರ್ಗಗಳ ಕಾಮಗಾರಿಯು 2014ರ ಅಂತ್ಯದಲ್ಲಿ ಮುಗಿಯುವ ಭರವಸೆ ಇದೆ ಎಂದು ಮಾಹಿತಿ ನೀಡಿದರು.
ಎಂಜಿ ರಸ್ತೆಯಲ್ಲಿ ಬಣ್ಣದ ಚಿತ್ತಾರ : ಎಂ.ಜಿ.ರಸ್ತೆಯ ಮೆಟ್ರೋ ಸೇತುವ ಕೆಳಗೆ ಎಂಟು ಕೋಟಿ ರೂ.ವೆಚ್ಚದಲ್ಲಿ ಪುನಶ್ಚೇತನಗೊಂಡಿರುವ ಮೆಟ್ರೊ ಬುಲವಾರ್ಡ್ ಸಾರ್ವಜನಿಕರ ಪ್ರವೇಶಕ್ಕೆ ಸೋಮವಾರ ಮುಕ್ತಗೊಂಡಿದೆ. ಇದರಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಕರ್ನಾಟಕದ ಹೆಮ್ಮೆಯ ಕಲೆ, ಸಂಸ್ಕತಿ ಬಿಂಬಿಸುವ ಪರಿಕರಗಳನ್ನು ಇಲ್ಲಿ ಅಳವಡಿಸಲಾಗಿದೆ. ಜತೆಗೆ ಮಕ್ಕಳಿಗೆ ಸಮಯ ಕಳೆಯಲು ಸೌಲಭ್ಯ ಕಲ್ಪಿಸಲಾಗಿದೆ. ಒಟ್ಟು 550 ಮೀ. ಉದ್ದದ ಬುಲವಾರ್ಡ್ ಸಂಜೆ ವೇಳೆ ಜನರಿಗೆ ಒಂದು ಕಿ.ಮೀ ವಾಯು ವಿಹಾರಕ್ಕೆ ಸೂಕ್ತ ತಾಣವಾಗಿದೆ.












Click it and Unblock the Notifications