ಉಗ್ರರ ನಂಟು ಆರೋಪ ಇಬ್ಬರು ಬಂಧಮುಕ್ತ

ಆಂಗ್ಲ ದಿನಪತ್ರಿಕೆಯೊಂದರ ಪತ್ರಕರ್ತ ಮತಿ ಉರ್ ರೆಹಮಾನ್ ಸಿದ್ದಿಕಿ ಮತ್ತು ಯೂಸೆಫ್ ನಾಲಬಂದ್ ಅವರ ವಿರುದ್ಧದ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿದೆ. ಸೋಮವಾರ ರಾತ್ರಿ 10 ಗಂಟೆಯ ಹೊತ್ತಿಗೆ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಧ್ವಸಂಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದಾರೆ, ಎಂಬ ಆರೋಪದಡಿ ಆರು ತಿಂಗಳ ಹಿಂದೆ ಸಿದ್ದಿಕಿ, ನಾಲಬಾಂದ್ ಸೇರಿದಂತೆ 15 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿದ್ದಿಕಿ ಮತ್ತು ನಾಲಬಂದ್ ಅವರ ಹೆಸರನ್ನು ಕೈಬಿಟ್ಟಿತ್ತು. ಆದ್ದರಿಂದ ನ್ಯಾಯಾಲಯ ಇಬ್ಬರನ್ನು ಬಿಡುಗಡೆ ಮಾಡುವಂತೆ ಶನಿವಾರ ಆದೇಶ ನೀಡಿತ್ತು. ಸೋಮವಾರ ರಾತ್ರಿ ಜೈಲಿನಿಂದ ಬಿಡುಗಡೆಗೊಂಡ ಇವರನ್ನು ಸ್ನೇಹಿತರು, ಕುಟುಂಬ ಸದಸ್ಯರು ಬರಮಾಡಿಕೊಂಡರು.
ಮೂಲತಃ ಹುಬ್ಬಳ್ಳಿಯವರಾದ ಸಿದ್ಧಕಿ ಆಂಗ್ಲ ಪತ್ರಿಕೆಯೊಂದರಲ್ಲಿ ಉಪಸಂಪಾದಕ ಮತ್ತು ವರದಿಗಾರಾಗಿ ಕೆಲಸ ಮಾಡುತ್ತಿದ್ದರು. ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದ ಸಿದ್ಧಕಿ ಉರ್ದು ಪ್ರತಿಕೆಯೊಂದರಲ್ಲಿ ಭಾಷಾಂತರಕಾರರಾಗಿ ಕೆಲಸ ಮಾಡುತ್ತಿದ್ದರು.
ಅರೆಬಿಕ್, ಉರ್ದು, ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಪರ್ಶಿಯನ್ ಭಾಷೆಗಳನ್ನು ಚೆನ್ನಾಗಿ ತಿಳಿದಿದ್ದ ಇವರು ನಂತರ ಆಂಗ್ಲ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಿದ್ದಿಕಿ ಜೊತೆಗೆ ಬಿಡುಗಡೆ ಹೊಂದಿದ ಯೂಸೆಫ್ ನಾಲಬಾಂದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಆರ್.ಟಿ.ನಗರದ ಮನೆಯೊಂದರಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.












Click it and Unblock the Notifications