'ಚುನಾವಣೆಗೆ ನಿಲ್ತೇನೆ ಆದ್ರೆ ಮುಖ್ಯಮಂತ್ರಿ ಆಗಲೊಲ್ಲೆ'

ಯಾರಪ್ಪಾ ಇಂಥ ಸುವರ್ಣಾವಕಾಶ ನೀಡಿದರೂ ಬೇಡ ಅನ್ನುವವರು ಅಂದರೆ ಮಾಜಿ ಕೇಂದ್ರ ಸಚಿವ, ಮಾನ್ಯ ಸಿಕೆ ಜಾಫರ್ ಷರೀಫ್ ಅವರು. ಈ ಹಿಂದೆ ಇದೇ ಜಾಫರ್ ಷರೀಫ್ ಅವರು ಬಾಯ್ಬಿಟ್ಟರೆ ಸಾಕು ದೆಹಲಿ ಮತ್ತು ಬೆಂಗಳೂರಿನ ಕ್ವೀನ್ಸ್ ರೋಡಿನಲ್ಲಿರುವ ಕಾಂಗ್ರೆಸ್ ಕಚೇರಿ ಮೇಲೆ ಬಾಂಬ್ ಹಾಕಿದಂತಾಗುತ್ತಿತ್ತು.
ಆದರೆ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಜತೆ ನಿಕಟವಾಗಿ ಗುರುತಿಸಿಕೊಂಡಿದ್ದ ಷರೀಫ್ ಸಾಹೇಬರು ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಪಡೆದಿರುವುದಂತೂ ನಿಜ.
ಇದುವರೆಗೆ 10 ಬಾರಿ ಚುನಾವಣೆಗೆ ನಿಂತು 8 ಬಾರಿ ಸಂಸದರಾಗಿರುವ ಜಾಫರ್ ಷರೀಫ್ ಅವರು, 6 ಬಾರಿ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವೊಬ್ಬ ಉತ್ತಮ ಆಡಳಿತಗಾರ ಎಂದು ನಿರೂಪಿಸಿರುವ ಷರೀಫ್ ಅವರು ಈಗ ರಾಜ್ಯದಲ್ಲಿ ತಮ್ಮ ಅನುಭವ ಹಂಚಿಕೊಳ್ಳಲು ಬಯಸಿದ್ದಾರೆ. 'ಶಾಸಕನಾಗಿ ಕಿರಿಯರೊಂದಿಗೆ ನನ್ನ ಅನುಭವ ಹಂಚಿಕೊಳ್ಳಲು ಸಿದ್ಧನಿದ್ದೇನೆ. ಅದಕ್ಕೋಸ್ಕರ ಚುನಾವಣೆಗೆ ನಿಲ್ಲುತ್ತಿದ್ದೇನೆ. ಆದರೆ ಮುಖ್ಯಮಂತ್ರಿ ಆಕಾಂಕ್ಷಿ ನಾನಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಒದಗಿಸಲು ನಾವು ವಿಫಲರಾಗಿದ್ದೇವೆ. ಇನ್ನು ಮೂಲಸೌಕರ್ಯದಲ್ಲಿಯೂ ನಮ್ಮ ಸಾಧನೆ ಏನೇನೂ ಇಲ್ಲ. ಆದ್ದರಿಂದ ನನ್ನ ಸೇವಾನುಭವ ಹಂಚಿಕೊಳ್ಳುವುದಕ್ಕಾಗಿ ವಿಧಾನಸಭೆ ಚುನಾವಣೆಗೆ ನಿಲ್ಲುತ್ತಿದ್ದೇನೆ ಎನ್ನುತ್ತಾರೆ ಹಿರಿಯ ನಾಯಕ ಜಾಫರ್ ಷರೀಫ್ ಅವರು. (ಜಾಫರ್ ಷರೀಫ್ ಸಂದರ್ಶನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)












Click it and Unblock the Notifications