ಪತ್ನಿ ಫೇಸ್ ಬುಕ್ ಪ್ರಲಾಪ, ಸಿಧುಗೆ ಟಿಕೆಟ್ ಖೋತಾ?

ಅಮೃತಸರದ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಜಯಸಿದ್ದ ಕೌರ್ ಅವರು ಪಂಜಾಬ್ ಅಸೆಂಬ್ಲಿಯಲ್ಲಿ ಬಿಜೆಪಿ ಶಾಸಕಿಯಾಗಿದ್ದಾರೆ. ಆದರೆ, ಪತಿ ಸಿಧು ಅವರಿಗೆ ಒದಗಿರುವ ದುಃಸ್ಥಿತಿ ಕಂಡು ತಮ್ಮ ದುಃಖವನ್ನು ಫೇಸ್ ಬುಕ್ ನಲ್ಲಿ ಗೋಳು ತೋಡಿಕೊಂಡಿದ್ದರು.
ಇದು ಈಗ ದೊಡ್ಡ ಸಮಸ್ಯೆಯಾಗಿದೆ. ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರನ್ನು ಅಮೃತಸರದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂಬ ಸುದ್ದಿ ಬಂದಿದೆ. ಲೋಕಸಭಾ ಚುನಾವಣೆ 2014ಕ್ಕೆ ಬಿಜೆಪಿ ಪೂರ್ವ ತಯಾರಿ ನಡೆಸುತ್ತಿದ್ದು, ಇದು ಮಹತ್ವದ ಬೆಳವಣಿಗೆಯಾಗುವ ನಿರೀಕ್ಷೆಯಿದೆ.
2014ರ ಚುನಾವಣೆಗೆ ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ನವಜ್ಯೋತ್ ಸಿಂಗ್ ಸಿಧು ಅವರಿಗೆ ಅವಕಾಶ ನೀಡಿಲ್ಲ. ಭ್ರಷ್ಟಾಚಾರಿಗಳಿಗೆ ಬೆಂಬಲ ನೀಡುವಂತೆ ಸಿಧುಗೆ ಒತ್ತಡ ಹೇರಲಾಗುತ್ತಿದೆ ಎಂದು ಕೌರ್ ಹೇಳಿದ್ದರು.
ಸಿಧು ಅವರ ಪತ್ನಿ ಹೇಳಿಕೆ ನಂತರ ಉಂಟಾಗಿರುವ ಗೊಂದಲ ನಿವಾರಣೆಗೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಮುಂದಾಗಿದ್ದರು. ಸಿಧು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿವರಣೆ ನೀಡುತ್ತಿದ್ದ ಸಿಧು ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ, ಈ ಬಗ್ಗೆ ಎಲ್ಲೂ ವಿವರಣೆ ಹೊರಬಿದ್ದಿಲ್ಲ. ಬಿಜೆಪಿ ವಕ್ತಾರರು ಕೂಡಾ ಪಕ್ಷದ ಆಂತರಿಕ ಬಿಕ್ಕಟ್ಟನ್ನು ಹೊರ ಹಾಕದೆ ಶಮನಗೊಳಿಸಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಇದೆ.
ಪತಿಯ ಮಾನ ಉಳಿಸುವ ಕಾಯಕ ಹೊತ್ತಿರುವ ಕೌರ್ ಅವರು ಈ ಹಿಂದೆ ಬಿಗ್ ಬಾಸ್ ಮನೆ ಹೊಕ್ಕಿದ್ದ ಸಿಧು ಅವರನ್ನು ಮನೆಯಿಂದ ಹೊರಗೆಳೆಯುವಲ್ಲಿ ಸಫಲರಾಗಿದ್ದರು. ಚುನಾವಣೆ ಪ್ರಚಾರಕ್ಕಾಗಿ ಸಿಧು ಅವರು ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಯಿತು.
ಬಿಗ್ ಬಾಸ್ 6 ನಲ್ಲಿ ದಿನೇ ದಿನೇ ಪ್ರತಿಸ್ಪರ್ಧಿಗಳಿಂದ ಸಿಧು ಘನತೆ, ಗೌರವಕ್ಕೆ ಧಕ್ಕೆ ಉಂಟಾಗುತ್ತಿರುವುದನ್ನು ಕಂಡ ಪತ್ನಿ ಕೌರ್ ಅವರು ಬಿಜೆಪಿ ನಾಯಕರಿಗೆ ಪರಿಸ್ಥಿತಿ ವಿವರಿಸಿ, ಸಿಧು ಅವರನ್ನು ಹೊರ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications