ದುಡ್ಡಿನಾಸೆಗೆ ಮಕ್ಕಳ ಕದ್ದು ಮಾರುತ್ತಿದ್ದ ವೈದ್ಯೆ ಬಲೆಗೆ

ಖಾಸಗಿ ಟಿವಿ ವಾಹಿನಿಯ ಕುಟುಕು ಕಾರ್ಯಾಚರಣೆಯ ಮೂಲಕ ದುರಾಸೆಯ ವೈದ್ಯೆಯ ಹಗರಣವನ್ನು ಬಯಲಿಗೆಳೆಯಲಾಗಿದೆ. ಈ ಕುಟುಕು ಕಾರ್ಯಾಚರಣೆಯಲ್ಲಿ ಮಹಿಳಾ ಸಬ್-ಇನ್ಸ್ಪೆಕ್ಟರನ್ನು ಮಗು ಕೊಳ್ಳಲು ಬಂದ ಮಹಿಳೆಯನ್ನಾಗಿ ಬಳಸಿಕೊಂಡು ಈ ನಾಟಕದ ಸೂತ್ರಧಾರಿಯನ್ನು ಬಂಧಿಸಲಾಗಿದೆ.
ಖತರನಾಕ್ ವೈದ್ಯೆ ಪರ್ವೀನ್ ಪ್ರಕಾಶ್ ನೀಲಸಂದ್ರದಲ್ಲಿ ಗೆಟ್ ವೆಲ್ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಆಕೆ ಅಲ್ಲಿ ಹುಟ್ಟುವ ಮಕ್ಕಳನ್ನು ಮಾರಿ ಹಣ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆಕೆಯ ಬಂಧನಕ್ಕೆ ಬಲೆ ಬೀಸಲಾಗಿತ್ತು. ಅಶೋಕನಗರ ಪೊಲೀಸರು ಆಕೆಯ ಮಗ ಅರ್ಶ್ ಎಂಬಾತನನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.
ನೀಲಸಂದ್ರದ ನಾಗರಿಕರು ಗೆಟ್ ವೆಲ್ ಆಸ್ಪತ್ರೆಯನ್ನು 'ಗರ್ಭಪಾತ ಕೇಂದ್ರ' ಎಂದೇ ಬಣ್ಣಿಸುತ್ತಾರೆ. ವೈದ್ಯೆ ತಾಯಂದಿರನ್ನು ಯಾಮಾರಿಸಿ ದುಡ್ಡಿಗಾಗಿ ಮಾರುತ್ತಿದ್ದಾಳೆ ಎಂಬ ಬಗ್ಗೆ ಕೂಡ ದೂರುಗಳು ಬಂದಿದ್ದವು. ಇದು ಹೊಸದೇನೂ ಅಲ್ಲ, ಅನೇಕ ವರ್ಷಗಳಿಂದ ಆಕೆ ಈ ದಂಧೆ ನಡೆಸುತ್ತಿದ್ದಾಳೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ತನ್ನ ಆಸ್ಪತ್ರೆಯಲ್ಲಿ ಮಾತ್ರವಲ್ಲ, ಆಗಾಗ ವಾಣಿ ವಿಲಾಸ್ ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ ಮಕ್ಕಳನ್ನು ಕದಿಯುತ್ತಾಳೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರ ವಾಣಿ ವಿಲಾಸ್ ಆಸ್ಪತ್ರೆಯಿಂದ ಕಾಣೆಯಾಗಿದ್ದ ಗಂಡುಮಗುವೇ ಗೆಟ್ ವೆಲ್ ಆಸ್ಪತ್ರೆಯಲ್ಲಿ ಸಿಕ್ಕಿದ ಮಗು ಎಂಬುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದ ದೇವನಹಳ್ಳಿಯ ಪಾಲಕರನ್ನು ಕರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications