ರಾಜಾಜಿನಗರ: ಚಿತ್ರಾನ್ನ ಚಿತ್ರಾನ್ನ, ಸೋಮಣ್ಣ ಚಿತ್ರಾನ್ನ
ತಂದೆ ಯಡಿಯೂರಪ್ಪ ಮನೆಯಿಂದ ದೂರ, ಮಲತಾಯಿ ಬಿಜೆಪಿ ಮನೆಯಲ್ಲಿ ಪ್ರೈವೇಟ್ ರೂಮಿಲ್ಲ, ಸ್ವಂತ ಕಾಂಗ್ರೆಸ್ ಮನೆಗೆ ವಾಪಸ್ ಹೋಗೋದು ಗ್ಯಾರಂಟಿಯಿಲ್ಲದ ಬೇಗುದಿಯಲ್ಲಿ ಬೇಯುತ್ತಿರುವ ಬಿನ್ನಿಪೇಟೆ ಸೋಮಣ್ಣನ ರಾಜಕೀಯ ಪರಿಸ್ಥಿತಿ ಇವತ್ತು ಕರುಣಾಜನಕ. ರಾಜಕೀಯದಲ್ಲಿ ಇಂಥ ಗತಿ ಯಾರಿಗೂ ಬರಬಾರದು, ಬರಬಾರದು.
'ನಿಂತ ಪಕ್ಷದಲ್ಲೆ ನಿಲಲಾಗದ ನನ್ನ ಮುಂದಿನ ಹೆಜ್ಜೆ ಏನೆಂಬುದನ್ನು ಮೂರು ವಾರಗಳ ನಂತರ ಪ್ರಕಟಿಸುತ್ತೇನೆ. ಅಲ್ಲಿವರೆಗೂ ಸ್ವಲ್ಪ ಕಾಯಿರಣ್ಣಾ' ಎಂದು ತಮಗೆ ತಾವೇ ಡೆಡ್ ಲೈನ್ ಕೊಟ್ಟುಕೊಂಡು ನಮ್ಮ ಜತೆ ಮಾತನಾಡಿದ್ದ ಸೋಮಣ್ಣ ಅವರ ಡೆಡ್ ಲೈನ್ ಇವತ್ತಿಗೆ (ಮಾರ್ಚ್ 8) ಕೊನೆಗೊಳ್ಳುತ್ತಿದೆ. ಇವತ್ತೋ ನಾಳೆಯೋ ಸೋಮಣ್ಣ ಮನಬಿಚ್ಚಿ ಮಾತನಾಡಬಹುದು ಎಂಬ ಆಶಾಭಾವ ನಮಗಿದೆ. ಅಥವಾ ಶಿವರಾತ್ರಿ ಬಂದೇ ಬಿಟ್ಟಿದೆ, ಅಂದೇ ಶುಭದಿನ. ಸೋಮಣ್ಣ ನಿರ್ಧಾರ ಕೈಗೊಳ್ಳುವುದಕ್ಕೂ ಪ್ರಶಸ್ತವಾದ ದಿವ್ಸ, ನೋಡೋಣಾ'
ಬೆಂಗಳೂರು ರಾಜಕೀಯ ಬೇಹುಗಾರರು ಹೇಳುತ್ತಿರುವ ಪ್ರಕಾರ ಸೋಮಣ್ಣ ಕಾಂಗ್ರೆಸ್ ಎಂಟ್ರಿ ಹೆಚ್ಚೂಕಡಿಮೆ ಖಚಿತವೇನೋ ಆಗಿದೆ. ಅವರಿಗೆ ಟಿಕೆಟ್ ಕೊಡುವುದೂ ನಿಶ್ಚಿತವೇ. ಆದ್ರೆ ಕ್ಷೇತ್ರ ಯಾವುದು ಎನ್ನುವುದು ಇನ್ನೂ ಯಕ್ಷಪ್ರಶ್ನೆಯಾಗಿ ಉಳಿದಿರುವುದು ಸೋಜಿಗವೂ ಆಗಿದೆ.
