ಕಾಂಗ್ರೆಸ್ ಶಾಸಕ ಚಿಂಚನಸೂರ್ ಬಳಿ ಸಿಕ್ತು ಚಿನ್ನದ ಚೇರು

ಶಾಸಕ ಬಾಬುರಾವ್ ಅವರ ಯಾದಗಿರಿ, ಗುಲ್ಬರ್ಗ, ಬೀದರ್ ನ ಹುಮ್ನಾಬಾದಿನಲ್ಲಿ ಅಲ್ಲದೆ ಬೆಂಗಳೂರಿನ ನಿವಾಸಗಳ ಮೇಲೆ ಏಕ ಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಹುಮ್ನಾಬಾದಿನಲ್ಲಿರುವ ದಾಲ್ ಫ್ಯಾಕ್ಟರಿ, ಚಿತ್ತಾಪುರದ ಶಿಕ್ಷಣಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ಚಿಂಚನಸೂರ್ ಅವರ ಅಳಿಯ ಅವರ ಮನೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವಿವರಗಳನ್ನು ಡಿವೈಎಸ್ಪಿ ಅಶ್ವಿನಿ ಅವರು ನೀಡಿದ್ದು, ಅಸಮಗ್ರ ಆಸ್ತಿ ಮೌಲ್ಯ ಸುಮಾರು 12.92 ಕೋಟಿ ರು ಮೀರುತ್ತದೆ. [ಆಸ್ತಿ ಎಣಿಕೆ ಜಾರಿಯಲ್ಲಿದೆ ಇಲ್ಲಿರುವ ವಿವರಗಳು ಅಪೂರ್ಣ]
* ಗಾಲಿ ಜನಾರ್ದನ ರೆಡ್ಡಿ ನಂತರ ಬಾಬುರಾವ್ ಚಿಂಚನಸೂರ್ ಅವರ ಮನೆಯಲ್ಲೂ ಬಂಗಾರ ಲೇಪಿತ ಕುರ್ಚಿ ಸಿಕ್ಕಿದೆ. ಎರಡು ಗೋಲ್ಡ್ ಕೋಟೆಡ್ ಕಾಸ್ಟ್ ಐರನ್ ಚೇರುಗಳು ಕಂಡು ಬಂದಿದೆ.
* ಫೋರ್ಡ್ ಎಂಡವರ್, ಸುಮಾರು 22 ಲಕ್ಷ ಮೌಲ್ಯದ ಪಜೇರೋ ಕಾರು(ಪತ್ನಿ ಹೆಸರಿನಲ್ಲಿದೆ)
* 8.94 ಲಕ್ಷ ರು ಮೌಲ್ಯದ ನಗದು
* ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ 50 ಲಕ್ಷ ಮೌಲ್ಯದ ಫ್ಲಾಟ್
* ಬೀದರ್, ಹುಮ್ನಾಬಾದಿನಲ್ಲಿ 4 ಕಾರ್ಖಾನೆಗಳು
* ಗುಲ್ಬರ್ಗಾ, ಬೀದರ್ ನಲ್ಲಿ ಪತ್ನಿ ಅಮರೇಶ್ವರಿ ಹೆಸರಿನಲ್ಲಿ ಜಮೀನು
* * 100 ಕ್ಕೂ ಅಧಿಕ ಎಕರೆ ಫಲವತ್ತಾದ ಕೃಷಿ ಭೂಮಿ
* ಗುಲ್ಬರ್ಗಾದಲ್ಲಿ 30 ಲಕ್ಷ ಮೌಲ್ಯದ ಮನೆ
* ವಿವಿಧ ಬ್ಯಾಂಕ್ ಗಳಲ್ಲಿ 12 ಕ್ಕೂ ಅಧಿಕ ಖಾತೆ ವಿವರ ಸಿಗಬೇಕಿದೆ
* ಶಕ್ತಿ ದಾಲ್ ಫ್ಯಾಕ್ಟರಿಯಲ್ಲಿ 6 ಲಕ್ಷ ಮೌಲ್ಯದ ಕಬ್ಬಿಣ ದಾಸ್ತಾನು
* 25 ಲಕ್ಷ ರು ಮೌಲ್ಯದ ಗೃಹಪಯೋಗಿ ವಸ್ತುಗಳು ಪತ್ತೆ
ಈ ನಡುವೆ ಲೋಕಾಯುಕ್ತ ದಾಳಿ ಬಗ್ಗೆ ಪ್ರತಿಕ್ರಿಸಿದ ಶಾಸಕ ಚಿಂಚನಸೂರ್, ಇದು ರಾಜಕೀಯ ಷಡ್ಯಂತ್ರ, ಸುಳ್ಳು ಆಪಾದನೆ ಮಾಡಿದ್ದಾರೆ. ನಾನು ಯಾರಿಗಾಗಿ ಆಸ್ತಿ ಮಾಡಲಿ. ನನಗೆ ಪ್ರಜರೇ ದೇವರು. ಜನರಿಗಾಗಿ ನಾನು ದುಡಿಯುತ್ತಿದ್ದೇನೆ. ಕಾನೂನಿಗೆ ತಲೆಬಾಗುತ್ತೇನೆ ಎಂದಿದ್ದಾರೆ.
ಶಾಸಕ ಚಿಂಚನಸೂರ್ ಅವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಲೋಕಾಯುಕ್ತ ನ್ಯಾ. ಎನ್ ಕೆ ಸುಧೀಂದ್ರ ರಾವ್ ಅವರು ಬುಧವಾರ (ನ.28) ಆದೇಶಿಸಿದ್ದರು.
ಸಿಆರ್ ಪಿಸಿ 156(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ತನಿಖಾ ವರದಿ ಸಲಿಸಲು ಜನವರಿ 9, 2013 ಕೊನೆ ದಿನಾಂಕವಾಗಿದೆ.
ಯಾದಗಿರಿ ಜಿಲ್ಲೆಯ ಗುರುಮಿಟಕಲ್ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ಬಾಬುರಾವ್ ಚಿಂಚನಸೂರ್ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ಶಾಂತಪ್ಪ ಖಾನಳ್ಳಿ ಎಂಬ ವಕೀಲರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆಗಸ್ಟ್ 24, 2012ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ (ನ.28) ನಡೆದು ಮೇಲ್ಕಂಡ ತೀರ್ಪು ಹೊರ ಬಿದ್ದಿತ್ತು.
2008ರಲ್ಲಿ ಬಾಬು ರಾವ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿ ವಿವರ ಇಲ್ಲಿದೆ: ನಂ.125, ಶಾಂತಿ ನಗರ, ಎಂಎಸ್ ಕೆ ಮಿಲ್ ರಸ್ತೆ, ಗುಲ್ಬರ್ಗಾದ ನಿವಾಸಿಯಾದ ಬಾಬುರಾವ್ ಬಸವಣ್ಣಪ್ಪ ಚಿಂಚನಸೂರು ಎಂಬ ಹೆಸರಿನ ನಾನು ಈ ಕೆಳಗಂಡಂತೆ ಆಸ್ತಿ ಹೊಂದಿದ್ದೇನೆ...
ಚರಾಸ್ತಿ; ನಗದು : 48,000 ರು
ವಾಹನ: ನಮೂದಿಸಿಲ್ಲ
ಆಭರಣ: 10,00,000 ರು ಮೌಲ್ಯದ ಆಭರಣಗಳು
ಒಟ್ಟಾರೆ: 10,48,000 ರು
ಸ್ಥಿರಾಸ್ತಿ : ಆಸ್ತಿ; ಕೃಷಿ ಭೂಮಿ : 29,00,000 ರು ಮೌಲ್ಯದ ಭೂಮಿ
ಇತರೆ: ಬ್ಯಾಂಕ್ ಗಳಲ್ಲಿ ಸಾಲ: 39,85,000
ಪ್ಯಾನ್ ಕಾರ್ಡ್ ಸಲ್ಲಿಸಿಲ್ಲ. ಇವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ. ವಕೀಲ ಶಾಂತಪ್ಪ ಅವರ ದೂರಿನ ಪ್ರಕಾರ ಶಾಸಕ ಬಾಬುರಾವ್ ಅವರ ಅಸ್ತಿ ಮೊತ್ತ ಮೇಲ್ಕಂಡ ದಾಖಲೆಯಲ್ಲಿ ಲೋಪವಿದೆ ಹಾಗೂ ಸಂಖ್ಯೆ ಮೀರಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications