ಕ್ಯಾಮೆರಾ ಕಣ್ಣಿನಲ್ಲಿ ರಂಗುರಂಗಿನ ಕುಂಭಮೇಳ
ಗಂಗಾ, ಯಮುನಾ ಮತ್ತು ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿ ಸಂಗಮವಾದ ಅಲಹಾಬಾದ್ನಲ್ಲಿ 55 ದಿನಗಳ ಮಹಾ ಕುಂಭಮೇಳ ಜ.27ರಿಂದ ವಿಧ್ಯುಕ್ತವಾಗಿ ಆರಂಭವಾಗುತ್ತಿದೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಹಿಂದೂಗಳ ಮಹಾ ಸಮ್ಮೇಳನಕ್ಕೆ ತ್ರಿವೇಣಿ ಸಂಗಮ ಸ್ವಾಗತದ ತಳಿರುತೋರಣ ಕಟ್ಟಿದೆ.
ಪುಷ್ಯ ಮಾಸದಲ್ಲಿ ಬರುವ ಪೌರ್ಣಿಮೆಯಂದು ಕೊರೆಯುವ ಚಳಿಯಲ್ಲಿಯೂ ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರ ಭಕ್ತಾದಿಗಳು ಮುಳುಗೆದ್ದು ಪುನೀತಭಾವ ಹೊಂದುತ್ತಾರೆ. ದೇಶ ವಿದೇಶಗಳಿಂದ ಭಕ್ತರ ಸುನಾಮಿಯೇ ಇಲ್ಲಿ ಹರಿದುಬಂದಿದೆ. ಒಂದು ಅಂದಾಜಿನ ಪ್ರಕಾರ, ಈ ಮಹಾ ಕುಂಭಮೇಳದಲ್ಲಿ 10 ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸುತ್ತಿರುವುದು ಸಮ್ಮೇಳನದ ಅಗಾಧತೆಯನ್ನು ತೋರಿಸುತ್ತದೆ.
ಬರುವ ಭಕ್ತರಿಗೆ ಉಳಿದುಕೊಳ್ಳುವ, ತಿಂಡಿತೀರ್ಥದ, ಪವಿತ್ರ ಸ್ನಾನ ಪಡೆಯುವ ಜನರ ಸುರಕ್ಷತೆಗಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಲಾಗಿದೆ. ಆದರೂ, ಇಷ್ಟೊಂದು ಜನರನ್ನು ನಿಭಾಯಿಸುವುದು ಜಿಲ್ಲಾಡಳಿಕ್ಕೆ ನಿಜಕ್ಕೂ ಒಂದು ಸವಾಲೇ ಸರಿ. ಗುರುವಾರ ಅಗ್ನಿ ದುರಂತ ಸಂಭವಿಸಿದ್ದು, ಅನೇಕ ಟೆಂಟ್ಗಳು ಬೆಂಕಿಗೆ ಆಹುತಿಯಾಗಿವೆ.
ಇಂಥ ಸಣ್ಣಪುಟ್ಟ ಘಟನೆಗಳಿಗೆ ತಲೆಕೆಡಿಸಿಕೊಳ್ಳದ ಭಕ್ತರು ಮೈಮೇಲೆ ಸ್ವೆಟರು, ಶಾಲು, ತಲೆಗೆ ಮಫ್ಲರು ಸುತ್ತಿಕೊಂಡು ಟ್ರಂಕು, ಬಟ್ಟೆಯ ಗಂಟನ್ನು ಹೊತ್ತು ಸಾವಿರಾರು ಸಂಖ್ಯೆಯಲ್ಲಿ ಬಂದು ಇಲ್ಲಿ ಸೇರುತ್ತಿದ್ದಾರೆ. ಕುಂಭಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಬ್ಬರಾಗಿರುವ ನಾಗಾ ಸಾಧುಗಳು ಈ ಮಹಾಸಂಭ್ರಮಕ್ಕಾಗಿ ಕಾದು ಕುಳಿತಿದ್ದಾರೆ.
ಕ್ಯಾಮೆರಾದಲ್ಲಿ ಸೆರೆ ಹಿಡಿದಿಟ್ಟುಕೊಂಡ ಒಂದಿಷ್ಟು ಸೂಪರ್ ಎನ್ನುಂತಹ ಚಿತ್ರಗಳು ಮಾನವೀಯತೆಯ ಮಹಾಪೂರವಾದ ಮಹಾ ಕುಂಭಮೇಳದ ಸಂಭ್ರಮವನ್ನು ತೆರೆದಿಟ್ಟಿವೆ. ಅವುಗಳತ್ತ ಒಂದು ಕಣ್ಣು ಹಾಯಿಸೋಣ ಬನ್ನಿ. ಅಲ್ಲಿ ಹೋಗಿರುವ ಕನ್ನಡಿಗರು ಮಾತ್ರ 'ಗಂಗಾ ಯಮುನಾ ಸಂಗಮ ಈ ಪ್ರೇಮ, ಕೆನೆ ಹಾಲು ಜೇನು ಸೇರಿದಂತೆ ಈ ಬದುಕು' ಎಂದು ಅಣ್ಣಾವ್ರ ಹಾಡು ಹೇಳಿಕೊಂಡು ಮುಳುಗು ಹಾಕಲು ಮರೆಯಬಾರದು.

ಸಾಧುಗಳಿಂದ ಗಣರಾಜ್ಯೋತ್ಸವ ಆಚರಣೆ
ನಾವು ಎಲ್ಲಿದ್ದರೇನು ಅಲ್ಲೇ ಗಣರಾಜ್ಯೋತ್ಸವ. ಜ.26ರಂದು ನೂರಾರು ಸಾಧುಗಳು ಕೈಯಲ್ಲಿ ಭಾರತದ ಪ್ಲಾಸ್ಟಿಕ್ ಬಾವುಟ ಹಿಡಿದು, ಭಾರತ್ ಮಾತಾ ಕೀ ಜೈ ಎಂದು ಜೈಜೈಕಾರ ಹೇಳಿ ಉಲ್ಲಾಸದಿಂದ ಗಣರಾಜ್ಯೋತ್ಸವ ಆಚರಿಸಿದರು.

ಭಿಕ್ಷಾಟನೆಗೆ ಹೊರಟ ಸಾಧುಗಳು
ಮೈತುಂಬ ಕಾವಿಬಟ್ಟೆ, ಮುಖದ ಮೇಲೆಲ್ಲ ಬೂದಿ ಬಳಿದುಕೊಂಡ, ಕತ್ತಿನ ತುಂಬ ರುದ್ರಾಕ್ಷಿ ಧರಿಸಿರುವ ವಿಶಿಷ್ಟ ವೇಷಧಾರಿ ಸಾಧುಗಳು ಪ್ರತಿದಿನ ಬೆಳಿಗ್ಗೆ ಬಂಬಂ ಭೋಲೇನಾಥನನ್ನು ಗುಣಗಾನ ಮಾಡುತ್ತ, ಕೈಯಲ್ಲಿ ಮರದಿಂದ ತಯಾರಿಸಿದ ಪಾತ್ರೆ ಹಿಡಿದು ಭಿಕ್ಷಾಟನೆಗೆ ಹೊರಡುತ್ತಾರೆ.

ಈ ಸಾಧುಗಳೇನು ನಿರಕ್ಷರಕುಕ್ಷಿಗಳಾ?
ವಿಚಿತ್ರ ಮತ್ತು ವಿಶಿಷ್ಟ ಜೀವನಶೈಲಿ ರೂಢಿಸಿಕೊಂಡಿರುವ ಈ ಸಾಧುಗಳು ಅನಕ್ಷರಸ್ಥರು ಎಂದು ತಿಳಿದಿದ್ದರೆ ತಿದ್ದಿಕೊಳ್ಳುವುದು ಉತ್ತಮ. ಇವರು ಬರೀ ಸಾಧುಗಳಲ್ಲ, ಇವರು ಸಾಧಕರು. ಇಲ್ಲಿ ನೋಡಿ ಅಪ್ಡೇಟ್ ಸಾಧುವೊಬ್ಬರು ಟಿಪ್ ಟಾಪಾಗಿ ಲ್ಯಾಪ್ಟಾಪ್ ಹಿಡಿದುಕೊಂಡು ಒನ್ಇಂಡಿಯಾದಲ್ಲಿ ಏನೇನು ಬರೆದಿದ್ದಾರೆ ಎಂದು ಉಳಿದವರಿಗೆ ತೋರಿಸುತ್ತಿದ್ದಾರೆ.

ಬಂತು ಬಂತು ಭಕ್ತಾದಿಗಳ ಸುನಾಮಿ
ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತಿರುವ ಈ ಮಹಾಮೇಳದಲ್ಲಿ ಭಾಗವಹಿಸಲು ಹತ್ತಿರದ ಸ್ಥಳಗಳಿಂದ ಸಾವಿರಾರು ಭಕ್ತಾದಿಗಳು ಸಾಮಾನು ಸರಂಜಾಮು ಹೊತ್ತು ಬರುತ್ತಿರುವುದು. ಇಲ್ಲಿನ ವ್ಯವಸ್ಥೆ ಅವಸ್ಥೆಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ ಇವರು ತಮ್ಮ ರಕ್ಷಣೆಯನ್ನು ತಾವೇ ನೋಡಿಕೊಂಡರೆ ಸಾಕು, ಸಮ್ಮೇಳನ ಯಶಸ್ವಿಯಾದಂತೆ.

ದಂಪತಿಗಳಿಗೆ ವೇಣಿದಾನದ ಸಂಭ್ರಮ
ಗಂಗಾ ನದಿತಟದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿರುವ ದಂಪತಿಗಳಿಬ್ಬರು ಹಣೆಗೆ ಮಂಡೋಳಿ ಕಟ್ಟಿಕೊಂಡು ವೇಣಿ(ಹೆಣ್ಣಿನ ಕೂದಲು)ದಾನದಲ್ಲಿ ತೊಡಗಿರುವುದು. ಸಾವಿರಾರು ಜನರು ತಮ್ಮ ಮಡದಿಯ ಕೂದಲ ತುದಿಯನ್ನು ಕತ್ತರಿಸುವ ಈ ಸಂಪ್ರದಾಯವನ್ನು ಇಲ್ಲಿ ಬಂದು ಆಚರಿಸುತ್ತಾರೆ.

ಇಲ್ಲಿ ಬಂದಿರುವುದು ಮನುಜರು ಮಾತ್ರವಲ್ಲ
ಈ ಮಹಾ ಕುಂಭಮೇಳದಲ್ಲಿ ಈಗಾಗಲೆ ಸಾಕಷ್ಟು ಆನೆ, ಒಂಟೆ, ಕುದುರೆಗಳು ಭಾಗಿಯಾಗಿವೆ. ವಿಶಿಷ್ಟಬಗೆಯಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿವೆ. ಈ ಚಿತ್ರ ನೋಡಿ, ಬಗೆಬಗೆಯ ಹಕ್ಕಿಗಳು ಕೂಡ ದೂರದೂರಿನಿಂದ ಈ ಮೇಳದಲ್ಲಿ ಪಾಲ್ಗೊಳ್ಳಲು ಬಂದು ಕಲರವ ಮಾಡುತ್ತಿವೆ.

ವಿದೇಶಿ ಮಹಿಳೆಯರ ಭರ್ಜರಿ ನರ್ತನ
ಸಾವಿರಾರು ಇಸ್ಕಾನ್ ಭಕ್ತರು ಕೂಡ ಕುಂಭಮೇಳದಲ್ಲಿ ಹರುಷದಿಂದ ಭಾಗವಹಿಸುತ್ತಿದ್ದಾರೆ. ತಮ್ಮ ಆರಾಧ್ಯದೈವವಾಗಿರುವ ಶ್ರೀಕೃಷ್ಣನ ಕೊಂಡಾಡುತ್ತ ನರ್ತನದಲ್ಲಿ ತೊಡಗಿರುವ ವಿದೇಶಿ ಶಿಷ್ಯೆಯರು ಮೈಮರೆತು ಆನಂದದಿಂದ ಕುಣಿದಾಡುತ್ತಿರುವುದು.

ರುದ್ರಾಕ್ಷಿ ತಯಾರಿಸುತ್ತಿರುವ ಸಾಧು
ಅಲಹಾಬಾದಿನಲ್ಲಿ ರುದ್ರಾಕ್ಷಿಗಳಿಗೆ ಭಾರೀ ಬೇಡಿಕೆ. ಸಾಧುಸಂತರು ಮಾತ್ರವಲ್ಲ ಭಕ್ತರು ಕೂಡ ಪವಿತ್ರ ರುದ್ರಾಕ್ಷಿ ಸರವನ್ನು ಧರಿಸುತ್ತಾರೆ. ಉದ್ದ ಜಟೆಬಿಟ್ಟುಕೊಂಡ ಸಾಧುವೊಬ್ಬ ರುದ್ರಾಕ್ಷಿ ಸರವನ್ನು ಪೋಣಿಸುವುದರಲ್ಲಿ ನಿರತನಾಗಿರುವುದು.

ಕೃಷ್ಣಾ ನೀ ಬೇಗನೆ ಬಾರೋ
ಇಸ್ಕಾನ್ ಕೃಷ್ಣ ಭಕ್ತರು ಡೋಲು ಬಾರಿಸಿಕೊಂಡು, ತಾಳ ಹಾಕಿಕೊಂಡು ಕೃಷ್ಣ ಪರಮಾತ್ಮನ ತೊಡಗಿದ್ದರೆ, ಖಾದಿ ಸೀರೆಯುಟ್ಟ ವಿದೇಶಿ ಮಹಿಳೆಯೊಬ್ಬಳು 'ಕೃಷ್ಣ ನೀ ಬೇಗನೆ ಬಾರೋ' ಎಂದು ಹಾಡಿಕೊಂಡು ನೃತ್ಯದಲ್ಲಿ ತೊಡಗಿದ್ದಾಳೆ.

ಆನೆಯ ಮೇಲೆ ನಾಲ್ವರು ಸಾಧುಗಳ ಕಂಡೆ
ಆನೆಯನ್ನು ಸಾಕಿರುವವರಿಗೆ ಭರ್ಜರಿ ಕಾಸು. ಆನೆಯನ್ನು ಸಿಂಗಾರ ಮಾಡಿ ಇಲ್ಲಿಗೆ ಬಂದಿರುವ ಭಕ್ತರಿಂದ ಕಾಸು ಇಸಿದುಕೊಂಡು ಆಶೀರ್ವಾದ ಮಾಡಿಸುತ್ತಾರೆ. ಇಲ್ಲೊಬ್ಬ ನಿರಾಭರಣ ಸುಂದರಿ ಸಾಧುಗಳನ್ನು ಸಂಜೆಯ ವಾಯುವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾಳೆ.

ನಮಸ್ಕಾರ ಮಾಡೋದು ಹೀಗೆ ಅಲ್ವಾ?
ದೇಶಿ ಭಕ್ತಾದಿಗಳ ಜೊತೆ ಸಾವಿರಾರು ಸಂಖ್ಯೆಯಲ್ಲಿ ವಿದೇಶಿಯರು ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಈ ಸಂಭ್ರಮವನ್ನು ನೋಡಲು ಗಂಗಾ ತೀರದಲ್ಲಿ ನೆರೆದಿದ್ದಾರೆ. ವಿದೇಶಿ ಮಹಿಳೆಯೊಬ್ಬಳು ನಮಸ್ಕಾರ ಮಾಡುವುದು ಹೀಗೆ ಅಲ್ಲವೆ ಎಂದು ಸಂಗಾತಿಯನ್ನು ಕೇಳುತ್ತಿರುವುದು.

ಪವಿತ್ರ ಸ್ನಾನಕ್ಕೆ ತ್ರಿವೇಣಿ ಸಂಗಮ ಸಜ್ಜು
ಜ.27ರ ಮುಂಜಾನೆ ಸೂರ್ಯ ಹುಟ್ಟುವ ಸಮಯದಲ್ಲಿ ಸಾವಿರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಮಾಘ ಪೂರ್ಣಿಮೆಯ ಪವಿತ್ರ ಸ್ನಾನಕ್ಕೆ ಸಜ್ಜಾಗಿರುತ್ತಾರೆ. ಭಕ್ತಾದಿಗಳ ಸುರಕ್ಷತೆಯಾಗಿ ಜಿಲ್ಲಾಡಳಿತ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಾಲ್ತುಳಿತ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಜನರು ಅಡ್ಡಾಡಲು ತಾತ್ಕಾಲಿಕ ಸೇತುವೆಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ.

ಕಮಾಂಡೋಗಳ ಕದಂತಾಲ್
ಹತ್ತು ಕೋಟಿ ಜನ ಒಂದೆಡೆ ಸೇರೋದಂದ್ರೆ ಸುಮ್ನೇನಾ? ಸುರಕ್ಷತೆಯ ಎಷ್ಟೇ ಕ್ರಮ ತೆಗೆದುಕೊಂಡರೂ ಕಡಿಮೆಯೆ. ಇನ್ನು ಇಂಥ ಮಾನವಸಾಗರದ ಮೇಲೆ ಉಗ್ರರ ಕರಿನೆರಳು ಬೀಳದೆ ಇರುತ್ತದೆಯೆ? ಏನೇ ಆಗಲಿ ಮುಂಜಾಗ್ರತೆಗೆಂದು ಕಮಾಂಡೋಗಳನ್ನು ಇಲ್ಲಿ ನಿಯೋಜಿಸಲಾಗಿದೆ. ಶುಕ್ರವಾರ ಕಮಾಂಡೋಗಳ ತುಕುಡಿ ದೈನಂದಿನ ಮಾರ್ಚ್ ಪಾಸ್ಟ್ ನಲ್ಲಿ ತೊಡಗಿದೆ.












Click it and Unblock the Notifications