ಅಪ್ರಾಪ್ತ ಬಾಲಕನ ಕೊಲೆ, ಅತ್ಯಾಚಾರ ಶಂಕೆ

ಭಾಗ್ಯವಂತಿ ಖಾಸಗಿ ಶಾಲೆಯಲ್ಲಿ ಎಲ್ ಕೆ ಜಿ ಓದುತ್ತಿದ್ದ 6 ವರ್ಷದ ಬಾಲಕ ಸುರೇಶ್ ಬಸವರಾಜ್ ಕುಂಬಾರ್ ಕಳೆದ ವರ್ಷದ ಕೊನೆಯ ದಿನ ಡಿಸೆಂಬರ್ 31ರಂದು ಸಂಜೆ 4 ಸುಮಾರಿಗೆ ಕರಡಕಲ್ ಗ್ರಾಮದಿಂದ ನಾಪತ್ತೆಯಾಗಿದ್ದ. ಈ ಕುರಿತಂತೆ ಆತನ ಪೋಷಕರು ಜನವರಿ 1 ರಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಬಾಲಕ ಕಾಣೆಯಾಗಿರುವ ದೂರು ದಾಖಲಿಸಿದ್ದರು. ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಜ.3ರಂದು ಬಾಲಕನ ಶವ ಗ್ರಾಮದ ಹೊರವಲಯದ ಪೊದೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವದ ಮೈಮೇಲೆ ಅಂಗಿ ಮಾತ್ರವಿದೆ. ಸುರೇಶನ ಕತ್ತು ಹಾಗೂ ಕೈಗಳ ಮೇಲೆ ಅಲ್ಲಲ್ಲಿ ಕಪ್ಪು ವರ್ಣಕ್ಕೆ ತಿರುಗಿದಂತೆ ಕಂಡು ಬಂದಿದೆ. ಬಾಲಕನ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಅಲ್ಲದೇ ಡಿಸೆಂಬರ್ 31ರಂದು ಗೋಡ್ರಿಹಾಳ ಮೂಲದ ಕರಡಕಲ್ ನಲ್ಲಿ ವಾಸವಿರುವ ದೇವಪ್ಪ ಎನ್ನುವವನು ಸುರೇಶನನ್ನು ಕರೆದುಕೊಂಡು ಹೋಗಿದ್ದನ್ನು ಅದೇ ಗ್ರಾಮದ ಕೆಲವರು ನೋಡಿದ್ದಾಗಿ ಹೇಳಿದ್ದಾರೆ. ಆ ನಂತರ 3 ದಿನ ಕಳೆದ ಮೇಲೆ ಬಾಲಕ ಲೈಂಗಿಕ ದೌರ್ಜನ್ಯಕ್ಕೊಳಗಾದ ರೀತಿಯಲ್ಲಿ ಶವವಾಗಿ ಸಿಕ್ಕಿದ್ದರಿಂದ ದೇವಪ್ಪ ಎಂಬಾತಲೇ ಸುರೇಶನನ್ನು ಲೈಂಗಿಕ ಕೃತ್ಯವೆಸಗಿ ಅಮಾನುಷವಾಗಿ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.
ದೇವಪ್ಪನನ್ನು ಕೆಂಭಾವಿ ಪೊಲೀಸರು ಬಂಧಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 366 ಹಾಗೂ 377ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ಶವದ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಬಾಲಕ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆದಿದೆಯೋ ಇಲ್ಲವೆ ಎಂಬ ಕುರಿತು ಗೊತ್ತಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ರೂಪಾ ಹೇಳಿದ್ದಾರೆ. ಈ ನಡುವೆ ಬಂಧಿತ ಆರೋಪಿಯನ್ನೂ ಕೂಡಾ ವೈದ್ಯಕೀಯ ಪರೀಕ್ಷೆ ಒಳಪಡಿಸುವುದಾಗಿ ಅವರು ಹೇಳುತ್ತಾರೆ.
ಅವರ ಪ್ರಕಾರ, ಆರೋಪಿ ದೇವಪ್ಪ ಈ ಹಿಂದೆ 2011ರಲ್ಲಿ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ. ಆ ಕೇಸಿನ ವಿಚಾರಣೆ ಬಾಕಿ ಹಂತದಲ್ಲಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ರೂಪಾ. ಇಬ್ಬರು ಮಕ್ಕಳ ಪೈಕಿ ಒಬ್ಬನನ್ನು ಕಳೆದುಕೊಂಡಿರುವ ಬಸವರಾಜ್ ದಂಪತಿಗಳು ಕುಸಿದು ಹೋಗಿದ್ದಾರೆ. ತಮಗೆ ಕರಡಕಲ್ ಗ್ರಾಮದಲ್ಲಿ ಶತ್ರುಗಳಿಲ್ಲ ಆದರೂ ತಮ್ಮ ಹೀಗೆ ಸಾವನ್ನಪ್ಪಿದ್ದಾನೆ ಎಂದು ಕಣ್ಣೀರಿಡುತ್ತಾರೆ.












Click it and Unblock the Notifications