ಕೆಆರ್ ಎಸ್ ನಲ್ಲಿ ನೀರಿಲ್ಲ, ಶೆಟ್ಟರ್ ದೆಹಲಿಗೆ

ನದಿ ನೀರು ಹಂಚಿಎಕ್ ಕುರಿತಂತೆ ಹೊಸ ಸಮಿತಿ ರಚನೆಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಕಾವೇರಿ ನದಿ ಪ್ರಾಧಿಕಾರದ ಬದಲು ಕಾವೇರಿ ಮ್ಯಾನೇಜ್ಮೆಂಟ್ ಬೋರ್ಡ್ ಸ್ಥಾಪನೆಗೆ ಮನಮೋಹನ್ ಸಿಂಗ್ ಮುಂದಾಗಿದ್ದಾರೆ. ಕೆಆರ್ ಎಸ್ ಅಣೆಕಟ್ಟಿನಲ್ಲಿ ಡೆಡ್ ಸ್ಟೋರೇಜ್ ಲೆವೆಲ್ ತಲುಪಲು ಇನ್ನು 3.5 ಅಡಿ ಮಾತ್ರ ಇದೆ. ಈ ಸಂದರ್ಭದಲ್ಲಿ ನೀರು ಬಿಡಲು ಹೇಗೆ ಸಾಧ್ಯ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಇತ್ತ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 77 ಅಡಿಗೆ ಕುಸಿದಿದೆ.ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ ಕೆಆರ್ಎಸ್ನಲ್ಲಿ 81 ಅಡಿಗಳಷ್ಟು ನೀರಿತ್ತು. ಇದರಿಂದ ಮಾರ್ಚ್ ಮಾಸಾಂತ್ಯದವರೆಗೆ ನೀರು ಒದಗಿಸಬಹುದಿತ್ತು. ಕುಡಿಯಲಿಕ್ಕೆ 8 ಟಿಎಂಸಿ ನೀರು ಬೇಕಾಗಿದೆ. ಇಲ್ಲಿಯ ರೈತರ ಎಷ್ಟೋ ಬೆಳೆಗಳು ಒಣಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮೈಸೂರು ಸೇರಿದಂತೆ ಬೆಂಗಳೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ನೀರಿಗೆ ತೀವ್ರ ತತ್ವಾರ ಉಂಟಾಗಲಿದೆ.
ಈ ಭಾಗದ ಜನಪ್ರತಿನಿಧಿಗಳು ಈಗ ಸ್ಥಳೀಯ ಸಂಸ್ಥೆಗಳ ಚುನಾವಣಾ ಭರಾಟೆಯಲ್ಲಿದ್ದಾರೆ. ಸದ್ಯ 5480 ಕ್ಯೂಸೆಕ್ಸ್ ನೀರು ಕೆಆರ್ಎಸ್ನಿಂದ ಹೊರ ಹರಿಯುತ್ತಿದ್ದು, 3800 ಕ್ಯೂಸೆಕ್ಸ್ನಷ್ಟು ಒಳಹರಿವಿದೆ. ಈ ನಡುವೆ ತಮಿಳುನಾಡು ಸಿಎಂ ಜಯಲಲಿತಾ ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕದಿಂದ ಕಾವೇರಿ ನೀರು ಪಡೆದಿದ್ದು ತಮ್ಮ ಅಪೂರ್ವ ಸಾಧನೆ ಎಂದು ಬಣ್ಣಿಸಿಕೊಂಡು ಕರ್ನಾಟಕಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.
