ಕಟ್ಟಾಳುಗಳು ಬಿಎಸ್ವೈ ಜತೆ ಹೋಗದಿರಲು ಕಾರಣವೇನು?

ಯಡಿಯೂರಪ್ಪ ಅವರಿಂದ ಉಪಕೃತರಾದ ಈ 70 ಶಾಸಕರು ಸೇರಿದಂತೆ ಇನ್ನೂ ಅನೇಕಾನೇಕ ನಾಯಕರ ಪೈಕಿ ಯಾರೊಬ್ಬರೂ ಯಡಿಯೂರಪ್ಪ ಕಡೆ ಹೋಗಲು ಮನಸ್ಸು ಮಾಡುತ್ತಿಲ್ಲ. ಸೋಮಣ್ಣನೇ ಇರಬಹುದು, ಕತ್ತಿಯೇ ಇರಬಹುದು. ಆದರೆ ಅವರಿಗೆಲ್ಲ ರಾಜಕೀಯ ಆಸಕ್ತಿಗಿಂತ ಬೇರೆಯದ್ದೇ ಭಯ ಕಾಡುತ್ತಿದೆ. ಹಾಗಾಗಿ ಯಡಿಯೂರಪ್ಪ ಅವರತ್ತ ಸುಳಿಯುತ್ತಿಲ್ಲ.
ಹಾಗೆಂದು ಇವರಿಗೆ ಯಡಿಯೂರಪ್ಪ ಬಗ್ಗೆ ನಿಷ್ಠೆ ಕಡಿಮೆಯಾಗಿದೆ ಎಂದಲ್ಲ. 'ಇಂದಿಗೂ ಯಡಿಯೂರಪ್ಪನವರೇ ನಮ್ಮ ನಾಯಕರು' ಎಂದು ಇವರ ಪೈಕಿ ಅನೇಕ ಮಂದಿ ಪ್ರಮಾಣ ಮಾಡಿ ಹೇಳಬಲ್ಲರು. ಆದರೂ... ಉಹುಃ ಯಡಿಯೂರಪ್ಪ ಜತೆಗೆ ಮಾತ್ರ ಹೋಗಲೊಲ್ಲರು. 'ಯಾಕೆ ಯಡಿಯೂರಪ್ಪ ಹಠವಾದಿ, ಸಿಡುಕ. ಅವರ ಜತೆ ಏಗೋದು ಕಷ್ಟ ಅಂತಲಾ?' ಅಂದರೆ ಉಹುಃ ಅದೂ ಅಲ್ಲ ಎಂಬುದು ತಿಳಿದುಬರುತ್ತದೆ.
'ಮತ್ತೆ ನಿಮ್ಮ ಗೋಳು ಇನ್ನೇನು ಅದಾದರೂ ಹೇಳಿ' ಅಂದರೆ ಆಗ ಅನಾವರಣವಾಗುವ ಕಾರಣವೇ ಬೇರೆ. ಆ ಕಾರಣ ಏನು, ಕಾರಣೀಭೂತರಾಗಿರುವ ವ್ಯಕ್ತಿ ಯಾರು ಎಂಬುದನ್ನು ಧೈರ್ಯವಾಗಿ ಬಹಿರಂಗವಾಗಿ ಹೇಳಲು ಯಡಿಯೂರಪ್ಪ ಕಟ್ಟಾಳುಗಳು ಹಿಂಜರಿಯುತ್ತಾರಾದರೂ ಒಬ್ಬೊಬ್ಬರೇ ಪಿಸುಮಾತಿನಲ್ಲಿ ಹೇಳುತ್ತಾರೆ.
'ಅದೇ ಆಯಮ್ಮಾ ಇದ್ದಾಳಲ್ಲಾ, ಶೋಭಾ. ಆವರಿಂದಾಗಿ ನಾವು ಯಡಿಯೂರಪ್ಪ ಅವರ ಜತೆ ಹೋಗೊಕೆ ಆಗುತ್ತಿಲ್ಲ' ಅನ್ನುತ್ತಿದ್ದಾರೆ. 'ಅಯ್ಯೋ ಶಿವನೇ! ಶೋಭಾ ಮತ್ತು ಯಡಿಯೂರಪ್ಪ ಅವರದು ಪ್ರೈವೇಟ್ ಪ್ರಾಬ್ಲಂ. ಅದಕ್ಕೂ-ನಿಮ್ಮ ಯಡಿಯೂರಪ್ಪ ಸಂಬಂಧಕ್ಕೂ ಏನು ತ್ರಾಸು ಎಂದು ಕೇಳಿದರೆ'
'ಅಯ್ಯೋ ವಿಷಯ ಅದಲ್ಲಾ. ಈಯಪ್ಪ ಯಡಿಯೂರಪ್ಪ ಇದ್ದಾರಲ್ಲಾ ಅವರು ಮುಂದೊಂದು ದಿನ ಶೋಭಾ ಕರಂದ್ಲಾಜೆಯನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುವುದರಲ್ಲಿ ನಮಗೆ ಯಾವುದೇ ಅನುಮಾನ ಉಳಿದಿಲ್ಲ' ಎಂದು ಹಾವು ತುಳಿದವರಂತೆ ಬೆಚ್ಚಿಬೀಳುತ್ತಾರೆ.
