ರಾಜಧಾನಿ ದೆಹಲಿ ಪ್ರಭಾವ: ನಗರದಲ್ಲಿ ಅಪೂರ್ವ ಭದ್ರತೆ

ಮೊನ್ನೆ ವೈಕುಂಠ ಏಕಾದಶಿಯಂದು ಶಿವರಾತ್ರಿ ಜಾಗರಣೆ ಆಚರಿಸಿದ ಗೃಹ ಸಚಿವರೂ ಆದ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ರಾಜಧಾನಿಯಲ್ಲಿ ಸಿಟಿ ರೌಂಡ್ಸ್ ಮಾಡಿದ್ದಾರೆ. 'ಯಾವುದೇ ಛಾನ್ಸ್ ತೆಗೆದುಕೊಳ್ಳುವುದಕ್ಕೆ ನಾವು ಸಿದ್ಧರಿಲ್ಲ. ಜನತೆ ಅದರಲ್ಲೂ ಹೆಣ್ಣುಮಕ್ಕಳ ಯೋಗಕ್ಷೇಮ ನಮಗೆ ಮುಖ್ಯವಾಗಿದೆ' ಎಂದು ಕಳಕಳಿ ವ್ಯಕ್ತಪಡಿಸಿರುವ ಅಶೋಕ್ ಅವರು ಎಚ್ಚರದಿಂದಿರುವಂತೆ ತಮ್ಮ ಪೊಲೀಸ್ ಇಲಾಖೆಗೆ ತಾಕೀತು ಮಾಡಿದ್ದಾರೆ.
ಭದ್ರಕೋಟೆಯಾದ ಬೆಂಗಳೂರು: ಹಾಗಾಗಿ ನಗರದ ಪ್ರಮುಖ ತಿರುವು, ಆಯಕಟ್ಟಿನ ವೃತ್ತಗಳಲ್ಲಿ ಬ್ಯಾರಿಕೇಡ್ ಗಳನ್ನು ನಿಲ್ಲಿಸಿ, ಅಲ್ಲಲ್ಲಿ ಇಬ್ಬರು ಪಿಸಿಗಳನ್ನು ಕಣ್ಗಾವಲಿಗೆ ಹಾಕಿದ್ದಾರೆ. 'ವರ್ಷಾಂತ್ಯ, ಕ್ರಿಕೆಟ್ ಮ್ಯಾಚು, ಕ್ರಿಸ್ ಮಸ್, ಹೊಸ ವರ್ಷಾಚರಣೆ ಹೀಗೆ ಎಲ್ಲವೂ ಮೇಳೈಸಿವೆ. ಆದ್ದರಿಂದ ಜನಸಂದಡಿ ಹೆಚ್ಚಾಗಿಯೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಜನರಿಗೆ ಭದ್ರತೆಯ ಭರವಸೆ ನೀಡುವುದು ನಮ್ಮ ಆದ್ಯ ಕರ್ತವ್ಯ' ಎಂದು ಗೃಹ ಸಚಿವ ಅಶೋಕ್ ನುಡಿದಿದ್ದಾರೆ.
'ಸರಕಾರ ಬೇರೆ ತನ್ನ ಅಂತಿಮ ದಿನಗಳಲ್ಲಿದೆ. ಈ ಹೊತ್ತಿನಲ್ಲಿ ಯಾವುದೇ ಅಚಾತುರ್ಯ, ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು' ಎಂದು ಬಯಸಿರುವ ಸರಕಾರ ರಾಜ್ಯದ ಇತರೆ ಭಾಗಗಳಲ್ಲೂ ಕಟ್ಟೆಚ್ಚರ ವಹಿಸಿದೆ.
ಜತೆಗೆ, ಮೂರ್ನಾಲ್ಕು ದಿನದಿಂದ ಚಳಿ ಹೆಚ್ಚಾಗಿದ್ದು, ಚಳಿ ತಣಿಸಲು ಗುಂಡುಪ್ರಿಯರು ಗುಂಡಿನ ಮೊರೆಹೋಗುತ್ತಿದ್ದಾರೆ. ಆದರೆ ಗುಂಡು ಹಾಕಿ ನೇರವಾಗಿ ರಸ್ತೆಗಿಳಿದು ವಾಹನ ಚಲಾಯಿಸುವ, ಅಥವಾ ಅಂಕೆತಪ್ಪಿದ ಹೆಜ್ಜೆ ಹಾಕುವವರ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ. ಇನ್ನು ಹೊಯ್ಸಳ, ಚೀತಾ ಗಸ್ತು ಹೆಚ್ಚಿಸಲಾಗಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ.
ಮಹಿಳೆಯರ ಸುರಕ್ಷತೆ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಕೆಲಸದ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸಬೇಕು. ರಾತ್ರಿ ವೇಳೆ ಆಟೋ, ಕ್ಯಾಬ್ ಸೇರಿದಂತೆ ವಾಹನಗಳ ತಪಾಸಣೆ ನಡೆಸಬೇಕು. ಅಗತ್ಯವಾದರೆ ಕ್ಯಾಬ್ಗಳಿಗೆ ಜಿಪಿಎಸ್ ಅಳವಡಿಕೆಗೂ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ, ಹೆಚ್ಚುವರಿ ಆಯುಕ್ತ (ಕಾನೂನು ಮತ್ತು ಶಾಂತಿ ಸುವ್ಯವಸ್ಥೆ) ಟಿ ಸುನೀಲ್ ಕುಮಾರ್, ಜಂಟಿ ಆಯುಕ್ತ (ಕಾನೂನು) ದಯಾನಂದ್ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ ಭದ್ರತೆ) ಎಂಎ ಸಲೀಂ ಈ ಸಂದರ್ಭದಲ್ಲಿ ಗೃಹ ಸಚಿವರ ಜತೆಗಿದ್ದರು.












Click it and Unblock the Notifications