ಕೆಜೆಪಿ ಕಟ್ಟಿದ್ದು ಕೋಟಿಗಳ ರಕ್ಷಣೆಗೆ : ಸಿದ್ದರಾಮಯ್ಯ
ತಮ್ಮ ಪರಮಾಪ್ತ ಗೆಳೆಯ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ.ಇಬ್ರಾಹಿಂ ಅವರ ಪರವಾಗಿ ಪ್ರಚಾರ ನಡೆಸಲು ಭದ್ರಾವತಿಗೆ ಸೋಮವಾರ ಆಗಮಿಸಿದ ಅವರು, ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಅಪ್ಪ ಮಕ್ಕಳ ಪಕ್ಷವಾಗಿದ್ದು, ದೇವೇಗೌಡರು ಅವರ ಕುಟುಂಬದವರನ್ನು ಮಾತ್ರ ಬೆಳೆಯಲು ಬಿಡುತ್ತಾರೆ. ಬಿಜೆಪಿ ಶಿಸ್ತು ಮತ್ತು ದೇಶಭಕ್ತಿ ಬಗ್ಗೆ ಮಾತನಾಡುತ್ತದೆ. ಆದರೆ, ಪಕ್ಷದ ಸಚಿವರು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ ಎಂದು ಲೇವಡಿ ಮಾಡಿದರು.
ಕೆಜೆಪಿ ಪಕ್ಷ ಸ್ಥಾಪಿಸಿದ ಯಡಿಯೂರಪ್ಪ ಜೈಲಿಗೆ ಹೋಗುವಾಗಲೂ ವಿಕ್ಟರಿ ಗುರುತು ತೋರಿಸುತ್ತಿದ್ದರು. ತಮ್ಮ ಅಕ್ರಮ ಹಣ ಉಳಿಸಿಕೊಳ್ಳಲು ಯಡಿಯೂರಪ್ಪ ಪಕ್ಷ ಸ್ಥಾಪಿಸಿದ್ದಾರೆ. ಈ ಬಾರಿಯ ಚುನಾವಣೆಯೇ ಅವರಿಗೆ ಕೊನೆಯ ಚುನಾವಣೆ ಎಂದು ಅವರು ಭವಿಷ್ಯ ನುಡಿದರು.
ಖಾಸಗೀಕರಣವಿಲ್ಲ : ಭದ್ರಾವತಿ ಕ್ಷೇತ್ರದಲ್ಲಿ ಸಿ.ಎಂ.ಇಬ್ರಾಹಿಂಗೆ ಅವರಿಗೆ ಮತ ನೀಡಿ ಗೆಲ್ಲಿಸಿ, ಅವರನ್ನು ಸಚಿವರಾಗಿ ಮಾಡಿ, ವಿಐಎಸ್ಎಲ್, ಎಂಪಿಎಂ ಕಾರ್ಖಾನೆ ಗಳನ್ನು ಪುನಶ್ಚೇತನಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಎಂಪಿಎಂ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಬಿಡದೆ ಪುನಶ್ಚೇತನಗೊಳಿಸುವುದು ಕಾಂಗ್ರೆಸ್ ಪಕ್ಷದ ಮೊದಲ ಆದ್ಯತೆಯಾಗಲಿದೆ ಎಂದು ಅವರು ಭರವಸೆ ನೀಡಿದರು.
ಸಂಗಮೇಶ್ ಬೇಸರ ತಂದರು : ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಇಬ್ರಾಹಿಂ ಅವರನ್ನು ಪಕ್ಷದ ಅಭ್ಯರ್ಥಿಯಾಗುವಂತೆ ಆಹ್ವಾನಿಸಿದ್ದರು. ಆದ್ದರಿಂದ ಅವರಿಗೆ ಟಿಕೆಟ್ ನೀಡಲಾಯಿತು. ಆದರೆ, ಕೊನೆಯ ಕ್ಷಣದಲ್ಲಿ ಸಂಗಮೇಶ್ವರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ನನಗೆ ನೋವು ಉಂಟುಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿಗೆ ಭ್ರಷ್ಟಾಚಾರ ಕಂಡಿಲ್ಲವೇ : ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೇಂದ್ರದಲ್ಲಿ ಯುಪಿಎ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳುತ್ತಾರೆ.
ಆದರೆ, ಕರ್ನಾಟಕ ರಾಜ್ಯದಲ್ಲಿ ಅವರ ಪಕ್ಷವೇ ಮಾಡಿರುವ ಭ್ರಷ್ಟಾಚಾರ ಅವರ ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು. , ಕರ್ನಾಟಕದಲ್ಲಿ ಮೋದಿ ಭಾಷಣ ಕೇಳಿ ಯಾರು ಬಿಜೆಪಿಗೆ ಮತ ಹಾಕುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ. ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