ಕ್ಷಮೆಗೆ ಅರ್ಜಿ ಸಲ್ಲಿಸಲ್ಲ ಎಂದು ಕಣ್ಣೀರಾದ ಸಂಜಯ್

ಮುಂಬೈನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಸಂಜಯ್ ದತ್, "ನನಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ, ಮಾಧ್ಯಮದ ಮೇಲೆ ಅಪಾರವಾದ ಗೌರವವಿದೆ. ಕಾನೂನಿಗೆ ತಲೆಬಾಗಿ ಸದ್ಯದಲ್ಲಿಯೇ ಕೋರ್ಟಿಗೆ ಶರಣಾಗುತ್ತೇನೆ" ಎಂದು ನುಡಿದರು ಈ ಸಂದರ್ಭದಲ್ಲಿ ಅವರ ಸಹೋದರಿ ಪ್ರಿಯಾ ದತ್ ಅವರು ಜೊತೆಗಿದ್ದರು.
"ಕೈಮುಗಿದು ಹೇಳುತ್ತೇನೆ. ನಾನು ಈ ದೇಶವನ್ನು ಪ್ರೀತಿಸುತ್ತೇನೆ, ನ್ಯಾಯಾಂಗವನ್ನು ಮತ್ತು ಇಲ್ಲಿನ ಜನರನ್ನು ಗೌರವಿಸುತ್ತೇನೆ" ಎಂದು ಹೇಳಿ ಸಂಜಯ್ ದತ್ ಅವರು ಗದ್ಗದಿತರಾಗಿ, ಸಹೋದರಿ ಪ್ರಿಯಾ ದತ್ ಅವರನ್ನು ತಬ್ಬಿಕೊಂಡು ಕಣ್ಣೀರುಗರೆದರು. ನಂತರ ಮಾತನಾಡಲಾಗದೆ ಹೊರಟುಹೋದರು.
ನನಗೆ ಸಮಯ ತುಂಬಾ ಕಡಿಮೆಯಿದ್ದು, ನನ್ನ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತೇನೆ. ಕೋರ್ಟಿಗೆ ಶರಣಾಗುವ ಮೊದಲು ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರೈಸಬಯಸುತ್ತೇನೆ. ನಾನೀಗ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದೇನೆ. ನನ್ನನ್ನು ಬೆಂಬಲಿಸಿ ಸಾಕಷ್ಟು ಜನರು ನಿಂತಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿದ್ದೇನೆ ಎಂದೂ ಅವರು ನುಡಿದರು.
5 ವರ್ಷ ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ ಅವರು ಈಗಾಗಲೆ 1.6 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಹೀಗಾಗಿ, ಇನ್ನೂ 3.6 ವರ್ಷ ಅವರು ಜೈಲಲ್ಲಿ ಕಳೆಯಬೇಕಾಗಿದೆ. ಅವರಿಗೆ ಕ್ಷಮಾದಾನ ಮಾಡಬೇಕೆಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್ಮನ್ ಮಾರ್ಕಂಡೇಯ್ ಕಾಟ್ಜು ಅವರು ಮಹಾರಾಷ್ಟ್ರ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ. ನಟಿ ಜಯಪ್ರದಾ ಮತ್ತು ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಅವರು ಕೂಡ ಕ್ಷಮಾದಾನಕ್ಕೆ ಮನವಿ ಮಾಡಿದ್ದಾರೆ.
ಇದೆಲ್ಲದರ ಜೊತೆಗೆ, ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡು ಸಿಕ್ಕಿಬಿದ್ದಿರುವ ಸಂಜಯ್ ದತ್ ಅವರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡಬಾರದು ಎಂಬ ಕೂಗು ಕೂಡ ಸಮಾಜದಲ್ಲಿ ಎದ್ದಿದೆ. ಜನತಾ ಪಕ್ಷದ ಅಧ್ಯಕ್ಷ ಡಾ. ಸುಬ್ರಮಣಿಯನ್ ಸ್ವಾಮಿ ಅವರು, ಸಂಜಯ್ಗೆ ಕ್ಷಮಾದಾನವೇನಾದರೂ ನೀಡಿದಲ್ಲಿ, ಆ ಆದೇಶದ ವಿರುದ್ಧ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಟನಾಗಿ ಅಪಾರ ಜನಪ್ರಿಯತೆ ಗಳಿಸಿರುವ ಸಂಜಯ್ಗೆ ಕ್ಷಮೆ ನೀಡಬೇಕೋ ಬೇಡವೋ?
ಪಟ್ಟು ಬಿಡದ ಕಾಟ್ಜು : ಈ ನಡುವೆ, ತಮ್ಮ ಪಟ್ಟು ಸಡಿಲಿಸದ ಕಾಟ್ಜು, 1993ರ ಸರಣಿ ಬಾಂಬ್ ಸ್ಫೋಟದಲ್ಲಿ ಸಂಜು ಬಾಬಾ ಕೈವಾಡ ಇರದಿರುವುದರಿಂದ ಅವರಿಗೆ ಕ್ಷಮಾದಾನ ನೀಡಬೇಕೆಂಬ ತಮ್ಮ ಆಗ್ರಹವನ್ನು ಮಹಾರಾಷ್ಟ್ರ ರಾಜ್ಯಪಾಲರು ಮತ್ತು ರಾಷ್ಟ್ರಾಧ್ಯಕ್ಷರ ಮುಂದಿಡುವುದಾಗಿ ಹೇಳಿದ್ದಾರೆ.












Click it and Unblock the Notifications