ಲಂಚ: ಮಾಜಿ ಸಿಎಂ ಚೌತಾಲಾಗೆ 10 ವರ್ಷ ಜೈಲು

ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನ್ಯಾಯಾಲಯವೊಂದು ಅಪರೂಪದ ತೀರ್ಪು ನೀಡಿದೆ. ಅಧಿಕಾರದಲ್ಲಿದ್ದಾಗ ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ್ದರೂ ಎಲ್ಲವನ್ನೂ ಜೀರ್ಣಿಸಿಕೊಂಡು ಶಿಕ್ಷೆ ಅನುಭವಿಸದೆ ಪಾರಾಗುತ್ತಿದ್ದ ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ ತಮ್ಮ ಇಳಿವಯಸ್ಸಿನಲ್ಲಿ ಕೊನೆಗೂ ಜೈಲು ಶಿಕ್ಷೆ ಪ್ರಾಪ್ತಿಯಾಗಿದೆ.
ಸಾಮಾನ್ಯವಾಗಿ ಜೈಲು ಶಿಕ್ಷೆ 7 ವರ್ಷದ್ದಾಗಿರುತ್ತದೆ. ಆದರೆ ಪ್ರಕರಣದಲ್ಲಿ ರೋಹಿಣಿ ಸಿಬಿಐ ಕೋರ್ಟ್ ಚೌತಾಲಾಗೆ 10 ವರ್ಷದ ಶಿಕ್ಷೆಯನ್ನು ವಿಧಿಸಿದೆ. ಗಮನಾರ್ಹವೆಂದರೆ ಪ್ರಕರಣದಲ್ಲಿ ಚೌತಾಲಾ ಅಪ್ಪ-ಮಗ ಇಬ್ಬರೂ ಜೈಲುಪಾಲಾಗಿದ್ದಾರೆ.
ಒಟ್ಟು 62 ಮಂದಿ ಆರೋಪ ಹೊರಿಸಲಾಗಿತ್ತು. ಅವರ ಪೈಕಿ 6 ಮಂದಿ ಅಸುನೀಗಿದ್ದಾರೆ. ಒಬ್ಬರನ್ನು ದೋಷಮುಕ್ತಗೊಳಿಸಲಾಗಿದೆ. ತಪ್ಪಿತಸ್ಥರ ಪಟ್ಟಿಯಲ್ಲಿ 16 ಮಂದಿ ಮಹಿಳೆಯರೂ ಇದ್ದಾರೆ. ಅಂದಿನ ಸಿಎಂ ಚೌತಾಲಾ ಸೇರಿದಂತೆ 53 ಮಂದಿಯ ವಿರುದ್ಧ ಮೇಲ್ನೋಟಕ್ಕೆ ಆರೋಪ ಸಾಬೀತಯಾಗಿತ್ತು.
ಜತೆಗೆ ಹಗರಣದ ನಡೆದ ಸಮಯದಲ್ಲಿ ಶಿಕ್ಷಣ ಸಚಿವನಾಗಿದ್ದ ವಿದ್ಯಾಧರ್, ಐಎಎಸ್ ಅಧಿಕಾರಿಗಳೂ ಸೇರಿದಂತೆ ಅನೇಕ ಉನ್ನತಾಧಿಕಾರಿಗಳಿಗೆ ಈಗ ಶಿಕ್ಷೆ ನೀಡಲಾಗಿದೆ. ದಿಲ್ಲಿ ಸಿಬಿಐ ಕೋರ್ಟ್ ಇಂದು ಬೆಳಗ್ಗೆ ತೀರ್ಪು ಪ್ರಕಟಿಸುತ್ತಿದ್ದ ಚೌತಾಲಾ ಅಭಿಮಾನಿಗಳು ಕೋರ್ಟ್ ಆವರಣದಲ್ಲಿ ಧಾಂದಲೆಯೆಬ್ಬಿಸಿದ್ದಾರೆ.
ಈ ಆರೋಪಿಗಳು 1999ರಲ್ಲಿ 3,206 ಮಂದಿ ಕಿರಿಯ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರವೆಸಗಿದ್ದರು. ಆರೋಪಿಗಳು ಅಭ್ಯರ್ಥಿಯಿಂದ ತಲಾ 3-4 ಲಕ್ಷ ರೂ. ಲಂಚ ಪಡೆದಿದ್ದರು. ಈ ಬಗ್ಗೆ ಸಿಬಿಐ 2008 ರಲ್ಲಿ ಜಾರ್ಜ್ ಶೀಟ್ ಸಲ್ಲಿಸಿತ್ತು.












Click it and Unblock the Notifications