ದಿಲ್ಲಿ ರೇಪ್: ಬಾಯ್ ಫ್ರೆಂಡ್ ಮಾತು ಕೇಳಿಸಿಕೊಳ್ಳಿ

ಅದಕ್ಕೂ ಮುನ್ನ ಒಂದು ಪ್ರಾಥಮಿಕ ವರದಿ: 28 ವರ್ಷದ ಈ ಯುವಕನೇ ಈಗ ಪ್ರಕರಣದ ಏಕೈಕ ಸಾಕ್ಷಿ. ಮತ್ತು ಅಪರಾಧಿಗಳನ್ನು ನೇಣುಗಂಬಕ್ಕೇರಿಸುವುದಕ್ಕೆ ಮಹತ್ತರ ಸಾಕ್ಷಿ ನುಡಿಯಬೇಕಾದವ. ಈತನ ತಂದೆ ಉತ್ತರ ಪ್ರದೇಶದಲ್ಲಿ ಖ್ಯಾತ ಲಾಯರ್. ಅಂದು ರಾತ್ರಿ ಸಾಕೇತ್ ನಲ್ಲಿ ಇಬ್ಬರೂ ನೋಡಿದ ಸಿನಿಮಾ 'ಲೈಫ್ ಆಫ್ ಪೈ'. ಇನ್ನು ಈತ ಐಎಎಸ್ ಪಾಸು ಮಾಡಲು ನಾಲ್ಕು ವರ್ಷದಿಂದ ವ್ಯಾಸಂಗ ಮಾಡುತ್ತಿರುವ ಸಾಫ್ಟ್ ವೇರ್ ಇಂಜಿನಿಯರ್.
ಈ ಮಧ್ಯೆ, ತಮ್ಮ ಮಗನ ಚಿಕಿತ್ಸೆಗೆ ಸರಕಾರ ಒಂದು ಪೈಸೆಯೂ ನೀಡಿಲ್ಲ. ಔಪಚಾರಿಕವಾಗಿಯಾದರೂ ಸರಕಾರದ ಕಡೆಯಿಂದ ಉಪಚರಿಸಲು ಯಾರೂ ಬಂದಿಲ್ಲ ಎಂದು ಪಾಂಡೆ ತಂದೆ ಅಲವತ್ತುಕೊಂಡಿದ್ದಾರೆ. ಇದೇ ವೇಳೆ, ಸರಕಾರಿ ವೆಚ್ಚದಲ್ಲಿ ಬಾಧಿತಳನ್ನು ಸಿಂಗಾಪುರಕ್ಕೆ ಕರೆದೊಯ್ದಿದ್ದ ಸರಕಾರ ಮೃತಳ ಕುಟುಂಬಕ್ಕೆ 15 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದೆ. ಜತೆಗೆ, ಆಕೆಯ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ನೌಕರಿ ನೀಡುವ ಭರವಸೆ ನೀಡಿದೆ.
23 ವರ್ಷದ ಫಿಸಿಯೋಥೆಪಿಸ್ಟ್ ಅಮಾನತ್ @ನಿರ್ಭಯಾ@ ದಾಮಿನಿಯ ಬಾಯ್ ಫ್ರೆಂಡ್ ಅವೀಂದ್ರ ಪಾಂಡೆ ಇಡೀ ವೃತ್ತಾಂತವನ್ನು ಹೀಗೆ ಬಿಚ್ಚಿಟ್ಟಿದ್ದಾನೆ:
ಘಟನೆ ನಡೆದ ದಿನ ನಾವು 20 ರೂಪಾಯಿ ಕೊಟ್ಟು ಬಸ್ ಹತ್ತಿದ್ದೆವು. ಬಸ್ನಲ್ಲಿ 6 ಜನರ ತಂಡ ನಮ್ಮ ಮೇಲೆ ದಾಳಿ ಮಾಡಿದ್ದಲ್ಲದೆ, ನನ್ನ ಸ್ನೇಹಿತೆ ಮೇಲೆ ಅತ್ಯಾಚಾರ ಮಾಡಿತು. ಬಳಿಕ ನಮ್ಮಿಬ್ಬರನ್ನು ಬಸ್ನಿಂದ ಹೊರಗೆಸೆದು ಹಾಕಿತು. ಈ ವೇಳೆ ಆಕೆಯ ಮೈಮೇಲೆ ಬಸ್ ಹತ್ತಿಸುವ ಯತ್ನವನ್ನೂ ಮಾಡಲಾಯಿತು. ಆದರೆ ನಾನು ಅದನ್ನು ತಪ್ಪಿಸಿದೆ.
