ಶುಕ್ರವಾರದೊಳಗೆ ಸಂಪುಟಕ್ಕೆ ರಾಜೀನಾಮೆ: ಶೋಭಾ

ಆದರೂ ಯಡಿಯೂರಪ್ಪನವರಿಗೆ ಯಾಕೋ ಅದು ಪಸಂದಾಗಲಿಲ್ಲ. 'ಈಗ್ಲೇ ಬೇಡ. ಮುಂದೆ ನಾನೇ ಹೇಳ್ತೀನಿ ಆವಾಗ ಬನ್ನಿ' ಎಂದು ಯಡಿಯೂರಪ್ಪನವರು ಶೋಭಾರನ್ನು ಸಮಾಧಾನಪಡಿಸಿದ್ದರು. ಹಾಗೆ ನೋಡಿದರೆ ಕೆಜೆಪಿ ಆರಂಭದ ದಿನಗಳಲ್ಲಿ ಯಡಿಯೂರಪ್ಪನವರು ಈ ಮಾತನ್ನು ಕನಿಷ್ಠ 70 ಮಂದಿ ಶಾಸಕ/ಸಚಿವರಿಗಾದರೂ ಆಗ ಹೇಳಿದ್ದರು.
ಆದರೆ ಕೆಲವೇ ದಿನಗಳಲ್ಲಿ ಚಿತ್ರಣವೇ ಬದಲಾಗು ಹೋಗಿದೆ. ಈಗ ಆ ಎಪ್ಪತರಲ್ಲಿ ಯಾರೊಬ್ಬರೂ ಅವರತ್ತ ಸುಳಿಯುತ್ತಿಲ್ಲ. ಎಂತೆಂಥಾ ಕಟ್ಟಾಳುಗಳು ಅಂತೀರಿ. ರಾಜಕೀಯ ಕಾರಣ/ಸಮೀಕರಣಗಳೇನೂ ಇದ್ದರೂ ಕನಿಷ್ಠ ಯಜಮಾನರಿಂದ ಉಪಕೃತರಾದ ಕಾರಣಕ್ಕಾದರೂ ಈ ಮಂದಿ ಇಷ್ಟೊತ್ತಿಗಾಗಲೇ ಅವರ ಕೈಹಿಡಬೇಕಿತ್ತು. ಆದರೆ ಒಬ್ಬ ಶೋಭಾ ಹೊರತುಪಡಿಸಿ ಬೇರೆ ಯಾರೂ ಜಗ್ಗುತ್ತಿಲ್ಲ.
ಆದರೆ ಶೋಭಾ ಮೇಡಂ ಮಾತ್ರ ಇಗೋ 'ನಾ ಬಂದೆ, ನಾ ನೋಡ್ದೆ, ನಾ ಗೆದ್ದೆ' ಎನ್ನುವ ಧಾಟಿಯಲ್ಲಿ ಬಿಜೆಪಿ ವರಾಂಡಾದಲ್ಲಿ ನಿಂತು, ಹೊಸಿಲು ದಾಟಲು ಸದಾ ಸಿದ್ಧವಾಗಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಈ ಘಳಿಗೆಯಲ್ಲಿ ಎಷ್ಟು ದಿನಾ ಅಂತ ಹೀಗೆ ಈ ಮನೆಯಲ್ಲಿರುವುದು. ನನಗೂ ಸಾಕಾಗಿದೆ. ಯಡಿಯೂರಪ್ಪನೋರ ಇಶಾರೆಗಾಗಿ ಕಾಯುತ್ತಿರುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ.
ಅಷ್ಟೇ ಅಲ್ಲ ಮತ್ತೊಬ್ಬ ಕಟ್ಟಾ ಆರೆಸ್ಸಿಸ್ಸಿಗ, ಸಚಿವ ಸುರೇಶಕುಮಾರ್ ಅವರ ವಿರುದ್ಧವೇ ಅವರದೇ ಗುಹೆಯಲ್ಲಿ (ರಾಜಾಜಿನಗರ) ಸೆಣಸಾಡಲು ನಿರ್ಧರಿಸಿರುವಂತಿದೆ. ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಪ್ರಮುಖರೊಬ್ಬರ ಮನೆಯಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಕ್ಷೇತ್ರ ವ್ಯಾಪ್ತಿಯ ಮೂವರು ಬಿಬಿಎಂಪಿ ಸದಸ್ಯರು 150ಕ್ಕೂ ಹೆಚ್ಚು ಪ್ರಭಾವಿ ಕಾರ್ಯಕರ್ತರು ಪಾಲ್ಗೊಂಡಿದ್ದ ಸಭೆಯಲ್ಲಿ ಅವರು ಹೀಗೆ ಹೇಳಿದ್ದಾರೆ.
ಶುಕ್ರವಾರದೊಳಗೆ ಸಂಪುಟಕ್ಕೆ ರಾಜೀನಾಮೆ: 'ಅಪ್ಪಾಜಿ (ಯಡಿಯೂರಪ್ಪ) ಅವರು ಯಾವಾಗ ಗ್ರೀನ್ ಸಿಗ್ನಲ್ ನೀಡುತ್ತಾರೋ ಅವತ್ತೇ ರಾಜೀನಾಮೆ ನೀಡ್ತೇನೆ. ಸಚಿವ ಸ್ಥಾನದ ಜವಾಬ್ದಾರಿಯಿಂದ ವಿಮುಖಳಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಕೆಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ. ನೀವೆಲ್ಲಾ ನನ್ನ ಜತೆಗೆ ನಿಲ್ಲುವ ಭರವಸೆ ಕೊಟ್ಟರೆ ರಾಜಾಜಿನಗರದಿಂದಲೇ ಸ್ಪರ್ಧಿಸುವೆ' ಎಂದೂ ತಮ್ಮ ನಿಲುವು ಪ್ರಕಟಿಸಿದ್ದಾರೆ ಶೋಭಾ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಶುಕ್ರವಾರದೊಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಶೋಭಾ ಪ್ರಕಟಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications