ಕೆಜೆಪಿ,ಬಿಜೆಪಿ ಡ್ರಾಮಾ:ವಿರೋಧಪಕ್ಷಗಳು ಝಾಡಿಸಿದ್ದು ಹೀಗೆ
ಬೆಂಗಳೂರು, ಜ 30: ಮಂಗಳವಾರ (ಜ 29) ಸ್ಪೀಕರ್ ಬೋಪಯ್ಯ ಕಚೇರಿಯಲ್ಲಿ ನಡೆದ ಕೆಜೆಪಿ ಬೆಂಬಲಿತ ಶಾಸಕರ ರಾಜೀನಾಮೆ ಪ್ರಹಸನಕ್ಕೆ ಸಾರ್ವಜನಿಕರ ಜೊತೆ ವಿರೋಧಪಕ್ಷಗಳು ಆಡಳಿತ ಬಿಜೆಪಿ, ಸ್ಪೀಕರ್ ಮತ್ತು ಕೆಜೆಪಿ ಪಕ್ಷವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಜೆಪಿ ಬೆಂಬಲಿತ ಶಾಸಕರು ಸ್ವಇಚ್ಛೆಯಿಂದ ಸಲ್ಲಿಸಿದ ರಾಜೀನಾಮೆ ಅಂಗೀಕರಿಸಲು ಕಾನೂನು ತೊಡಕಿನ ನೆಪ ಮಾಡಿ ಸುಮಾರು 8 ತಾಸು ಶಾಸಕರನ್ನು ಆಟವಾಡಿಸಿದ ಸ್ಪೀಕರ್ ಧೋರಣೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೊಳಗಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಆರಂಭವಾದ ಉಳ್ಳಾಲ - ಮಲ್ಪೆ (ಉಡುಪಿ) ಕಾಂಗ್ರೆಸ್ ಪಾದಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಆಡಳಿತ ಬಿಜೆಪಿ ಮತ್ತು ಕೆಜೆಪಿ ಪಕ್ಷದ ವಿರುದ್ದ ಅಕ್ಷರಸಃ ಹರಿಹಾಯ್ದಿದ್ದಾರೆ.
ಸರಕಾರಕ್ಕೆ ಅನುಕೂಲ ಮಾಡಿಕೊಡಲು ಸ್ಪೀಕರ್ ಆಡಳಿತಾರೂಢ ಬಿಜೆಪಿ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬಿಜೆಪಿ, ಸ್ಪೀಕರ್ ಮತ್ತು ಕೆಜೆಪಿ ಪಕ್ಷಗಳನ್ನು ವಿರೋಧಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದು ಹೀಗೆ..

ವೀರಪ್ಪ ಮೊಯ್ಲಿ
ಸಾಕು ಮಾಡಿ ನಿಮ್ಮ ನಾಟಕವನ್ನು. ಇಡೀ ರಾಜ್ಯದ ಜನತೆ ನಿಮ್ಮ ಹುಡುಗಾಟವನ್ನು ನೇರ ಪ್ರಸಾರದಲ್ಲಿ ನೋಡುತ್ತಿದ್ದಾರೆ. ರಾಜೀನಾಮೆ ಕೊಟ್ಟು ತೊಲಗಿ. ಜನತೆಯಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ, ನಿಮ್ಮ ಕರ್ನಾಟಕದ ಭವಿಷ್ಯ ಕಾಂಗ್ರೆಸ್ ಕೈಯಲ್ಲಿದೆ. ಹೀಗಾಗಿ ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ವೀರಪ್ಪ ಮೊಯ್ಲಿ ಕಾಂಗ್ರೆಸ್ ಪಾದಯಾತ್ರೆಯ ಸಂದರ್ಭದಲ್ಲಿ ಹೇಳಿದ್ದಾರೆ.

ಡಾ.ಪರಮೇಶ್ವರ್
ಈ ರಾಜೀನಾಮೆ ಪ್ರಹಸನ ನೋಡಿ ರಾಜ್ಯದ ಜನತೆ ಬಿಜೆಪಿಗೆ ಯಾಕಪ್ಪಾ ಅಧಿಕಾರ ಕೊಟ್ವಿ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಸ್ಪೀಕರ್ ಬೋಪಯ್ಯ ಆಡಳಿತ ಪಕ್ಷದ ಏಜೆಂಟ್.

ಸಿ ಎಂ ಇಬ್ರಾಹಿಂ
ರಾಜ್ಯದ ಬಿಜೆಪಿ ಸರಕಾರದ ಬಹುತೇಕ ಸಚಿವರು ಹಗರಣಗಳಲ್ಲಿ ಸಿಲುಕಿದ್ದಾರೆ. ಬಿಜೆಪಿ ಮತ್ತು ಕೆಜೆಪಿ ಹಗ್ಗ ಜಗ್ಗಾಟ ಜನತೆಗೆ ಬೇಸರ ತಂದಿದೆ. ಸ್ಪೀಕರ್ ಸಂವಿಧಾನದ ಪ್ರಕಾರ ನಡೆದುಕೊಳ್ಳಲಿ.

ಸಿದ್ದರಾಮಯ್ಯ
ಸ್ವ ಇಚ್ಚೆಯಿಂದ ಶಾಸಕರು ನೀಡಿದ ರಾಜೀನಾಮೆಯನ್ನು ಸ್ಪೀಕರ್ ಆಂಗೀಕರಿಸಲಿ. ಇಲ್ಲವಾದಲ್ಲಿ ರಾಜ್ಯಪಾಲರಿಗೆ ದೂರು ನೀಡಬೇಕಾಗುತ್ತದೆ.

ಎಚ್ ಡಿ ಕುಮಾರಸ್ವಾಮಿ
ಬೆಳಗ್ಗೆಯಿಂದ ನಡೆಯುತ್ತಿರುವ ಬಿಜೆಪಿ ಮತ್ತು ಕೆಜೆಪಿ ಪಕ್ಷಗಳ ನಾಟಕ ನೋಡಿ ಒಬ್ಬ ರಾಜಕಾರಿಣಿಯಾಗಿ ನಾನೂ ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಸ್ಪೀಕರ್ ಬೋಪಯ್ಯ ಅವರು ಸಂವಿಧಾನಕ್ಕೆ ಯೋಗ್ಯವಾದ ಕೆಲಸವನ್ನು ಮಾಡಲಿ.

ಎಸ್ ರಮೇಶ್ ಕುಮಾರ್
ಸ್ಪೀಕರ್ ನಡೆ ಈ ಹಿಂದೆಯೂ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ರಾಜೀನಾಮೆ ಸ್ವೀಕರಿಸದೆ ಬೇರೆ ದಾರಿಯಿಲ್ಲ ಅವರಿಗೆ. ಆದರೂ ಅವರು ರಾಜೀನಾಮೆ ಸ್ವೀಕರಿಸದಿರುವುದು ಮಾಜಿ ಸ್ಪೀಕರ್ ಆಗಿ ನನಗೆ ತಲೆತಗ್ಗಿಸುವಂತಾಗಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ಎಸ್ ರಮೇಶ್ ಕುಮಾರ್ ಟೀಕಿಸಿದ್ದಾರೆ.












Click it and Unblock the Notifications