ಈ ಐದು ಮಂದಿಯಲ್ಲಿ ಆರು ಹಿತವರು ರಾಹುಲ್ ಗಾಂಧಿಗೆ
ಹೊಸದಿಲ್ಲಿ, ಮೇ 7: ರಾಹುಲ್ ಬಾಬಾ ತಾನು ಈ ದೇಶದ ಪ್ರಧಾನಿ ಮಂತ್ರಿ ಆಗುವುದಿಲ್ಲ ಎಂದು ನಿನ್ನೆಯಷ್ಟೇ ಘೋಷಿಸಿದ್ದಾರೆ. ಅದಾಗುತ್ತಿದ್ದಂತೆ, ರಾಹುಲ್ ಆಗುವುದಿಲ್ಲಾಂದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆ ಪಕ್ಷದ ವತಿಯಿಂದ ಗಾಂಧಿ ಕುಟುಂಬದ ಮರ್ಜಿಯಲ್ಲಿ, ಪ್ರಧಾನ ಮಂತ್ರಿ ಖುರ್ಚಿಯಲ್ಲಿ ಕುಳಿತುಕೊಳ್ಳಬಹುದಾದ ಸಂಭಾವ್ಯರು ಯಾರು? ಎಂಬ ಬಗ್ಗೆ ಪಂಡಿತೋತ್ತಮರು ತಲೆ ತುರಿಸಿಕೊಳ್ಳುತ್ತಿದ್ದಾರೆ.
ರಾಹುಲ್ ಗಾಂಧಿಯ ಮುತ್ತಜ್ಜ, ಅಜ್ಜಿ ಮತ್ತು ತಂದೆ ಹೀಗೆ ವಂಶಾವಳಿ ಪ್ರಧಾನ ಮಂತ್ರಿ ಪಟ್ಟ ಅಲಂಕರಿಸಿದ್ದಾರೆ. ಈ ಮಧ್ಯೆ, ಸೋನಿಯಾ ಗಾಂಧಿ ಅನಾಯಾಸವಾಗಿ ಬಂದ ಅವಕಾಶವನ್ನು ದೂರ ಮಾಡಿಕೊಂಡು ತ್ಯಾಗಮೂರ್ತಿ ಎಂದು ಪ್ರತಿಬಿಂಬಿಸಿಕೊಂಡರು. ತಮ್ಮ ಬದಲೀಯಾಗಿ 2004ರಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರತಿಷ್ಠಾಪಿಸಿದರು.
ಇದರಿಂದ 'ದೇಶವು ನಾಯಕತ್ವ ಗುಣವಿಲ್ಲದ ಪ್ರಧಾನಿಯನ್ನು ಕಾಣುವಂತಾಗಿದೆ' ಎಂದು ಪ್ರತಿಪಕ್ಷಗಳು ಏನೇ ಬೊಬ್ಬಿಟ್ಟರೂ ಸೋನಿಯಾ-ಮನಮೋಹನ್ ಸಂಯೋಜನೆ 5 ವರ್ಷ ಪೂರ್ಣಾವಧಿ ಕಾಣುವುದು ನಿಶ್ಚಿತವಾಗಿದೆ.
ಮುಂದ!? ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ತಮ್ಮ ತಾಯಿಯಂತೆ ಗಾಂಧಿ ಕುಟುಂಬದ ಬೇರೊಬ್ಬ ನಿಷ್ಠಾವಂತರನ್ನು ಪ್ರಧಾನಿ ಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರಾ? ಎಂಬುದು ಚರ್ಚಗೆ ಗ್ರಾಸವಾಗಿದೆ. ಪಟ್ಟಿ ಹೀಗೆ ಸಾಗುತ್ತದೆ:

ಕಾಂಗ್ರೆಸ್ಸಿಗರಿಗೆ ರಾಹುಲ್ ಆಸೆ ಜೀವಂತ
ಪ್ರಧಾನ ಮಂತ್ರಿ ಆಗುವುದು ತನ್ನ ಆದ್ಯತೆಯಲ್ಲ ಎಂಬ ರಾಹುಲ್ ಗಾಂಧಿ ಸ್ಟೇಟ್ ಮೆಂಟಿನಲ್ಲಿ ಹೆಚ್ಚು ಅರ್ಥಗಳನ್ನು ಹುಡುಕುತ್ತಾ ಹೋಗಬಾರದು. ಅದೆಲ್ಲ ದೂರಗಾಮಿ ಆಸೆಗಳು ಅಷ್ಟೆ. ಪಕ್ಕಾ ಕಾಂಗ್ರೆಸ್ಸಿಗರು ಹೇಳುವಂತೆ ಕೊನೆಗೆ ಅವರನ್ನೇ ಪ್ರಧಾನ ಮಂತ್ರಿ ಮಾಡಲಾಗುವುದು.

ಮತ್ತೊಬ್ಬ ಆರ್ಥಿಕ ತಜ್ಞ:
ಗಾಂಧಿ ಕುಟುಂಬದ ಜತೆ ಅನ್ಯೋನ್ಯ ಸಂಬಂಧ ಹೊಂದಿರುವ ಪಿ ಚಿಂದಬರಂ ಅವರಿಗೆ ಮಣೆ ಹಾಕಬಹುದು. 2 ಬಾರಿ ಹಣಕಾಸು ಸಚಿವ, ಗೃಹ ಸಚಿವ ಸ್ಥಾನದಂತಹ ಆಯಕಟ್ಟಿನ ಜಾಗ ಅಲಂಕರಿಸಿರುವವರು. ಗಾಂಧಿ ಕುಟಂಬದ ಅಪಾರ ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿರುವವರು. ರಾಜೀವ್ ಗಾಂಧಿ ಫೌಂಡೇಷನಿನ ಸ್ಥಾಪಕ ಸದಸ್ಯರೂ ಹೌದು. ಪಕ್ಷದಲ್ಲಿ ಗಂಭೀರ/ವರ್ಚಸ್ವೀ ನಾಯಕ.ಆದರೆ ಮಾಸ್ ಲೀಡರ್ ಅಲ್ಲ. ಜತೆಗೆ ಒಂಚೂರು ಸಿಡಿದೇಳುವ ಸ್ವಭಾವ ಇದೆ. ಇದು ಪ್ರಧಾನ ಮಂತ್ರಿ ಖುರ್ಚಿ ಏರಲು ತೊಡಕಾಗಬಹುದು.

'ಮಿಸ್ಟರ್ ಕ್ಲೀನ್' ಆಂಟನಿ ಎಕೆ ಆಗಬಾರದು ?:
ಅನನ್ಯ ನಿಷ್ಠೆ, ಪಕ್ಷದ ಜತೆಗಿನ ಐಕ್ಯತೆ, 'ಮಿಸ್ಟರ್ ಕ್ಲೀನ್' ಇಮೇಜ್ ಖಂಡಿತಾ ಆಂಟನಿ ಎಕೆ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕುಳ್ಳರಿಸಬಹುದು. ಗಾಂಧಿ ಕುಟುಂಬಕ್ಕೆ ತುಂಬಾ ನಿಕಟವಾಗಿರುವುದು ಆ ಪ್ರಯತ್ನಕ್ಕೆ ಇಂಬು/ಕೊಂಬು ನೀಡುತ್ತದೆ.
ಸೋನಿಯಾ ಗಾಂಧಿ ಅವರಿಗೂ ಹತ್ತಿರವಾಗಿರುವುದಷ್ಟೇ ಅಲ್ಲ. ರಾಹುಲ್ ಗಾಂಧಿಗೂ 'ನೆಚ್ಚಿನ ಅಂಕಲ್'. ಜೈಪುರ ಸಮಾವೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಹುಲ್ ಹೆಸರನ್ನು ಸೂಚಿಸಿ, ಎಲ್ಲರನ್ನೂ ಅಚ್ಚರಿಯ ಮಡುವಿಗೆ ತಳ್ಳಿಬಿಟ್ಟರು.
ಆಂಟನಿ ಮಾಸ್ ಲೀಡರ್ ಆಗಿದ್ದಾರಾದರೂ ನಿರ್ಧಾರಗಳನ್ನು ಕೈಗೊಳ್ಳುವಾಗ ತಡವರಿಸುತ್ತಾರೆ.