ಈ ಹೊತ್ತಿನಲ್ಲಿ ನಮ್ಮ ಮೈಮೇಲೆ ಬಟ್ಟೆ ಕೂಡಾ ಇರಲಿಲ್ಲ. ನಾನು ಸಹಾಯಕ್ಕಾಗಿ ಯಾಚಿಸಿದರೂ ಸುಮಾರು ಮುಕ್ಕಾಲು ಗಂಟೆಯಾದರೂ ಯಾರು ಬರಲಿಲ್ಲ. ದ್ವಿಚಕ್ರದವರು, ಆಟೋದವರು, ಕಾರುಗಳು ಯಾವುದೂ ನಮ್ಮನ್ನು ನೋಡಿ ನಿಲ್ಲಿಸಲಿಲ್ಲ. ಸ್ವಲ್ಪ ಸ್ಲೋ ಮಾಡಿ, ಹಾಗೇ ಭರ್ರನೇ ಹೊರಟುಹೋದವು.
ಕೊನೆಗೆ ಮೂರು ಪೊಲೀಸ್ ವ್ಯಾನ್ ಬಂದಿತಾದರೂ, ಅವರು ಇದು ಯಾವ ಠಾಣೆ ವ್ಯಾಪ್ತಿಗೆ ಸೇರಬೇಕೆಂಬ ಚರ್ಚೆಯಲ್ಲಿ ತೊಡಗಿದರೇ ಹೊರತು ನಮ್ಮ ಸಹಾಯಕ್ಕೆ ಧಾವಿಸಲಿಲ್ಲ. ಕೆಲ ಸಮಯದ ಬಳಿಕ ಆ್ಯಂಬುಲೆನ್ಸ್ ಬಂತು. ಈ ವೇಳೆ ಸ್ನೇಹಿತೆಯನ್ನು ಎತ್ತಲೂ ಪೊಲೀಸರು ಸಹಾಯ ಮಾಡಲಿಲ್ಲ. ಕೊನೆಗೆ ಯಾರೋ ಆ್ಯಂಬುಲೆನ್ಸ್ನ ಬಟ್ಟೆ ಕೊಟ್ಟರು. ಅದನ್ನೇ ಮುಚ್ಚಿ ಸ್ನೇಹಿತೆಯನ್ನು ವ್ಯಾನ್ನಲ್ಲಿ ಮಲಗಿಸಿದೆ.
ಬಳಿಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಬದಲು ದೂರದ ಆಸ್ಪತ್ರೆಗೆ ಸೇರಿಸುವ ಮೂಲಕ ಬಹಳಷ್ಟು ಸಮಯ ಹಾಳು ಮಾಡಲಾಯಿತು. ಆಸ್ಪತ್ರೆಯಲ್ಲಿಯೂ ನಮ್ಮನ್ನು ಯಾರೂ ಮಾತನಾಡಿಸಲೇ ಇಲ್ಲ. ಕೊನೆಗೆ ಯಾರದ್ದೋ ಮೊಬೈಲ್ ಬಳಸಿ ನಾನು ನಮ್ಮ ಪರಿಚಯದವರಿಗೆ ಫೋನ್ ಮಾಡಿದೆ. ಅವರು ಬಂದ ಮೇಲಷ್ಟೇ ನಮಗೆ ಚಿಕಿತ್ಸೆ ಆರಂಭವಾಯಿತು.
ಅದಕ್ಕೂ ಮುನ್ನ, ಅರ್ಧ ಗಂಟೆ ಕಾಲ ಬಸ್ಸಿನಲ್ಲಿ ನಡೆದಿದ್ದನ್ನು ಹೇಳಲು ನನ್ನಿಂದ ಸಾಧ್ಯವಾಗದು. ನಮ್ಮದು ನರಕಯಾತನೆಯಾಗಿತ್ತು. ನಾನು ನನ್ನ ಸ್ನೇಹಿತೆಯನ್ನು ಉಳಿಸಿಕೊಳ್ಳಲು ಆಗಲಿಲ್ಲವಲ್ಲಾ ಎಂಬ ಕೊರಗು ನನಗಿದೆ. ದೆಹಲಿ ಆಸ್ಪತ್ರೆಯಲ್ಲಿದ್ದಾಗ ನನ್ನ ಸ್ನೇಹಿತೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುತ್ತಾ, 'ಆ ಪಾಪಿಗಳನ್ನು ಗಲ್ಲಿಗೇರಿಸಬೇಡಿ. ಜೀವಂತ ಸುಟ್ಟು ಹಾಕಿಬಿಡಿ' ಎಂದು ಕೋರಿದಳು.












Click it and Unblock the Notifications