ಮಲ್ಲೇಶ್ವರಂ : ವ್ಯಕ್ತಿಯ ಕತ್ತು ಸೀಳಿ ಕೊಲೆ ಯತ್ನ

ಮಲ್ಲೇಶ್ವರಂ ಐದನೇ ಕ್ರಾಸ್ ನಲ್ಲಿ ಮಂಗಳವಾರ ಸಂಜೆ ಕಿಶನ್ (32) ಅವರ ಹತ್ಯೆಯ ಯತ್ನ ನಡೆದಿದೆ. ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶನ್ ಅವರನ್ನು ಹೊಸದಾಗಿ ಕೆಲಸಕ್ಕೆ ಸೇರಿದ ಶೇಖ್ ಹಸನ್ ಎಂಬಾತನೇ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶ ಮೂಲದ ಕಿಶನ್ ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದರು. ಅಂಗಡಿಯ ಮೇಲ್ಭಾಗದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಇವರ ಕೊಲೆಗೆ ಯತ್ನಿಸಿರುವ ಶೇಖ್ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಒಂದು ತಿಂಗಳ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರಿದ್ದರು.
ಕೆಲಸ ಬಿಡುವುದೇ ಕಾರಣ : ಹೊಸದಾಗಿ ಕೆಲಸಕ್ಕೆ ಸೇರಿದ್ದ ಹಸನ್ ಕೆಲಸ ಬಿಟ್ಟು ಮಾಲೀಕರಿಗೂ ತಿಳಿಸಿದೆ ಊರಿಗೆ ಹೋಗಲು ನಿರ್ಧರಿಸಿದ್ದ. ಇದನ್ನು ತಿಳಿದಿದ್ದ ಕಿಶನ್, ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿ ತೆರಳುವಂತೆ ಸೂಚಿಸಿದ್ದರು.
ಇದೇ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿ ಹಸನ್ ತನ್ನ ಬಳಿ ಇದ್ದ ಚಾಕುವಿನಿಂದ ಕಿಶನ್ನ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ಅಂಗಡಿ ಮಾಲೀಕ ಸುರೇಶ್ ಕುಮಾರ್ ಕಿಶನ್ ಅಂಗಡಿಯಲ್ಲಿ ಕಿಶನ್ ಇಲ್ಲದ್ದರಿಂದ ಅಂಗಡಿಯ ಮೇಲಿರುವ ಅವರ ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ರಕ್ತದ ಮುಡುವಿನಲ್ಲಿ ಬಿದ್ದಿದ್ದ ಕಿಶನ್ ನನ್ನು ತಕ್ಷಣ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಕುವಿನಿಂದ ಇರಿದು ಮೂರು ಗಂಟೆಗಳು ಕಳೆದಿದ್ದರೂ, ಕಿಶನ್ ಇನ್ನೂ ಬದುಕಿದ್ದರು. ಆದರೆ, ತೀವ್ರ ರಕ್ತ ಸ್ರಾವದಿಂದ ಬಳಲಿದ್ದರು.
ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಂಗಡಿಯಿಂದ ಯಾವುದೇ ಚಿನ್ನಾಭರಣಗಳು ಕಳುವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications