ಕೃಷ್ಣ ಕೃಷ್ಣ ಎಂದ ಕೇಂದ್ರ ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲು ರಾಜ್ಯಕ್ಕೆ ಆಗಮಿಸಿದ್ದ ಎ.ಕೆ.ಆಂಟನಿ, ರಾಹುಲ್ ಗಾಂಧಿಯವರ ಆಪ್ತರಾದ ಸಚಿವ ಜಿತೇಂದ್ರ ಸಿಂಗ್, ಅಂಬಿಕಾ ಸೋನಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಕೃಷ್ಣ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿ ಬುಧವಾರ ಸಂಜೆ ಭೇಟಿ ಮಾಡಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ ಚುನಾವಣಾ ಕಾರ್ಯತಂತ್ರ, ಹಳೆ ಮೈಸೂರು ಭಾಗದಲ್ಲಿ ಕೃಷ್ಣ ಪ್ರಚಾರ ನಡೆಸುವುದು ಮುಂತಾದ ವಿಚಾರಗಳ ಕುರಿತಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೀಡಿರುವ ಕೆಲ ಸೂಚನೆಗಳನ್ನು ಕೃಷ್ಣ ಅವರಿಗೆ ತಲುಪಿಸಲಾಗಿದೆ ಎಂದು ತಿಳಿದು ಬಂದಿದೆ.
ಮಾರ್ಗದರ್ಶಕರಾಗಿರಿ : ಕೃಷ್ಣ ಭೇಟಿಯ ಬಳಿಕ ಮಾತನಾಡಿದ ಆಂಟನಿ, ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್ ಅಧಿಕಾರ ಪಡೆಯಲಿದೆ. ಇದಕ್ಕೆ ಕೃಷ್ಣ ಅವರ ಸಮರ್ಥ ಮಾರ್ಗದರ್ಶನದ ಅಗತ್ಯವಿದೆ. ಆದ್ದರಿಂದ ರಾಜ್ಯ ನಾಯಕರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿ ಕೇಳಿಕೊಂಡಿದ್ದೇವೆ ಎಂದರು.
ರಾಜ್ಯ ಕಾಂಗ್ರೆಸ್ ನಲ್ಲಿ ಕೃಷ್ಣ ಹಾಗೂ ಜಾಫರ್ ಷರೀಫ್ ಅತ್ಯಂತ ಹಿರಿಯ ರಾಜಕಾರಣಿಗಳು. ಅವರ ಅಪಾರ ಅನುಭವ, ಸಲಹೆ ಚುನಾವಣೆಗೆ ಸಹಾಯಕವಾಗಲಿದೆ. ಆದ್ದರಿಂದ ನಾಯಕರಿಗೆ ಸಲಹೆ ನೀಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಬಗ್ಗೆ ಕೃಷ್ಣ ಅವರೊಂದಿಗೆ ಯಾವ ಸಮಾಲೋಚನೆಯೂ ನಡೆಸಿಲ್ಲ. ಮೊದಲು ಚುನಾವಣೆ ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ. ನಂತರ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಯೋಚಿಸಲಾಗುವುದು ಎಂದು ಅವರು ಹೇಳಿದರು.
ಶಾಸಕರ ಆಯ್ಕೆಯೇ ಅಂತಿಮ : ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡುರುವ ಮಾಜಿ ಸಚಿವ ಎಸ್.ಎಂ.ಕೃಷ್ಣ, ಪಕ್ಷ ಅಧಿಕಾರಕ್ಕೆ ಬಂದ ನಂತರ ಶಾಸಕರ ಅಭಿಪ್ರಾಯ ಪಡೆದು ಸಿಎಂ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಚುನಾವಣೆಗೆ ಮುನ್ನ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ. ಚುನಾವಣೆ ನಂತರ ಸಿಎಂ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕರು ಶ್ರಮಿಸಬೇಕು ಎಂದು ಕರೆ ನೀಡಿದ ಅವರು, ನಾನು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