ನಿತ್ಯಾನಂದನ ಕಣ್ಣು ಮಹಾಲಿಂಗೇಶ್ವರ ಮಠದ ಮ್ಯಾಲ

ಹೀಗೆಂದು ಹೇಳಿದವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಮಹಾಲಿಂಗಪುರ ಗ್ರಾಮದಲ್ಲಿ 11ನೇ ಶತಮಾನದಲ್ಲಿ ಸ್ಥಾಪಿತವಾಗಿರುವ ಮಹಾಲಿಂಗೇಶ್ವರ ಮಠದ ಪೀಠಾಧಿಪತಿಗಳಾಗಿರುವ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು. ನಿತ್ಯಾನಂದ ನೀಡಿರುವ ಹೇಳಿಕೆ ವಿರುದ್ಧ ಶಿವಯೋಗಿ ಸ್ವಾಮೀಜಿಗಳು ತೀವ್ರ ಆಕ್ಷೇಪ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.
ಇಂಥ ಮತ್ತೊಂದು ವಿವಾದಕ್ಕೆ ಮತ್ತೆ ನಾಂದಿ ಹಾಡಿದವರು ರಾಮನಗರ ಜಿಲ್ಲೆಯಲ್ಲಿರುವ ಬಿಡದಿಯಲ್ಲಿ ಧ್ಯಾನಪೀಠಂ ಆಶ್ರಮ ನಡೆಸುತ್ತಿರುವ ವಿವಾದಾತ್ಮಕ ಸನ್ಯಾಸಿ ನಿತ್ಯಾನಂದ ಸ್ವಾಮಿ. ಮಹಾಲಿಂಗಪುರದಲ್ಲಿರುವ ಮಹಾಲಿಂಗೇಶ್ವರ ಮಠದ ಉತ್ತರಾಧಿಕಾರಿಗಬೇಕೆಂದು ತಮ್ಮನ್ನು ಶಿವಯೋಗಿ ರಾಜೇಂಜ್ರ ಸ್ವಾಮೀಜಿಗಳು ಕೇಳಿಕೊಂಡಿದ್ದಾರೆ ಎಂದು ನಿತ್ಯಾನಂದ ಹೇಳಿಕೆ ನೀಡಿರುವುದೇ ಈ ಗೊಂದಲ್ಲೆ ಕಾರಣವಾಗಿದೆ.
"ಆದಿಚುಂಚನಗಿರಿ ಶ್ರೀಗಳಾದ ಶ್ರೀ ಬಾಲಗಂಗಾಧರ ಮಹಾಸ್ವಾಮೀಜಿಯವರು ಕಾಲವಾದಾಗ ಬೆಂಗಳೂರಿಗೆ ಬಂದಿದ್ದೆ. ನನ್ನ ಸ್ನೇಹಿತರೊಬ್ಬರು ನಿತ್ಯಾನಂದನ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದು ನಿಜ. ಅಲ್ಲಿ ಆತನಿಂದ ಸನ್ಮಾನ ಸ್ವೀಕರಿಸಿದ್ದೂ ನಿಜ. ಆದರೆ ನಿತ್ಯಾನಂದ ಮತ್ತು ನನ್ನ ನಡುವೆ ಮಠಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆಯಾಗಲಿ ಒಪ್ಪಂದವಾಗಲಿ ನಡೆದಿಲ್ಲ. ನಿತ್ಯಾನಂದನ ಹೇಳಿಕೆ ನನಗೆ ತೀವ್ರ ಆಘಾತ ತಂದಿದೆ" ಎಂದು ಅವರು ಹೇಳಿದ್ದಾರೆ.