ಗೋವಿಂದರಾಜ ನಗರದ ಹಾಲಿ ಶಾಸಕ ಪ್ರಿಯಕೃಷ್ಣಗೆ ಸಿಟ್ಟಿಂಗ್ ಎಂಎಲ್ಎ ಕೋಟಾದಲ್ಲಿ ಟಿಕೆಟ್ ಗ್ಯಾರಂಟಿ. ಹಾಗಾಗಿ ಅಣ್ಣ ಸೋಮಣ್ಣ ಮತ್ತೆ ಅಲ್ಲಿಂದ ಸ್ಪರ್ಧಿಸುವುದು, ಸ್ಪರ್ಧಿಸಿದ ನಂತರ ಗೆಲ್ಲುವುದು ಊಹಿಸುವುದಕ್ಕೂ ಸಾಧ್ಯವಿಲ್ಲ. ಅದಕ್ಕೇನೇ ಡಾಕ್ಟರ್ ಪರಮೇಶ್ವರ್ ಹೇಳಿದ್ದು, ಟಿಕೆಟ್ ಕೊಡ್ತೀನಿ, ಸೋಮಣ್ಣಾ ಆದ್ರೆ ರಾಜಾಜಿನಗರದಲ್ಲಿ ನಿಂತು ಗೆದ್ದು ತೋರಿಸು ಎಂದಿರುವುದು.
ರಾಜಾಜಿನಗರದಲ್ಲಿ ಈ ಬಾರಿಯ ಚುನಾವಣಾ ಚಿತ್ರ ದಿನಗಳೆದಂತೆ ವಿಚಿತ್ರವಾಗುತ್ತಿದೆ. ಪುಕಾರುಗಳ ಕಾರುಬಾರಿನ ಪ್ರಕಾರ ನಂಬಿಕಸ್ಥ ಶಾಸಕ ಸುರೇಶ್ ಕುಮಾರ್ ಒಂದು ಕಡೆ, ಯಶವಂತಪುರದಿಂದ ಓಡಿಬರುತ್ತಿರುವ ಹುಡುಗಿ ಶೋಭಾ ಕರಂದ್ಲಾಜೆ ಮತ್ತೊಂದು ಕಡೆ.
ಆರ್ ಎಸ್ಎಸ್ ಸೇವಕ, ಬಿಜೆಪಿ ಬಂಧು, ಸರಳತೆಯೇ ಮೈವೆತ್ತಂತ್ತಿರುವ ಸುರೇಶ್, ಅಂತೆಯೇ ಮತ್ತೊಂದು ಕಡೆಯಿಂದ ಆರ್ ಎಸ್ಎಸ್ ಸೇವಕಿ, ವಿದ್ಯಾರ್ಥಿ ಪರಿಷತ್ ನಾಯಕಿ, ಕೆಜೆಪಿಯ ಬಾಂಡ್, ಭ್ರಷ್ಟಾಚಾರದಿಂದ ಅನತಿ ದೂರ ಇರುವ ಶೋಭಾ ನಡುವೆ ಅಲೆಮಾರಿ ಸೋಮಣ್ಣ!
ಈ ಮಧ್ಯೆ, ಅದ್ಯಾರೋ ಟಿವಿ ಆಯಮ್ಮನಂತೆ ಮಾಳವಿಕಾ ಅಂತ. ಆಯಮ್ಮನಿಗೆ ಕುಮಾರಣ್ಣ ಆಶಿರ್ವಾದ ಮಾಡಿಬಿಟ್ಟಿದ್ದಾರಂತೆ. ಜತೆಗೆ ಈಯಪ್ಪ ಶ್ರೀರಾಮುಲು ರಕ್ಷಿತಾ ರಕ್ಷಿತ ಬಿಎಸ್ಸಾರ್ ರಕ್ಷಿತಹ ಅಂತ ರಾಮಬಾಣ ಬಿಟ್ಟಿದ್ದಾರೆ. ಒಟ್ನಲ್ಲಿ ರಾಜಾಜಿನಗರ: ಚಿತ್ರಾನ್ನ ಚಿತ್ರಾನ್ನ ಸೋಮಣ್ಣ ಚಿತ್ರಾನ! ಮತದಾರನ ಪಾಡು ಆ ಶಿವನೇ ಕಾಪಾಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