ಚುನಾವಣಾ ನಿಮಿತ್ತ ಮದ್ಯ ಮಾರಾಟ ಬಂದ್
ಬೆಂಗಳೂರು, ಮೇ 2: ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ದಿನದಿಂದ ಚುನಾವಣಾ ಆಯೋಗ ಎಲ್ಲಾ ಪಕ್ಷಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅದರಲ್ಲೂ ಅಬಕಾರಿ ಇಲಾಖೆಯ ಉತ್ಪನ್ನಗಳ ಮೇಲೆ ಒಂದು ಕೈಮೇಲೇ.
ವಿಷಯಕ್ಕೆ ಬರುವುದಾದರೆ ರಾಜ್ಯದ ಬಾರ್ ಎಂಡ್ ರೆಸ್ಟೋರೆಂಟುಗಳಿಗೆ ರಜೆ ಇರುವುದು ವರ್ಷಕ್ಕೆ ಒಂದೇ ದಿನ ಅದು ಅಕ್ಟೋಬರ್ ಎರಡು ಗಾಂಧಿ ಜಯಂತಿಯ ದಿನದಂದು. ಅದು ಬಿಟ್ಟರೆ ಘೋಷಿತ ರಜೆ ಅನ್ನುವುದು ಇಲ್ಲವೇ ಇಲ್ಲ.
ಹೀಗೆ ಎಲ್ಲಾದರೂ ಚುನಾವಣೆ, ಗಲಭೆಗಳು, ಮೆರವಣಿಗೆ ಹೀಗೆ ಶಾಂತಿಗೆ ಭಂಗ ಬರದಿರಲಿ ಎನ್ನುವ ಕಾರಣಕ್ಕೆ ಮುಂಜಾಗೃತಾ ಕ್ರಮವಾಗಿ ಬಂದ್ ಆಗುವುದುಂಟು.

ಮೇ ಐದರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಮೇ ಎಂಟರಂದು ನಡೆಯಲಿರುವ ಮತ ಎಣಿಕೆಗಾಗಿ ರಾಜ್ಯದ ಸಮಸ್ತ ಲಿಕ್ಕರ್ ಶಾಪುಗಳು ಮುಚ್ಚಲಿವೆ. ಶುಕ್ರವಾರ ಅಂದರೆ ಮೇ ಮೂರರಂದು ಸಂಜೆ ನಾಲ್ಕು ಗಂಟೆಗೆ ಬಾರುಗಳ ಬಾಗಿಲಿಗೆ ಚಿಲಕ ಬಿದ್ದರೆ ಮತ್ತೆ ಓಪನ್ ಆಗುವುದು ಮೇ ಆರರ ಸೋಮವಾರ (ಇದು ಚುನಾವಣೆಯ ಲೆಕ್ಕ)
ಇನ್ನು ಮತ ಎಣಿಕೆಯ ಮುನ್ನಾದಿನ ಅಂದರೆ ಮಂಗಳವಾರ ಮೇ 7 ಮಧ್ಯರಾತ್ರಿಯಿಂದ ಮೇ 8 ಮಧ್ಯರಾತ್ರಿಯ ವರೆಗೆ ಬಾಗಿಲು ತೆರೆಯುವಂತಿಲ್ಲ. ಆದಾಗ್ಯೂ,ಮೇ 8 ರಂದು ಪರಿಸ್ಥಿತಿಗೆ ಅನುಗುಣವಾಗಿ ಸಂಜೆ ಐದರ ನಂತರ ಬಾಗಿಲು ತೆರೆಯುವ ಅವಕಾಶವನ್ನು ಕಲ್ಪಿಸಿದೆ. ಈ ಆದೇಶವನ್ನು 'ಕಟ್ಟುನಿಟ್ಟಾಗಿ ಪಾಲಿಸಿ ಇಲ್ಲವಾದಲ್ಲಿ ಜೈಲಿಗೆ ಹೋಗಲು ಸಜ್ಜಾಗಿ' ಎಂದು ಆಯೋಗ ಫರ್ಮಾನು ಹೊರಡಿಸಿದೆ.
ಹಾಗಾಗಿ, ನಿಮ್ಮ ನಿಮ್ಮ ಶಕ್ತ್ಯಾನುಸಾರ ಮದ್ಯ ದಾಸ್ತಾನಿನಲ್ಲಿ ಇಟ್ಟಿಕೊಳ್ಳಿ, ಅಥವಾ ಇದೇ ಸರಿಯಾದ ಸಮಯ ಅಂದುಕೊಂಡು 'ಎಲ್ಲಾ ಓಕೆ ಎಣ್ಣೆ ಯಾಕೆ' ಎನ್ನುವ ಖಚಿತ ನಿರ್ಧಾರಕ್ಕೆ ಬನ್ನಿ ಎನ್ನುವುದು ನಮ್ಮ ಕಡೆಯಿಂದ ಒಂದು ಸಲಹೆ.












Click it and Unblock the Notifications