ಶಿಂಧೆ ಕ್ಷಮೆ, 'ಕೇಸರಿ' ಪಕ್ಷದಿಂದ ಸ್ವಾಗತ

ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನಾ ದಿನವಾದ ಬುಧವಾರ ಸಚಿವರು ಈ ವಿಷಾದ ವ್ಯಕ್ತಪಡಿಸಿದ್ದಾರೆ. ಹಿಂದೂ ಭಯೋತ್ಪಾದನೆ ಹೇಳಿಎಕ್ ಬಜೆಟ್ ಅಧಿವೇಶನ ಹಾಳು ಮಾಡದಂತೆ ತಡೆಯಲು ಶಿಂಧೆ ಕ್ಷಮೆಯಾಚನೆ ಮಾಡಿದ್ದಾರೆ ಎನ್ನಬಹುದು.
'ಜೈಪುರದಲ್ಲಿ ನಡೆದ ಪಕ್ಷದ ಚಿಂತನಾ ಶಿಬಿರದ ವೇಳೆ ನಾನು ನೀಡಿದ ಹೇಳಿಕೆಯು ತಪ್ಪು ಅರ್ಥಗಳನ್ನು ಉಂಟು ಮಾಡಿದೆ. ನನ್ನ ಪುಟ್ಟ ಭಾಷಣದಲ್ಲಿ ಹೇಳಿದಂತೆ, ಭಯೋತ್ಪಾದನೆಗೆ ಕೆಲವು ಧಾರ್ಮಿಕ ಸಂಘಟನೆಗಳೊಂದಿಗೆ ಸಂಬಂಧ ಬೆಸೆಯಬಹುದು ಎಂದು ಸೂಚಿಸುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಹೇಳಿಕೆಗಾಗಿ ಪ್ರತಿಪಕ್ಷವಾದ ಬಿಜೆಪಿಯಿಂದ ತೀವ್ರ ಟೀಕೆಗೆ ಹಾಗೂ ಬಜೆಟ್ ಅಧಿವೇಶನದ ವೇಳೆ ಬಹಿಷ್ಕಾರದ ಬೆದರಿಕೆಗೆ ಗುರಿಯಾಗಿದ್ದ ಲೋಕಸಭಾ ನಾಯಕರೂ ಆದ ಶಿಂಧೆ ಯಾವುದೇ ಧರ್ಮ ಅಥವಾ ರಾಜಕೀಯ ಸಂಘಟನೆಯೊಂದಿಗೆ ಭಯೋತ್ಪಾದನೆಯೊಂದಿಗೆ ಸಂಬಂಧ ಕಲ್ಪಿಸುವ ಉದ್ದೇಶ ನನಗೆ ಇರಲಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಗ್ರವಾದಕ್ಕೆ ನಿರ್ದಿಷ್ಟ ಧರ್ಮದೊಂದಿಗೆ ತಳುಕು ಹಾಕುತ್ತಿದ್ದೇನೆ ಎಂದು ಹಾಗೂ ಉಗ್ರರ ಶಿಬಿರಗಳನ್ನು ನಡೆಸುವಲ್ಲಿ ನಿರತವಾಗಿರುವ ಕೆಲವು ರಾಜಕೀಯ ಸಂಘಟನೆಗಳ ವಿರುದ್ಧ ಆಪಾದನೆ ಮಾಡುತ್ತಿದ್ದೇನೆ ಎಂದು ಅರ್ಥೈಸಿಕೊಳ್ಳಲಾಗಿದೆ. ಆದರೆ, ಭಯೋತ್ಪಾದನೆಗೆ ಯಾವುದೇ ಧರ್ಮದೊಂದಿಗೆ ನಂಟು ಬೆಸೆಯುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದಾರೆ.
ನನ್ನ ಹೇಳಿಕೆ ವಿವಾದದ ಹೊಗೆ ಎಬ್ಬಿಸಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನನ್ನ ಹೇಳಿಕೆಯಿಂದ ಕೆಲವರಿಗೆ ನೋವಾಗಿದ್ದು, ಅದಕ್ಕಾಗಿ ವಿಷಾದಿಸುತ್ತೇನೆ. ರಾಷ್ಟ್ರದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ನನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಕರ್ತವ್ಯ ನಿರ್ವಹಣೆ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಪ್ರತಿಭಟನೆ: ಇದಕ್ಕೆ ಮುನ್ನ ಬುಧವಾರ ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಶಿಂಧೆ ಅವರ ಹೇಳಿಕೆ ಖಂಡಿಸಿ, ಜಂತರ್ಮಂಥರ್ನಿಂದ ಶಿಂಧೆ ಅವರ ನಿವಾಸಕ್ಕೆ ಪಕ್ಷದ ಉನ್ನತ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಪ್ರತಿಭಟನಾ ರ್ಯಾಲಿ ನಡೆಸಿ ಬಂಧನಕ್ಕೆ ಒಳಗಾಗಿದ್ದರು.
ಶಿಂಧೆ ಅವರು ಜೈಪುರದಲ್ಲಿ ತಾವು ನೀಡಿದ ಹೇಳಿಕೆಗಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ಮುಖಂಡರು ರ್ಯಾಲಿಯಲ್ಲಿ ಒತ್ತಾಯಿಸಿದ್ದರು.
ಆರ್ಎಸ್ಎಸ್ ಇರಬಹುದು ಅಥವಾ ಬಿಜೆಪಿ ಇರಬಹುದು, ಅವು ನಡೆಸುವ ತರಬೇತಿ ಶಿಬಿರಗಳಲ್ಲಿ ಹಿಂದೂ ಭಯೋತ್ಪಾದನೆಯನ್ನು ಪ್ರಾಯೋಜಿಸಲಾಗುತ್ತಿದೆ ಎಂಬುದಕ್ಕೆ ಪೂರಕವಾಗಿ ನಮ್ಮ ಬಳಿ ತನಿಖಾ ವರದಿ ಇದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು.
ಇದು ತೀವ್ರ ಟೀಕೆಗೆ ಒಳಗಾದ ನಂತರ, ತಾವು ಪ್ರಸ್ತಾಪಿಸಿದ್ದು 'ಕೇಸರಿ ಭಯೋತ್ಪಾದನೆ ಬಗ್ಗೆಯೇ ಹೊರತು ಹಿಂದೂ ಭಯೋತ್ಪಾದನೆ ಕುರಿತು ಅಲ್ಲ ಎಂದೂ ಸಮಜಾಯಿಷಿ ನೀಡಿದ್ದರು. ಆದರೆ ಅದರಿಂದ ಬಿಜೆಪಿ ಇನ್ನಷ್ಟು ಕೆರಳಿತ್ತೇ ಹೊರತು, ತಣ್ಣಗಾಗಿರಲಿಲ್ಲ.











Click it and Unblock the Notifications