ನಾಯಿ ಬಾಯಲ್ಲಿ ರುಂಡ ಕಂಡು ಬೆಚ್ಚಿದ ಜ್ಞಾನಭಾರತಿ
ಬೆಂಗಳೂರು, ಫೆ. 21 : ಅಪರಿಚಿತ ವ್ಯಕ್ತಿಯೊಬ್ಬನ ರುಂಡವನ್ನು ಬೀದಿನಾಯಿಯೊಂದು ಕಚ್ಚಿಕೊಂಡು ಹೋಗುತ್ತಿದ್ದ ದೃಶ್ಯ ನೋಡಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ಬೆಚ್ಚಿಬಿದ್ದಿದೆ. ಈ ಘಟನೆ ನಡೆದಿರುವುದು ಗುರುವಾರ, ವಿದ್ಯಾರ್ಥಿಗಳ ಹಾಸ್ಟೆಲ್ ಬಳಿ.
ಹಾಸ್ಟೆಲ್ ವಿದ್ಯಾರ್ಥಿಗಳು ಈ ಭಯಾನಕ ದೃಶ್ಯ ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ. ವಿದ್ಯಾರ್ಥಿಗಳ ಗದ್ದಲಕ್ಕೆ ಹೆದರಿ ರುಂಡವನ್ನು ಅಲ್ಲೇ ಬಿಸಾಕಿ ನಾಯಿ ಓಡಿ ಹೋಗಿದೆ. ಕೂಡಲೆ ವಿದ್ಯಾರ್ಥಿಗಳು ಪೊಲೀಸರಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ಜ್ಞಾನಭಾರತಿ ಆವರಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟು ಹುಡುಕಾಡಿದ ಮೇಲೆ ಯುನಿವರ್ಸಿಟಿ ಕ್ಯಾಂಪಸ್ಸಿನಲ್ಲಿರುವ ದಟ್ಟ ಮರಗಳ ನಡುವೆ ವ್ಯಕ್ತಿಯೋರ್ವನ ರುಂಡವಿಲ್ಲದ ಮುಂಡ ಪೊಲೀಸರಿಗೆ ಸಿಕ್ಕಿದೆ. ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯ ಗುರುತು ಇನ್ನೂ ಸಿಕ್ಕಿಲ್ಲ.

ವ್ಯಕ್ತಿಯ ಕತ್ತಿನ ಸುತ್ತ ಹಗ್ಗ ಬಿಗಿದಿದ್ದು, ಪ್ರಾಥಮಿಕ ವರದಿಯ ಪ್ರಕಾರ, ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಥವಾ ಆತನನ್ನು ಹತ್ಯೆ ಮಾಡಿ ಅಲ್ಲಿ ಬಿಸಾಕಿರುವ ಸಾಧ್ಯತೆಯೂ ಇದೆ ಎಂದೂ ಪೊಲೀಸರು ಶಂಕಿಸಿದ್ದಾರೆ. ತನಿಖೆ ಜಾರಿಯಲ್ಲಿದೆ.
ಅಲ್ಲದೆ, ವ್ಯಕ್ತಿಯ ದೇಹದ ಕೆಲ ಭಾಗಗಳನ್ನು ನಾಯಿಗಳು ತಿಂದುಹಾಕಿವೆ. ಶವವನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಆ ಸುತ್ತಮುತ್ತಲ ಪ್ರದೇಶಯಿಂದ ಕಣ್ಮರೆಯಾಗಿರುವ ವ್ಯಕ್ತಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಸ್ಥಳೀಯ ವಾಸಿಗಳ ಸಹಾಯವನ್ನು ಕೂಡ ಕೋರಲಾಗಿದೆ.












Click it and Unblock the Notifications