ಸಿದ್ದರಾಮಯ್ಯ ಗೆಲುವಿಗೆ ಸಿದ್ಲಿಂಗು ಅಡ್ಡಗಾಲು!

2008ರ ಕ್ಷೇತ್ರ ಪುನರ್ ವಿಂಗಡನೆ ನಂತರ ವರುಣಾ ಕ್ಷೇತ್ರದಲ್ಲಿ ನಡೆಯುತ್ತಿರುವ ಎರಡನೇ ಚುನಾವಣೆಯಿದು. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಪೊಲೀಸ್ ಅಧಿಕಾರಿ ರೇವಣಸಿದ್ದಯ್ಯ ಅವರಿಗೆ ಸೋಲುಣಿಸಿ ಸಿದ್ದು ವಿಧಾನಸಭೆ ಪ್ರವೇಶಿಸಿದ್ದರು.
ಈ ಬಾರಿಯ ಚುನಾವಣೆ ಕಾಂಗ್ರೆಸ್ ಮತ್ತು ಕೆಜೆಪಿ ನಡುವಿನ ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತ ಬೆಂಬಲಿಗ ಕಾಪು ಸಿದ್ದಲಿಂಸ್ವಾಮಿಯನ್ನೇ ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಸಿದ್ದುಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿದ್ದಾರೆ.
ಮತ್ತೊಮ್ಮೆ ಪೊಲೀಸ್ ಅಧಿಕಾರಿ : ಕಳೆದ ಚುನಾವಣೆಯಲ್ಲಿ ರೇವಣಸಿದ್ದಯ್ಯ ಎದುರಿಸಿದ್ದ ಸಿದ್ದರಾಮಯ್ಯ ಈ ಬಾರಿ ಜೆಡಿಎಸ್ ಅಭ್ಯರ್ಥಿ ನಿವೃತ್ತ ಪೊಲೀಸ್ ಅಧಿಕಾರಿ ಚೆಲುವರಾಜ್ ವಿರುದ್ಧ ಸೆಣಸಾಡಬೇಕಾಗಿದೆ. ಮೈಸೂರಿನಲ್ಲಿ ಸಹಾಯಕ ಆಯುಕ್ತರಾಗಿದ್ದ ಚೆಲುವರಾಜ್ ಸ್ವಯಂ ನಿವೃತ್ತಿ ಪಡೆದು ಸಿದ್ದು ವಿರುದ್ದ ಅಖಾಡಕ್ಕೆ ಧುಮುಕಿದ್ದಾರೆ.
ಚೆಲುವರಾಜು ಅವರಿಗೆ ಇದು ಮೊದಲ ಚುನಾವಣೆಯಾದರೂ ಕ್ಷೇತ್ರದ ನಾಯಕ ಜನಾಂಗದ ಮತಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. ವೀರಶೈವರು ಮತ್ತು ಕುರುಬರು ಹೆಚ್ಚಾಗಿರುವ ವರುಣಾ ಕ್ಷೇತ್ರದಲ್ಲಿ ನಾಯಕರು ಮೂರನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಚೆಲುವರಾಜು ನಾಯಕ ಜನಾಂಗಕ್ಕೆ ಸೇರಿದವರಾಗಿದ್ದು, ಸಿದ್ದು ಮತಗಳನ್ನು ಕಿತ್ತುಕೊಳ್ಳಬಹುದು.
ಕಾಪು ಅಡ್ಡಗಾಲು : ವೀರಶೈವ ಸಮುದಾಯದ ಓಟು ಕಸಿಯಲು ಕಾಪು ಸಿದ್ದಲಿಂಗ ಸ್ವಾಮಿ ಸಿದ್ದತೆ ನಡೆಸಿದ್ದಾರೆ. ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಬೆವರು ಹರಿಸಿರುವ ಕಾಪು ಚುನಾವಣೆಗೆ ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ.
ಬಿಜೆಪಿ ಡಿ.ಎಸ್.ಮಹೇಂದ್ರ ಎಂಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಸಾಂಪ್ರದಾಯಿಕ ಮತಗಳು ಕೈ ಹಿಡಿದರೆ ಸಿದ್ದು ಹಾದಿ ಸುಗಮವಾಗಲಿದೆ. ಮುಂದಿನ ಮುಖ್ಯಮಂತ್ರಿ ಎಂಬ ಹಣೆ ಪಟ್ಟಿ ಕೂಡಾ ಸಿದ್ದರಾಮಯ್ಯ ಅವರನ್ನು ಗೆಲುವಿನ ದಡ ಸೇರಿಸಬಹುದು.
ಜಾತಿ ಸಮೀಕರಣ : ವರುಣಾ ಕ್ಷೇತ್ರದಲ್ಲಿ ಒಟ್ಟು 1,91,581 ಮತದಾರರಿದ್ದು, ಸುಮಾರು 55 ಸಾವಿರದಷ್ಟು ವೀರಶೈವರಿದ್ದಾರೆ. ಕುರುಬ ಜನಾಂಗದವರು ಎರಡನೇ ಸ್ಥಾನದಲ್ಲಿದ್ದು, 20 ಸಾವಿರ ನಾಯಕರ ಮತಗಳಿವೆ. ಯಾವ ಜನಾಂಗದವರು ಯಾರ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಗೆಲುವು ನಿರ್ಧರಿತವಾಗಲಿದೆ.
ಕಣದಲ್ಲಿರುವ ಅಭ್ಯರ್ಥಿಗಳು
ಸಿದ್ದರಾಮಯ್ಯ - ಕಾಂಗ್ರೆಸ್
ಚೆಲುವರಾಜ್ - ಜೆಡಿಎಸ್
ಕಾ.ಪು.ಸಿದ್ದಲಿಂಗಸ್ವಾಮಿ - ಕೆಜೆಪಿ
ಎಸ್.ಡಿ.ಮಹೇಂದ್ರ - ಬಿಜೆಪಿ
ಬಿ.ಆರ್.ಗಿರೀಶ್ - ಬಿಎಸ್ಆರ್
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications