ರೆಡ್ಡಿಗೆ ಸಂಕಷ್ಟ: 5ದಿನಗಳ ಕಾಲ ಬೆಂಗಳೂರು ಸಿಬಿಐ ವಶಕ್ಕೆ
ಖ್ಯಾತ ವಕೀಲ ಹನುಮಂತರಾಯ ಅವರು ರೆಡ್ಡಿ ಪರ ಪ್ರತಿವಾದ ಮಂಡಿಸಿದರು. ರೆಡ್ಡಿ ಜತೆಗೆ ಅಲಿಖಾನ್, ಖಾರದಪುಡಿ ಮಹೇಶ್ ಸೇರಿದಂತೆ ಒಟ್ಟು 5 ಮಂದಿಗೆ ಸಿಬಿಐ ಬಂಧನ ವಿಧಿಸಲಾಗಿದೆ. ವಿಚಾರಣೆ ಅಂಗವಾಗಿ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಬೆಳಗಿನ ಸುದ್ದಿ: ಜನಾರ್ದನ ರೆಡ್ಡಿಯನ್ನು ಭೇಟಿ ಮಾಡಲು ಅವರ ಪತ್ನಿ ಅರುಣಾ ಲಕ್ಷ್ಮಿ ಮತ್ತು ಮಕ್ಕಳು ( ಬ್ರಹ್ಮಣಿ, ಕಿರೀಟಿ) ಇಂದು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿಗೆ ಬಂದರಾದರೂ ಜೈಲು ಅಧಿಕಾರಿಗಳು ಅವರ ಸಮಾಗಮಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.
ಇವರ ಜತೆಗೆ ಶ್ರೀರಾಮುಲು, ಸಂಸದೆ ಜೆ ಶಾಂತಾ, ಸಣ್ಣ ಫಕೀರಪ್ಪ, ಮದನ್ ಪಟೇಲ್ ಮುಂತಾದವರು ರೆಡ್ಡಿಯನ್ನು ಭೇಟಿ ಮಾಡಲು ಜೈಲಿಗೆ ಬಂದಿದ್ದಾರೆ.
ಓಬಳಾಪುರಂ ಗಣಿ ಅಕ್ರಮ ಪ್ರಕರಣದಲ್ಲಿ ಚಂಚಲಗೂಡ ಜೈಲಿನಲ್ಲಿರುವ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು ಬೆಳಗಿನ ಜಾವ ಪರಪ್ಪನ ಅಗ್ರಹಾರ ಜೈಲು ತಲುಪಿಕೊಂಡಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯದ ಆದೇಶದಂತೆ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ರೆಡ್ಡಿ ಜತೆಗೆ ಆತನ ಆಪ್ತ ಅಲಿಖಾನ್ ನನ್ನೂ ಕರೆತರಲಾಗಿದೆ.
ನಿನ್ನೆ ಸಂಜೆ 14 ಪೊಲೀಸರ ಬೆಂಗಾವಲಿನಲ್ಲಿ ಹೈದರಾಬಾದ್ ಬಿಟ್ಟ ಜನಾ ರೆಡ್ಡಿ ಇಂದು ಬೆಳಗಿನ ಜಾವ 3.30ಕ್ಕೆ ಪರಪ್ಪನ ಅಗ್ರಹಾರ ಜೈಲು ಆವರಣಕ್ಕೆ ಬಂದರು. ಆದರೆ ವಾರಂಟ್ ದಾಖಲೆ ಇಲ್ಲದ ಕಾರಣ ಜೈಲು ಅಧಿಕಾರಿಗಳು ರೆಡ್ಡಿಯನ್ನು ಒಳಕ್ಕೆ ಬಿಟ್ಟುಕೊಂಡಿಲ್ಲ. ಹೀಗಾಗಿ ಪೊಲೀಸ್ ವ್ಯಾನಿನಲ್ಲೇ ರೆಡ್ಡಿ ಉಳಿದುಕೊಂಡಿದ್ದಾರೆ. ಇಂದು 11 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿನ ಎದುರಿಗಿರುವ ಸಿಬಿಐ ಕೋರ್ಟಿನಲ್ಲಿ ರೆಡ್ಡಿಯನ್ನು ಹಾಜರುಪಡಿಸಲಾಗುವುದು.
ಜೈಲು ಆವರಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ರೆಡ್ಡಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಬಿಐ ಅಂದರೆ 'ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್' ಎಂದು ಜರಿದಿರುವ ರೆಡ್ಡಿ 'ಇಲ್ಲಸಲ್ಲದ ಪ್ರಕರಣಗಳಲ್ಲಿ ಸಿಬಿಐ ತಮ್ಮನ್ನು ಸಿಲುಕಿಸುತ್ತಿದೆ.
ಯಾರದೋ ಹಿತಾಸಕ್ತಿ ಕಾಯಲು ನನ್ನ ವಿರುದ್ಧ ಆರೋಪ ಮಾಡಲಾಗಿದೆ. ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆದರೆ ಕೋರ್ಟಿನಲ್ಲಿ ಇವರ ಆಟ ನಡೆಯುವುದಿಲ್ಲ. ಅಲ್ಲಿ ಜಯ ಸಿಗುವುದು ನನಗೇ. ಆ ಭಗವಂತ ಎಲ್ಲವನ್ನು ನೋಡುತ್ತಿದ್ದಾನೆ' ಎಂದು ನೊಂದು ನುಡಿದರು.
ರಾಮುಲು ಇಡೀ ದೇಶವೇ ಮೆಚ್ಚುವಂತಹ ನಾಯಕ: 'ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಶ್ರೀರಾಮುಲು ಅವರು ಇಡೀ ದೇಶವೇ ಮೆಚ್ಚುವಂತಹ ಧೀಮಂತ ನಾಯಕನಾಗಿ ಬೆಳೆಯುತ್ತಾರೆ. ರಾಜ್ಯದ ಜನತೆ ತಮ್ಮ ಕೈಬಿಡುವುದಿಲ್ಲ' ಎಂದೂ ರೆಡ್ಡಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
'ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಅಪಾರ ಪ್ರಮಾಣದಲ್ಲಿ ರೆಡ್ಡಿಯ ನಿಕಟವರ್ತಿಗಳು ಬ್ಯಾಂಕುಗಳಲ್ಲಿ ಅಪಾರ ಹಣ ಜಮಾ ಮಾಡಿದ್ದಾರೆ. ಅದರ ವಿಚಾರಣೆ ನಡೆಸಲು ಖುದ್ದಾಗಿ ರೆಡ್ಡಿ ಬೇಕಾಗಿದ್ದಾರೆ. ಹಾಗಾಗಿ ಅವರನ್ನು ಹೈದರಾಬಾದಿನಿಂದ ಬಾಡಿ ವಾರಂಟ್ (Prisoner on Transit Warrant) ಮೇಲೆ ಕರೆತರಲು ಅನುಮತಿ ನೀಡಬೇಕು' ಎಂದು ಬೆಂಗಳೂರು ಸಿಬಿಐ ಅಧಿಕಾರಿಗಳು ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