ಯಡಿಯೂರಪ್ಪ ಬಿಜೆಪಿಗೆ ವಾಪಸಾಗಲಿ: ಕೋರೆ ಮೊರೆ
ಬಿಜೆಪಿಯ 'ಎಕ್ಟಿಟ್' ಪೋಲ್ ಸಮ್ಮುಖದಲ್ಲಿ ಮತ್ತು ಕರ್ನಾಟಕ ಜನತಾ ಪಕ್ಷ ಬಿಜೆಪಿ ಪಾಲನ್ನು ಭಾರಿ ಪ್ರಮಾಣದಲ್ಲಿ ಕಸಿದಿರುವ ಹಿನ್ನೆಲೆಯಲ್ಲಿ ಮತದಾರನ ಮನದಿಂಗಿತ ಏನು ಎಂಬುದು ಸ್ಪಷ್ಟವಾಗಿರುವುದರಿಂದ ಬಿಜೆಪಿ ಮತ್ತು ಕೆಜೆಪಿ ಒಂದಾಗಬೇಕು. ಅದಕ್ಕಾಗಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮತ್ತೆ ಕರೆತರಬೇಕು ಎಂಬ ಕೂಗು ಫಲಿತಾಂಶಕ್ಕೂ ಮುನ್ನಾ ಸಮಯದಲ್ಲಿ ಬಲವಾಗಿ ಕೇಳಿಬಂದಿದೆ.
'ಯಡಿಯೂರಪ್ಪ ಅವರು ತರಾತುರಿಯಲ್ಲಿ ಪಕ್ಷ ಕಟ್ಟಿರಬಹುದು. ಆದರೆ ಅದಕ್ಕೂ ಮುನ್ನ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಅವರು. ಮೊದಲಿನಿಂದಲೂ ನಮ್ಮ ನಾಯಕರು ಅವರೇ. ಅವರು ಮತ್ತೆ ಬಿಜೆಪಿ ಸೇರಬೇಕು ಎಂಬುದು ನಮ್ಮಂತಹ ಅನೇಕ ನಾಯಕರ ಮೊರೆಯಾಗಿದೆ' ಎಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದರು.
ಈ ಸಂಬಂಧ, ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ ಕೋರೆ ಅವರು ಮತ್ತೆ ಯಡಿಯೂರಪ್ಪ ಪಕ್ಷದ ಸಾರಥ್ಯ ವಹಿಸಿ, ಪಕ್ಷವನ್ನು ಸದೃಢಗೊಳಿಸಬೇಕು ಎಂದು ಪಕ್ಷದಲ್ಲಿ ಬಹಳಷ್ಟು ಮಂದಿ ಆಶಿಸುತ್ತಾರೆ ಎಂದೂ ಕೋರೆ ಹೇಳಿದರು.
ತಾವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರವಾಸ ಕೈಗೊಂಡಿದ್ದು, ಎಲ್ಲ ಕಡೆಗೂ ಬಿಜೆಪಿ ಪರ ಅಲೆ ಇದೆ. ಹೀಗಾಗಿ ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 13 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಇಬ್ಬರು ಪ್ರಬಲ ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ ಹೊರತುಪಡಿಸಿ ಉಳಿದ ಇಬ್ಬರು ಬಲಾಢ್ಯ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಹಣ ಮತ್ತು ಹೆಂಡದ ಹೊಳೆಯನ್ನೇ ಹರಿಸಿದ್ದಾರೆ ಎಂದು ಕೋರೆ ಇದೇ ವೇಳೆ ಆರೋಪಿಸಿದ್ದಾರೆ.