ಹಾಗಾಗಿ, 'ನಾವೆಲ್ಲ ಎಷ್ಟು ಸೀನಿಯರ್ಸ್. ನಾಳೆ ದಿನ ಆಯಮ್ಮನ ಮುಂದೆ ಕೈಕಟ್ಟಿ ನಿಲ್ಲೋಕಾಗ್ತದಾ? ಅದಕ್ಕೇ ಆ ಸಹವಾಸವೇ ಬೇಡ ಅಂತ ಅತ್ತ ತಲೆ ಹಾಕ್ತಿಲ್ಲ. ಯಜಮಾನ್ರು ಮುಖ್ಯಮಂತ್ರಿ ಪದವಿಯಿಂದ ಇಳಿದಾಗ ಇಂತಹುದೇ ಪರಿಸ್ಥಿತಿ ಉದ್ಭವಿಸಿತ್ತು. ಶೋಭಾರನ್ನ ಸಿಎಂ ಮಾಡಲು ತುದಿಗಾಲಲ್ಲಿ ನಿಂತಿದ್ದರು. ಆಗ್ಲೇ ಇದೇ 70 ಶಾಸಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು' ಎಂದೆಲ್ಲಾ ಕಟ್ಟಾಳುಗಳು ಹೇಳುತ್ತಾರೆ.
ಇದು 70 ಶಾಸಕ ನಿಷ್ಠೆಯ ಪ್ರಶ್ನೆಯಲ್ಲ, ಖುದ್ದು ಯಡಿಯೂರಪ್ಪ ಅವರ ಮಕ್ಕಳೂ ಶೋಭಾ ಬಗ್ಗೆ ಕಿಡಿಕಾರಿದ್ದಾರೆ.
ಶೋಭಾ-ಯಡಿಯೂರಪ್ಪ ಜೋಡಿಗೆ ಈ ವಿಷಯ ಗೊತ್ತಿಲ್ಲಾ ಅಂತೇನೂ ಇಲ್ಲ. ಆದರೆ ಹೆಣ್ಣುಮಗಳು ಶೋಭಾಗೆ ಕೈಕೊಡಲು ಯಡಿಯೂರಪ್ಪ ಸುತರಾಂ ಸಿದ್ಧರಿಲ್ಲ. ಇಂಟರೆಸ್ಟಿಂಗ್ ಅಂದರೆ ಈ ಸೂಕ್ಷ್ಮಗಳನ್ನೆಲ್ಲ ಅರಿತಿರುವ ಶೋಭಾ ಮೇಡಂ 'ಆಯ್ತು ಬಿಡಿ ನನ್ನಿಂದಾಗಿ ನೀವೇಕೆ ಈ ಅವಕಾಶವನ್ನು ಕಳೆದುಕೊಳ್ಳುತ್ತೀರಿ. ಒಟ್ನಲ್ಲಿ ನಾನು ರಾಜಕೀಯವಾಗಿ ಕಾಣಿಸಿಕೊಳ್ಳಬಾರದು ಅಷ್ಟೇ ತಾನೇ. ಅದ್ಕೇ ನಾನು ಚುನಾವಣೆಯಲ್ಲೇ ನಿಲ್ಲೋಲ್ಲ. ರಾಜಕೀಯ ಸನ್ಯಾಸ ತಗೋಂಬಿಟ್ಟು ನಿಮ್ಮ ಹಿಂದೆಯೇ ಇರುತ್ತೇನೆ' ಎಂದು ಯಡಿಯೂರಪ್ಪ ಮುಂದೆ ಹೇಳಿದ್ದಾರೆ.
ಆದರೆ ಯಾವೊಬ್ಬ ಯಡಿಯೂರಪ್ಪ ನಿಷ್ಠನೂ ಇದನ್ನು ನಂಬುವ ಸ್ಥಿತಿಯಲ್ಲಿಲ್ಲ. ಶ್ರಮಪಟ್ಟು ನಾಳೆ ದಿನ ನಾವು ಗೆದ್ದು ಬಂದು ಮೆಜಾರಿಟಿಗೆ ಬಂದರೆ ಮತ್ತೆ ಯಡಿಯೂರಪ್ಪ ಮನಸ್ಸು ವಾಲಿದರೆ, ನಮ್ಮ ಗತಿಯೇನು. ಅದಕ್ಕೆ ಆ ರಾಮಾಯಣವೇ ಬೇಡ ಎಂದು ಶೋಭಾ ಅವರಿಂದಾಗಿ ವನವಾಸದಲ್ಲಿರಲು ಬಯಸಿದ್ದಾರೆ.
ಇದನ್ನೆಲ್ಲಾ ನೋಡಿದಾಗ 'ಯಡಿಯೂರಪ್ಪ ದುರಂತ ನಾಯಕ' ಆಗಿಬಿಡುತ್ತಾರಾ? ಎಂಬ ಪ್ರಶ್ನೆ ಕಾಡುತ್ತದೆ. ಕಾಲವೇ ನಿರ್ಣಯಿಸಬೇಕು.












Click it and Unblock the Notifications