ಮುತ್ಸದ್ದಿ ಶೀಲಾ ದೀಕ್ಷಿತ್:
ಶೀಲಾ ದೀಕ್ಷಿತ್ ಅವರು ಇದೇ ವರ್ಷ ಮತ್ತೆ ದೆಹಲಿ ಗದ್ದುಗೆಯನ್ನು ವಾಪಸ್ ಕಾಂಗ್ರೆಸ್ಸಿಗೆ ಗೆದ್ದುಕೊಟ್ಟರೆ ನಾಲ್ಕನೆಯ ಬಾರಿಗೆ ಕಾಂಗ್ರೆಸ್ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಅವರ ಬೆನ್ನಿಗಿರುತ್ತದೆ. ರಾಜಕೀಯ ಮುತ್ಸದ್ದಿತನ ಅವರಲ್ಲಿ ತುಂಬಿತುಳುಕುತ್ತಿದೆ.
ಶೀಲಾ ಅವರು ಮಧ್ಯಮ ವರ್ಗ ಮತ್ತು ನಗರ ಜನಕ್ಕೆ ಹತ್ತಿರವಾಗಿರುವವರು. ರಾಹುಲ್, ಅವರ ತಾಯಿ ಸೋನಿಯಾ, ಅವರ ಅಜ್ಜಿ ಇಂದಿರಾ ಅವರುಗಳಿಗೂ ಹತ್ತಿರದವರೇ. ಜೈಪುರದಲ್ಲಿ ಉಪಾಧ್ಯಕ್ಷರಾದ ರಾಹುಲ್ ರನ್ನು ಅಪ್ಪಿ ಮುದ್ದಾಡಿಬಿಟ್ಟಿದ್ದರು.

ಸ್ವಲ್ಪ ಎಡವಟ್ಟುರಾಯ:
ಮಹಾರಾಷ್ಟ್ರದ ದಲಿತ ನಾಯಕ ಸುಶೀಲ್ ಕುಮಾರ್ ಶಿಂದೆ ತಳಹಂತದಿಂದ ಏರಿದರು. ಸೋನಿಯಾ-ರಾಹುಲ್ ಅತ್ಯಾಪ್ತ ವಲಯಕ್ಕೂ ಪ್ರವೇಶಿಸಿದವರು. ಉಪ ರಾಷ್ಟ್ರಪತಿ ಆಗಬೇಕಿದ್ದವರು. ರಾಜ್ಯಪಾಲ, ಮುಖ್ಯಮಂತ್ರಿ ಆಗಿದ್ದವರು ಈಗ ಗೃಹ ಮಂತ್ರಿಯೂ ಆಗಿದ್ದಾರೆ. ಅಂದರೆ ಅಷ್ಟರಮಟ್ಟಿಗೆ ಗಾಂಧಿ ಕುಟುಂಬದ ಅನುಯಾಯಿ.
ಸಾಕಷ್ಟು ಆಡಳಿತ ಅನುಭವವಿದ್ದರೂ ಪ್ರಧಾನಿ ಖುರ್ಚಿಗೆ ಬರುವ ವೇಳೆಗೆ ಎಡವುತ್ತಾರೆ ಎಂಬುದು ಪಂಡಿತರ ಅಂಬೋಣ. ಶಿಂದೆಯನ್ನು ರಾಜಕೀಯಕ್ಕೆ ತಂದ ಶರದ್ ಪವಾರ್ ಗೆ ಶಿಂದೆ ಪ್ರಧಾನಿಯಾಗುವುದು ಬೇಡವಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications