ಪ್ರಧಾನಿಯಾಗಲು ಮೋದಿಯೇ ಸೂಕ್ತ: ಯಶವಂತ್ ಸಿನ್ಹಾ

ಮುಂಬರುವ ಲೋಕಸಭಾ ಚುನಾವಣೆಯ ನೇತೃತ್ವ ಯಾರು ವಹಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಭಾರಿ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ. ಜನ ಸಾಮಾನ್ಯರ ಅಪೇಕ್ಷೆಯಂತೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಇದು ಸಕಾಲ. ಇದರಿಂದ ಪಕ್ಷಕ್ಕೆ ಹಾಗೂ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಯಶವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಮತದಾರರು ಮೋದಿಯನ್ನು ಪ್ರಧಾನಿಯಾಗಿ ಕಾಣಬಯಸಿದ್ದಾರೆ ಎಂಬ ಸತ್ಯ ಈಗಾಗಲೆ ಹಲವಾರು ಸಮೀಕ್ಷೆಗಳಿಂದ ಸಾಬೀತಾಗಿದೆ. ಕಾಲ ಮೀರುವ ಮುನ್ನ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಹೆಸರಿಸುವುದು ಒಳ್ಳೆಯದು ಎಂದು ಸಿನ್ಹಾ ಹೇಳಿದ್ದಾರೆ.
ಮಾಜಿ ವಿದೇಶಾಂಗ ಖಾತೆ ಸಚಿವ ಯಶವಂತ್ ಸಿನ್ಹಾ ಅವರು ಮೋದಿಗೆ ಪ್ರಧಾನಿಯಾಗಲು ತಕ್ಕ ಅರ್ಹತೆಯಿದೆ. ಜನಪ್ರಿಯತೆ ಕೂಡಾ ಇದೆ. ಪಕ್ಷದ ಕಾರ್ಯಕರ್ತರ ಹಿತಾಸಕ್ತಿ ಹಾಗೂ ಜನರ ಅಭಿಮತಕ್ಕೆ ಬೆಲೆ ಕೊಡಬೇಕು ಎಂದು ಹೇಳಿದ್ದಾರೆ.
ಇದುವರೆವಿಗೂ ಬೂದಿ ಮುಚ್ಚಿದ ಕೆಂಡದ ಹಾಗೆ ಇದ್ದ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಷಯ ಈಗ ಯಶವಂತ ಸಿನ್ಹಾ ಅವರ ಮೂಲಕ ಹೊರ ಬಿದ್ದಿದೆ. ಬಿಜೆಪಿ ಮಾತ್ರ ಇನ್ನೂ ಅಧಿಕೃತವಾಗಿ ಪ್ರಧಾನಿ ಅಭ್ಯರ್ಥಿಯನ್ನು ಹೆಸರಿಸದೆ ವಿಳಂಬ ನೀತಿ ಅನುಸರಿಸುತ್ತಿದೆ.
ರಾಜ್ ನಾಥ್ ಜೊತೆ ಮೋದಿ ಭೇಟಿ: ಭಾನುವಾರ ಪಕ್ಷದ ನೂತನ ರಾಷ್ಟ್ರಾಧ್ಯಕ್ಷ ರಾಜ್ ನಾಥ್ ಸಿಂಗ್ ಅವರ ಜೊತೆ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ್ದು ಮಹತ್ವದ ಬೆಳವಣಿಗೆಯಾಗಿತ್ತು.
ಮೋದಿ ಹೆಸರನ್ನು ಎನ್ ಡಿಎ ಮಿತ್ರ ಪಕ್ಷ ಜೆಡಿಯು ಬೆಂಬಲಿಸದಿದ್ದರೆ ಅದು ಅತ್ಯಂತ ಕೆಟ್ಟ ನಿರ್ಣಯವಾಗಲಿದೆ. ಜೆಡಿಯು ಅತ್ಯಂತ ಹಳೆಯ ಹಾಗೂ ನಂಬಿಕಾರ್ಹ ಮಿತ್ರ ಪಕ್ಷವಾಗಿದೆ ಎಂದು ಸಿನ್ಹಾ ಹೇಳಿದರು.
ಒಂದು ವೇಳೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದರೆ, ಜೆಡಿಯು, ಎನ್ ಡಿಎ ಮಿತ್ರ ಪಕ್ಷವಾಗಿ ಉಳಿಯುವುದಿಲ್ಲ ಎನ್ನಲಾಗಿದೆ. ಆದರೆ, ಒಂದು ಪಕ್ಷ ಹೋದರೆ ಇನ್ನೊಂದು ಬರುತ್ತದೆ. ಆದರೆ, ಮಿತ್ರ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳುವ ಮೊದಲು ಮೂಲ ಪಕ್ಷದ ಹುಳುಕು ಸರಿಪಡಿಸಿಕೊಳ್ಳಬೇಕಿದೆ ಎಂದು ಸಿನ್ಹಾ ಮಾರ್ಮಿಕವಾಗಿ ಉತ್ತರಿಸಿದರು.
ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜ್ನಾಥ ಸಿಂಗ್ ಅವರನ್ನು ಇದೇ ಮೊದಲ ಬಾರಿಗೆ ಭಾನುವಾರ ಇಲ್ಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಾನು ಹೇಗೆ ಕಾರ್ಯನಿರ್ವಹಿಸಬೇಕು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸಲಹೆ ಸೂಚನೆ ಕೊಡಿ' ಎಂದು ರಾಜ್ನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿದೆ ಎಂದಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಬಿಜೆಪಿಯ ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ರಾಜ್ನಾಥ್ ಸಿಂಗ್ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.












Click it and Unblock the Notifications