ಜನತೆ ಹಿತಾಸಕ್ತಿ ಬಲಿ: ಸಾರ್ವಜನಿಕ ಹಿತಾಸಕ್ತಿಯನ್ನು ಬಲಿಗೊಡುವುದಿಲ್ಲ ಎಂದು ಹೇಳುತ್ತಲೇ ರಾಜ್ಯ ಸರಕಾರ ಸಾಕಷ್ಟು ನೀರು ಬಿಟ್ಟಿದೆ. ದಿಲ್ಲಿಗೆ ಸರ್ವಪಕ್ಷ ನಿಯೋಗ ತೆರಳಿ ಪ್ರಧಾನಿಯವರಿಗೆ ಈ ಕುರಿತು ಮನವರಿಕೆ ಮಾಡಲಾಗುವುದು ಎಂದು ಹೇಳುತ್ತಲೇ ಇದ್ದಾರೆ. ಈ ಹಿಂದೆಯೂ ಪ್ರಧಾನಿಗೆ ಮನವರಿಕೆ ಮಾಡಿದ್ದರು. ಒಂದೆಡೆ ಮನವರಿಕೆ ಮಾಡುತ್ತಾ ಕರ್ನಾಟಕದ ಪರ ತೀರ್ಪು ಬರಬಹುದೆಂಬ ಕನವರಿಕೆಯಲ್ಲೇ ಕಾಲಹರಣ ಮಾಡುತ್ತಿರುವ ರಾಜ್ಯ ಸರಕಾರ ಜನಹಿತ ಬಲಿಕೊಟ್ಟಾದರೂ ಸರಿ ರಾಜ್ಯಭಾರ ನಡೆಸಬೇಕೆಂಬ ಇರಾದೆಗೆ ಬಿದ್ದಂತಿದೆ.
ಹೋರಾಟ ನಡೆಸುತ್ತಿದ್ದ ಕಾವೇರಿ ಹಿತರಕ್ಷಣಾ ಸಮಿತಿ ಕೂಡಾ ತನ್ನ ಹೋರಾಟದ ತೀವ್ರತೆಯನ್ನು ಕಡಿತಗೊಳಿಸಿದೆ. ಇತ್ತೀಚಿನ ಕೆಲವು ಪ್ರತಿಭಟನೆ ಗಳಂತೂ ಕೇವಲ ಟಿವಿ ಕ್ಯಾಮೆರಾಗಳಿಗೆ ಮತ್ತು ಫೋಟೋಗ್ರಾಫರ್ಗಳಿಗೆ ಪೊಸ್ ಕೊಡಲಿಕ್ಷ್ಟೇ ಸೀಮಿತವಾಗಿವೆ. ಈ ಮೊನಚಿಲ್ಲದ ಹೋರಾಟವನ್ನು ಕಂಡೇ ರಾಜ್ಯ ಸರಕಾರಕ್ಕೆ ಈ ಭಾಗದ ಜನತೆ ಬಗ್ಗೆ ಸದರ ಸಿಕ್ಕಿದಂತಾಗಿ ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ನೀರು ಬಿಟ್ಟರೂ ಈ ಬಾಗದ ಜನ ಪ್ರಬಲವಾಗಿ ಪ್ರತಿಭಟಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಈ ನಡುವೆ, ಜನಪ್ರತಿನಿಧಿಗಳೂ ಸಹ ಕಾವೇರಿ ವಿವಾದವನ್ನು ಸಂಪೂರ್ಣ ಕಡೆಗಣಿಸಿದ್ದು, ಎಲ್ಲರಿಗೂ ಮುಂಬರುವ ಚುನಾವಣೆಯತ್ತಲೇ ಕಣ್ಣು. ಒಟ್ಟಿನಲ್ಲಿ ಕಾವೇರಿ ಜಲಾನಯನ ಪಾತ್ರದ ಜನತೆಯ ಸಂಕಷ್ಟವನ್ನು ಶಾಶ್ವತವಾಗಿ ಪರಿಹರಿಸುವ ಪಕ್ಷ ಮುಂದಕ್ಕೆ ಅಧಿಕಾರಕ್ಕೆ ಬರುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
Cauvery Water Disputes Tribunal (CRDT) ಮಧ್ಯಂತರ ತೀರ್ಪಿನಲ್ಲಿ ರಾಜ್ಯದ ನೀರಾವರಿ ಪ್ರದೇಶ 11.2 ಲಕ್ಷ ಎಕರೆ ಎಂದು ಗುರುತಿಸಲಾಗಿದೆ. ಆದರೆ, ಅಂತಿಮ ತೀರ್ಪುನಲ್ಲಿ 18.85 ಲಕ್ಷ ಎಕರೆ ಎಂದು ಹೇಳಲಾಗಿದೆ. ಫೆ.19ರ ನಂತರ ಹಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಸೂಚನೆ ಸಿಕ್ಕಿದೆ. ಮುಂಗಾರಿಗೂ ಮುನ್ನ ಮಾ,15 ರ ವೇಳೆಗೆ ಮತ್ತೆ ಮಳೆ ಸುರಿಯುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.












Click it and Unblock the Notifications