"ನಿಜ ಹೇಳಬೇಕೆಂದರೆ, ಆತ ಯಾರು ಎಂದೇ ನನಗೆ ಗೊತ್ತಿಲ್ಲ. ಚನ್ನಪಟ್ಟಣದ ನಾಟಿಕಾರ್ ಧರ್ಮಪ್ಪ ಎಂಬುವವರು ನನ್ನನ್ನು ಬಿಡದಿ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪೂಜೆಗೆಂದು ಕರೆದಿದ್ದರು. ಅಲ್ಲಿ 11ನೇ ಶತಮಾನದಲ್ಲಿ ಸ್ಥಾಪಿತವಾಗಿರುವ ಮಹಾಲಿಂಗೇಶ್ವರ ಮಠದ ಉತ್ತರಾಧಿಕಾರಿಯನ್ನಾಗಿ ನಿತ್ಯಾನಂದನನ್ನು ಮಾಡ್ತೀನೆಂದು ನಾನು ಖಂಡಿತ ಮಾತು ಕೊಟ್ಟಿಲ್ಲ. ಯಾವ ದಾಖಲೆಯನ್ನೂ ಆತನಿಗೆ ನೀಡಿಲ್ಲ. ಧರ್ಮ ಬಿಟ್ಟು ನಾನು ಏನನ್ನೂ ಮಾಡಿಲ್ಲ" ಎಂದು ಅವರು ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.
ಆದರೆ, ನಿತ್ಯಾನಂದ ತನ್ನ ಶಿಷ್ಯನೊಬ್ಬನಿಗೆ, ಮಹಾಲಿಂಗಪುರಕ್ಕೆ ಹೋಗಿ ಮಠದ ಉಸ್ತುವಾರಿ ನೋಡಿಕೊಳ್ಳಬೇಕು. ಮಹಾಲಿಂಗೇಶ್ವರ ಮಠದ ಸ್ವಾಮೀಜಿಗಳು ತನ್ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಪುರಾವೆಯಾಗಿ ಲಿಖಿತ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದು, ಖಾಸಗಿ ವಾಹಿನಿ ಬಿತ್ತರ ಮಾಡಿರುವ ದೂರವಾಣಿ ಸಂದೇಶದಲ್ಲಿ ಬಹಿರಂಗವಾಗಿದೆ. ಈ ಹೇಳಿಕೆಯನ್ನು ಮಹಾಲಿಂಗೇಶ್ವರ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಈ ಸುದ್ದಿ ಹಬ್ಬುತ್ತಿದ್ದಂತೆ ಮುಧೋಳ ಮತ್ತು ಸುತ್ತಮುತ್ತಲಿನ ಲಿಂಗಾಯತ ಸಮುದಾಯದವರು ಸಿಡಿದು ನಿಂತಿದ್ದಾರೆ. ಯಾವುದೇ ಕಾರಣಕ್ಕೂ ವಿವಾದಾತ್ಮಕ ನಿತ್ಯಾನಂದ ಸ್ವಾಮಿಗೆ ಲಿಂಗಾಯತರ ಮಠವನ್ನು ಪರಭಾರೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಯವರೆಗೆ ಬಿಡದೆ ಮಾತ್ರ ಸೀಮಿತವಾಗಿದ್ದ ನಿತ್ಯಾನಂದ ಉತ್ತರ ಕರ್ನಾಟಕದ ಮೇಲೂ ಕಣ್ಣು ಹಾಕಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಧೋಳದ ಭಕ್ತಾದಿಗಳು ಮಠದ ಸ್ವಾಮೀಜಿ ಮೇಲೆ ಕೂಡ ಕ್ರೋಧಿತರಾಗಿದ್ದಾರೆ. ಅವರು ಸರಿಯಾಗಿದ್ದರೆ ಈ ಗೊಂದಲ ಏಕೆ ಸೃಷ್ಟಿಯಾಗುತ್ತಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ತಾವು ಮಾಡಿದ ತಪ್ಪಿಗೆ ಶಿವಯೋಗಿ ಸ್ವಾಮೀಜಿ ಜನರ ಕ್ಷಮೆ ಯಾಚಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications