ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಗುಟ್ಟು
ಕರ್ನಾಟಕದ ಪುರಸಭೆಗಳು, ಪಟ್ಟಣ ಪಂಚಾಯ್ತಿಗಳು ಹಾಗೂ 7 ನಗರ ಸಭೆಗಳ ಚುನಾವಣೆಗೆ ಸ್ಪರ್ಧಿಸಿರುವ ಸಾವಿರಾರು ರಾಜಕೀಯ ಮುಖಂಡರು, ಇಂಡಿಪೆಂಡೆಂಟುಗಳು, ಸಮಾಜ ಸೇವಕರುಗಳು ಜಾಣ ಮೂರ್ಖಕರಲ್ಲದೆ ಮತ್ತೇನಲ್ಲ. ನೊ ಡೌಟ್ ಎಬೌಟ್ ಇಟ್. ಗೆದ್ದೇ ಗೆಲ್ಲುವುದಕ್ಕೆ ಒಂದು ಛಾನ್ಸ್ ಇತ್ತು. ಅದನ್ನು ಅವರು ಕಳೆದುಕೊಂಡುಬಿಟ್ಟರು.
ಗುರುವಾರ ಮತದಾನ ನಡೆದುಹೋಯಿತು. ನಡೀ ಬಾರದ್ದೆಲ್ಲ ನಡೆಯಿತು. ಇವಿಎಂ ಡಬ್ಬಿಗಳಲ್ಲಿ ತಣ್ಣಗೆ ಮಲಗಿರುವ ಮತಗಳಲ್ಲಿ ಯಾರ್ಯಾರ ಹಣೇಬರಹ ಹೇಗೋ ಗೊತ್ತಿಲ್ಲ. ಮತಗಳಿಗೆ ಕನಸು ಬೀಳುತ್ತದಾ? ಸೀರೆ, ದುಡ್ಡು, ಹೊಲಿಗೆ ಮಿಷಿನ್ನು, ಬಿಂದಿಗೆ, ಒರಿಜಿನಲ್ ಛಾಯ್ಸ್ ವಿಸ್ಕಿ.. ನಾನಾ ನಮೂನೆಯ ಉಡುಗೊರೆಗಳನ್ನು ಬೇಕಾಬಿಟ್ಟಿ ಹಂಚಿದ್ದೂ ಆಯ್ತು. ಅದು ಕೆಲವರ ಪಾಲಾಯ್ತು. ಪೊಲೀಸರು ಆಮಿಷಕ್ಕೆ ಇಟ್ಟ ಹಲವು ಪದಾರ್ಥಗಳನ್ನು ವಶಪಡಿಸಿಕೊಂಡರು. ವಶವಾದ ವಸ್ತುಗಳು ಏನಾದವೋ? ನಿಮಗೇನಾದರೂ ಗೊತ್ತುಂಟೋ?
ಇಷ್ಟೆಲ್ಲ ಆದ್ರೂನೂವೇ, ನಾನು ಗೆದ್ದೇ ತೀರುತ್ತೇನೆ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಒಬ್ಬೇ ಒಬ್ಬ ಅಥವಾ ಒಬ್ಬೇ ಒಬ್ಬಳು ಸ್ಪರ್ಧಿ 208 ಕ್ಷೇತ್ರಗಳಲ್ಲಿ ಹುಡುಕಿದರೂ ಕಾಣಿಸುತ್ತಿಲ್ಲ. ಕಾರಣ ಏನು? ಏನಿರಬಹುದು? ಸ್ವಲ್ಪ ತಡೀರಿ.

ಸ್ಪರ್ಧೆಗೆ ಧುಮುಕಿದ್ದ ಹುರಿಯಾಳುಗಳು ಕೊಟ್ಟ ಆಶ್ವಾಸನೆಗಳು, ಭರವಸೆಗಳು ಸಾಮಾನ್ಯವಾಗಿ ಒಂದೇ ಟೈಪಿತ್ತು. Monotonous. ಹಾಗಿರಬಾರದಿತ್ತು. ಎಲ್ಲರೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಬಿಟ್ಟರೆ ಅದನ್ನು ಕುಡಿಯುವವರು ಯಾರು? ಎಲ್ಲರೂ ಭ್ರಷ್ಟಾಚಾರ ಮುಕ್ತ ನಗರಸಭೆಯನ್ನು ಜನತೆಗೆ ಕೊಟ್ಟರೆ, ಚುನಾವಣೆಯಲ್ಲಿ ಖರ್ಚು ಮಾಡಿದ ಹಣ ವಾಪಸ್ಸು ಬರುವುದಾದರೂ ಹೇಗೆ? ಇವನ್ನೆಲ್ಲ ಯೋಚನೆ ಮಾಡದೆ ಸುಮ್ಮನೆ ಎಲೆಕ್ಷನ್ನಿಗೆ ನಿಂತರೆ ಆಗಬಾರದ್ದು ಆಗತ್ತೆ.
ನಮ್ಮ ಊರುಕೇರಿಗಳಲ್ಲಿ ಸಮಸ್ಯೆಗಳು ಧಂಡಿಯಾಗಿವೆ. ನಮ್ಮ ಪ್ರಕಾರ, ಬಹುಮುಖ್ಯವಾದದ್ದು ಬೀದಿ ನಾಯಿ ಸಮಸ್ಯೆ. ಈ ಸಮಸ್ಯೆ ಕಚ್ಚಿಸಿಕೊಂಡವರಿಗೆ ಮತ್ತು ಇವತ್ತಲ್ಲ ನಾಳೆ ಕಚ್ಚಿಸಿಕೊಳ್ಳುವವರಿಗೆ ಮಾತ್ರ ಗೊತ್ತು. ಹಾಗಾಗಿ, ಬೀದಿ ನಾಯಿ ಕಾಟವನ್ನು ನಿರ್ಮೂಲನೆ ಮಾಡುತ್ತೇನೆ ಎಂದು ಯಾರಾದರೂ ಆಶ್ವಾಸನೆ ಕೊಟ್ಟಿದ್ದಿದ್ದರೆ ಅವರು ಗೆಲ್ಲುವ ಛಾನ್ಸ್ ಬ್ರೈಟ್ ಆಗಿರುತ್ತಿತ್ತು. ಸಂವಿಧಾನವನ್ನೇ ತಿದ್ದುವ ಭರವಸೆ ಕೊಟ್ಟವರುಂಟು. ಆದರೆ ಬೀದಿನಾಯಿ ಬವಣೆ ಮುಕ್ತ ಹಾದಿ ಬೀದಿಗಳನ್ನು ಜನತೆಗೆ ಅರ್ಪಿಸುವ ಒಬ್ಬೇ ಒಬ್ಬ ಪಲಾತ್ಮ ನಮ್ಮ ಕಣ್ಣಿಗೆ ಕಾಣಿಸಲಿಲ್ಲ.
ಇಂಟರ್ ನ್ಯಾಷನಲ್ ಪ್ರಾಬ್ಲ್ಂ ಗಳನ್ನು ಸಾಲ್ವ್ ಮಾಡುವ ಹಗಲುಗನಸುಗಳನ್ನು ಬಿಟ್ಟು ಲೋಕಲ್ ಸಮಸ್ಯೆಗಳನ್ನು ಬಗೆಹರಿಸುವವರ ಅಗತ್ಯ ನಮ್ಮ ಸಮಾಜಕ್ಕೆ ಹಿಂದೆಂದಿಗಿಂತ ಇಂದು ಮುಖ್ಯವಾಗಿದೆ. ಅದರಲ್ಲಿ ಕಸಬಿಸಾಕುವ, ಆ ಕಸದ ಆಸೆಗೆ ಬರುವ ಇಲಿ ಹೆಗ್ಗಣ, ಸೊಳ್ಳೆ, ಜಿರಲೆ, ಕಾಗೆ ಹದ್ದುಗಳನ್ನು ನಿಗ್ರಹಿಸುವ ಜನಪ್ರತಿನಿಧಿಗಳು ಬೇಕಾಗಿದ್ದಾರೆ.
ಈ ತರಹದ ಪ್ರತಿನಿಧಿಗಳು ಆಯ್ಕೆ ಆಗದಿದ್ದರೆ ಮೂಲೆಯಲ್ಲಿ ಬಿದ್ದಿರುವ ಕಸವನ್ನು ಎಳೆದಾಡಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಮಾಡುವ ನಾಯಿಗಳನ್ನು ನೀವು ಕಂಡೇ ಇರುತ್ತೀರಿ. ಅದೆಲ್ಲಿ ಇರ್ತವೋ ಬಂದು ಬಿಡ್ತವೆ. ಕಸವನ್ನು ಎಳೆದಾಡಿದನಂತರ ಅಲ್ಲೆ ಆಟವಾಡಿಕೊಂಡಿರುವ ಮಕ್ಕಳನ್ನು ಎಳೆದಾಡುತ್ತವೆ. ಇಂಥ ಲೋಕಲ್ ಉಗ್ರಗಾಮಿಗಳನ್ನಾದರೂ ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾರ್ಯಯೋಜನೆಯ ಭರವಸೆಯನ್ನು ಅಭ್ಯರ್ಥಿಗಳು ಕೊಡಬಹುದಿತ್ತು.
ಲೋಕಲ್ ಬಾಡಿ ಎಲೆಕ್ಷನ್ನುಗಳಲ್ಲಿ ಲೋಕಲ್ ಜನ ಮಾಡಿದ ತಪ್ಪನ್ನು ನಮ್ಮ ಬೆಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಮಾಡಲಾರರು ಎಂಬ ಅಪೇಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾರಾದರೂ ಒಬ್ಬ ಅಭ್ಯರ್ಥಿ, ಒಂದು ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬೀದಿ ನಾಯಿ ವಿಷಯವನ್ನು ಕೈಗೆತ್ತಿಕೊಳ್ಳಲಿ. ಬರೀ ಆಶ್ವಾಸನೆಗಳೇ ಸಾಕು. ಓಟುಗಳು ಬೀಳುತ್ತವೆ. ನೀವು ಎಂ ಎಲ್ ಎ ಆಗೇ ಆಗುತ್ತೀರಿ.
ಬೀದಿ ನಾಯಿ ಕಡಿತಕ್ಕೆ ಔಷಧಿ ಪಡೆಯಲು ವಿಕ್ಟೋರಿಯಾ ಆಸ್ಪತ್ರೆಗೆ ಪ್ರತಿದಿನ ಸರಾಸರಿ 200 ರೋಗಿಗಳು ಬರುತ್ತಾರೆ. ಈ ಮಧ್ಯೆ ರೇಬಿಸ್ ಇಂಜಕ್ಷನ್ ಕೊರತೆಯೂ ಎದ್ದು ಕಾಣ್ತದೆ. ಆದ್ದರಿಂದಾಗಿ stray dogs eradication program ಹಮ್ಮಿಕೊಳ್ಳುವವರಿಗೆ ಬೆಂಗಳೂರಿನಲ್ಲಿ ಭವಿಷ್ಯವಿದೆ. ಹಾಗಾಗದಿದ್ದರೆ ನಿಮ್ಮ ಠೇವಣಿ ಲಾಸ್. - ವಿಶ್ವಾಸದಿಂದ, ನಿಮ್ಮ ಒನ್ ಇಂಡಿಯ ಕನ್ನಡ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications